ಕಡತ ವಿಲೇವಾರಿ ವಿಳಂಬ ಬೇಡ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ
ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಬೆಂಗಳೂರು, ಮೇ 16: ರಾಜ್ಯ ಸರಕಾರದ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನ, ನಿಗದಿತ ಅವಧಿಯೊಳಗೆ ಅನುದಾನವನ್ನು ಖರ್ಚು ಮಾಡಬೇಕು. ಕಡತ ವಿಲೇವಾರಿಗೆ ವಿಳಂಬ ನೀತಿ ಅನುಸರಿಸದೆ, ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂದು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರಕಾರದ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಗಳು ಹಾಗೂ ಜಿ.ಪಂ.ಸಿಇಓಗಳ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಸರಕಾರ ಜನಪರ, ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಲು, ನುಡಿದಂತೆ ನಡೆಯಲು, ಮುಂಗಡ ಪತ್ರದಲ್ಲಿ ಘೋಷಿಸಿದ ಯೋಜನೆಗಳು ಅನುಷ್ಠಾನಗೊಂಡು ಅವು ಯಶಸ್ವಿ ಯಾಗಲು ಆಯಾ ಇಲಾಖೆ ಮುಖ್ಯಸ್ಥರ ಮೇಲೆ ಜವಾಬ್ದಾರಿ ಇರುತ್ತದೆ. ಆದುದರಿಂದ ಅಧಿಕಾರಿಗಳು ಎಲ್ಲ ಯೋಜನೆಗಳನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಿದರೆ ಜನರಿಗೂ ಅದರಿಂದ ಉಪಯೋಗ ಆಗುತ್ತದೆ ಎಂದು ಸೂಚಿಸಿದರು.
ಇಲಾಖೆಗಳ ನಡುವೆ ಪರಸ್ಪರ ಸಹಕಾರ ಅಗತ್ಯ. ಒಂದು ಇಲಾಖೆ ಮತ್ತೊಂದು ಇಲಾಖೆಯ ಮೇಲೆ ನೆಪ ಹೇಳಬಾರದು. ಆ ರೀತಿ ಮಾಡಿದರೆ ಯೋಜನೆಗಳ ಪ್ರಗತಿ ಕುಂಠಿತಗೊಳ್ಳುತ್ತದೆ. ಯಾವುದೇ ಸಮಸ್ಯೆಯಿದ್ದರೆ ನನ್ನ ಗಮನಕ್ಕೆ ತರಬೇಕು. ಅದು ಬಿಟ್ಟು ಕುಂಟು ನೆಪಗಳನ್ನು ಹೇಳಬಾರದು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬಿಗಿ ಬರಲು ನಾವೆಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
ಕಂದಾಯ, ಪೊಲೀಸ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಗಳೊಂದಿಗೆ ಜನರು ಹೆಚ್ಚು ಸಂಪರ್ಕ ಇರಿಸಿಕೊಂಡಿರುತ್ತಾರೆ. ಆದುದರಿಂದ ಈ ಇಲಾಖೆಗಳು ಉತ್ತಮ ಆಡಳಿತ ಕೊಟ್ಟರೆ ಸಾರ್ವಜನಿಕರಲ್ಲಿ ಸರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ ಎಂದು ಸಿದ್ದರಾಮಯ್ಯ ನುಡಿದರು.
ಲಂಚ ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ. ಕಾರಣವಿಲ್ಲದೆ ಕಡತಗಳನ್ನು ವಿಲೇವಾರಿ ಮಾಡದೆ ಇರುವುದೂ ಭ್ರಷ್ಟಾಚಾರವೇ. ಇದರಿಂದ ಜನರು ತೊಂದರೆಗೆ ಒಳಗಾಗುತ್ತಾರೆ. ನಿಮಗೆಲ್ಲ ಆಡಳಿತದಲ್ಲಿ ಅನುಭವವಿದೆ. ಆಡಳಿತ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಡತಗಳನ್ನು ತ್ವರಿತವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಸೂಚಿಸಿದರು.
ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರಕಾರ ಅನುದಾನ ನೀಡು ತ್ತದೆ. ಕಾಲಮಿತಿ ಯೊಳಗೆ ಅನುದಾನ ಸದ್ಬಳಕೆಯಾಗಬೇಕು. ಇಲ್ಲದಿದ್ದರೆ ಅದೂ ಕ್ರಿಮಿನಲ್ ಅಪರಾಧ. ಆದುದರಿಂದ ಎಲ್ಲ ಕಾರ್ಯಕ್ರಮಗಳ ಜಾರಿಗೆ ಮೊದಲೇ ಕ್ರಿಯಾ ಯೋಜನೆ ಸಿದ್ಧ ಮಾಡಿಕೊಳ್ಳಿ ಎಂದರು.
ಆಯಾ ಇಲಾಖೆ ಕಾರ್ಯದರ್ಶಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಮಾತ್ರವಲ್ಲ, ಜನ ಸಾಮಾನ್ಯರ ಬಳಿಗೆ ಹೋಗಬೇಕು. ಆಸ್ಪತ್ರೆ, ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಕೊಡಬೇಕು. ಕರ್ತವ್ಯದಲ್ಲಿ ಲೋಪ ಎಸಗುವ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸಬೇಕು. ಆ ರೀತಿ ಮಾಡಿದರೆ ಆಡಳಿತದಲ್ಲಿ ಇನ್ನಷ್ಟು ಶಿಸ್ತು ಬರಲಿದೆ. ಇದರಿಂದ ಕೆಳಹಂತದ ಅಧಿಕಾರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳಿಗೆ ಆಗಾಗ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ಜೊತೆಗೆ ಒಂದು ದಿನ ಅಲ್ಲಿಯೇ ಇದ್ದು ಜಿಲ್ಲೆಯ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡಬೇಕು ಎಂದ ಅವರು, ಯಾವುದೇ ಕಾರ್ಯಕ್ರಮದ ಅನುಷ್ಠಾನಕ್ಕೆ ಅಧಿಕಾರಿಗಳು ಮೊದಲೇ ವೇಳಾಪಟ್ಟಿ ಹಾಕಿಕೊಳ್ಳಬೇಕು. ಜನರಿಗೆ ಅನುಕೂಲ ಆಗುವಂತೆ ಅವರ ವಿಶ್ವಾಸಗಳಿಸುವಂತೆ ಕೆಲಸ ಮಾಡಬೇಕು. ಆಗ ಸರಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.