ಗೊ.ರು.ಚ. ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ತೀರ್ಮಾನ
ಬೆಂಗಳೂರು, ಮೇ 20: ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಅಭಿವೃದ್ಧಿಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅನುಭವ ಮಂಟಪ ನಿರ್ಮಾಣ ಸೇರಿದಂತೆ ಹಲವು ಕೆಲಸ, ಕಾರ್ಯಗಳು ಬಸವ ಕಲ್ಯಾಣದಲ್ಲಿ ಆಗಬೇಕಿದೆ. ಇದಕ್ಕೆ ಬಸವೇಶ್ವರರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸಿದವರ ಮಾರ್ಗದರ್ಶನ ಬೇಕು. ಹೀಗಾಗಿ, ಗೊ.ರು.ಚನ್ನಬಸಪ್ಪಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ಎಂದು ಮುಖ್ಯಮಂತ್ರಿಯವರು ಮಂಡಳಿಯ ಆಯುಕ್ತರಿಗೆ ಸೂಚಿಸಿದರು. ಬಸವೇಶ್ವರರು ಮತ್ತು ಇತರ ಶರಣರು ರಚಿಸಿರುವ ವಚನಗಳು ಒಂದೇ ಕಡೆ ಸಿಗುವಂತೆ ವೆಬ್ಸೈಟ್ ಹೊರತನ್ನಿ ಎಂದೂ ಮುಖ್ಯ ಮಂತ್ರಿಯವರು ಆದೇಶಿಸಿದರು. ಜೊತೆಗೆ ಬಸವ ಕಲ್ಯಾಣದಲ್ಲಿ ಈ ವರ್ಷ ಆಗಬೇಕಿರುವ ಕಾಮಗಾರಿಗಳು ಮತ್ತು ಅದಕ್ಕೆ ಬೇಕಿರುವ ಅನುದಾನ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿ. ಅಗತ್ಯ ಹಣಕಾಸು ನೆರವನ್ನು ಸರಕಾರ ಕೂಡಲೇ ಒದಗಿಸಲಿದೆ ಎಂದು ಹೇಳಿದರು. ಮುಂದಿನ ಸಭೆ ಬಸವ ಕಲ್ಯಾಣದಲ್ಲಿ: ಬಸವ ಕಲ್ಯಾಣದ ಸದ್ಯದ ಪರಿಸ್ಥಿತಿ ಹೇಗಿದೆ. ಅಲ್ಲಿ ಆಗಬೇಕಾದ ಕೆಲಸಗಳೇನು ಎಂಬುದನ್ನು ಖುದ್ದಾಗಿ ನೋಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಮಂಡಳಿಯ ಮುಂದಿನ ಸಭೆಯನ್ನು ಬಸವಕಲ್ಯಾಣದಲ್ಲೇ ನಡೆಸೋಣ. ಸ್ಥಳ ಪರಿಶೀಲನೆ ಬಳಿಕ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಅವರು ಸಭೆಯಲ್ಲಿ ಘೋಷಿಸಿದರು. ತಾವು ಈ ಹಿಂದೆ ಉಪ ಮುಖ್ಯಮಂತ್ರಿ ಆಗಿದ್ದಾಗ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಘೋಷಿಸಿದ್ದನ್ನು ಅವರು ಸ್ಮರಿಸಿದರು. ಮಂಡಳಿಗೆ ತುರ್ತಾಗಿ ಅಗತ್ಯ ಇರುವ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆ ಯನ್ನು ಗುತ್ತಿಗೆ ಆಧಾರದ ಮೇಲೆ ತುಂಬಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರು. ಮಂಡಳಿ ವತಿಯಿಂದ ಈವರೆಗೆ ಕೈಗೊಂಡಿ ರುವ ಕಾಮಗಾರಿಗಳು, ಮುಂದೆ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳು ಇದೆ ಸಂದರ್ಭದಲ್ಲಿ ವಿವರಣೆ ನೀಡಿದರು. ಮಂಡಳಿ ಅಧಿಸೂಚನೆಯಲ್ಲಿ ಪ್ರಕಟಿಸಿದ 29 ಸ್ಮಾರಕ ಮತ್ತು ಪರಂಪರೆಯ ತಾಣಗಳ ಪೈಕಿ 17 ಸ್ಮಾರಕ ಮತ್ತು ತಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಕ್ಕಳ ಉದ್ಯಾನ, ಸಭಾ ಭವನ, ದಾಸೋಹ ಭವನ,ಶಾಲಾ ಕಟ್ಟಡ, ಯಾತ್ರಿ ನಿವಾಸ ಇತ್ಯಾದಿ ಪೂರಕ ಕೆಲಸ, ಕಾರ್ಯ ಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಭಿವೃದ್ಧಿಪಡಿಸಿದ ಸ್ಮಾರಕ ಮತ್ತು ತಾಣಗಳಲ್ಲಿ ಉದ್ಯಾನ, ದೀಪಾಲಂಕಾರ, ಕೂಡುರಸ್ತೆ, ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಮಾರಕಗಳನ್ನು ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪಮತ್ತು ಶಿಲ್ಪಕಲೆಯ ಶೈಲಿಯಲ್ಲಿ ನಿಖರವಾಗಿ ಕಲ್ಲುಗಳನ್ನು ಬಳಸಿ ಅಭಿವೃ ದ್ಧಿಪಡಿಸಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕರಾದ ರಾಜಶೇಖರ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಈಶ್ವರ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.