ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳ ವಿಚಾರ ಸಂಕಿರಣ
ಚಿಕ್ಕಮಗಳೂರು, ಮೇ21: ಭೂಮಿಯ ರಸಸಾರ ಸಮತೋಲನದಲ್ಲಿ ಲಘು ಪೋಷಕಾಂಶಗಳ ಪಾತ್ರ ಹಿರಿದು. ವೈಜ್ಞಾನಿಕವಾದ ನಿರ್ವಹಣೆಯಿಂದ ಕೃಷಿ ಲಾಭದಾಯಕವಾಗಿ ಮಾಡಿಕೊಳ್ಳಬಹುದು ಎಂದು ಹಿರಿಯ ಕೃಷಿ ವಿಜ್ಞ್ಞಾನಿ ಡಾ. ಎಂ.ನಾರಾಯಣಸ್ವಾಮಿ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಆಗ್ರೋಕೆಮಿಕಲ್ಸ್, ಕೊಪ್ಪದ ಮಹಿಮಾ ಆಗ್ರೋಕ್ಲಿನಿಕ್ ಮತ್ತು ಕಳಸದ ಚನ್ನಕೇಶವ ಆಗ್ರೋ ಸರ್ವಿಸ್ ಸಂಯುಕ್ತಾಶ್ರಯದಲ್ಲಿ ತಲಗೋಡು ಗ್ರಾಮದ ಹಿತ್ತಲಮಕ್ಕಿ ಗಜೇಂದ್ರ ಹೆಬ್ಬಾರ್ ಮನೆಯಂಗಳದಲ್ಲಿ ಆಯೋಜಿಸಿದ್ದ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ವಿಚಾರಸಂಕಿರಣದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.
ರೈತರ ನೆಲಪರಂಪರೆಗೆ ಅನುಗುಣವಾಗಿ ಕೃಷಿ ಪದ್ಧತಿ ಅನುಕೂಲಕರ. ಇಂದು ಕಾಫಿ ಮತ್ತು ಅಡಿಕೆಗೆ ಹೋಲಿಸಿದರೆ ಕಾಳುಮೆಣಸು ಕೃಷಿ ಲಾಭದಾಯಕವಾಗಿ ಕಾಣುತ್ತಿದೆ. ಹಾಗಾಗಿ ಬಹುತೇಕ ತೋಟಗಳಲ್ಲಿ ಕಾಳುಮೆಣಸಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಕಾಳುಮೆಣಸನ್ನು ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಆಹಾರದೊಂದಿಗೆ ಬಳಸಲಾಗುತ್ತಿದೆ. ಇದು ರುಚಿಕರ ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುವುದರಿಂದ ಸದಾಕಾಲ ಮಾರುಕಟ್ಟೆ ಇದ್ದೇ ಇರುತ್ತದೆ. ಇದನ್ನು ಕೆಲವೇ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ ಎಂಬುದು ಗಮನಾರ್ಹ.
ಗಿಡದ ಸ್ವಲ್ಪದೂರ ಮಣ್ಣು ಸಡಿಲಿಸುವುದರಿಂದ ನೀರು, ಪೋಷಕಾಂಶಗಳು ಸರಾಗವಾಗಿ ಇಳಿದು ಬೇರಿಗೆ ಸುಲಭವಾಗಿ ಸಿಗುತ್ತವೆೆ. ಬೇರನ್ನು ಸರಿಯಾಗಿ ಆರೈಕೆ ಮಾಡಿದಾಗ ಅದು ಕಾಂಡ, ರೆಂಬೆಕೊಂಬೆ, ಎಲೆಗಳನ್ನು ಪೋಷಿಸುತ್ತದೆ. ಎಲೆಗಳಲ್ಲಿ ಪತ್ರಹರಿತ್ತಿನ ರಚನೆಗೆ ಸಹಕಾರಿಯಾಗಿ ದ್ವಿತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ವಾತಾವರಣದಲ್ಲಿರುವ ಅಗತ್ಯಅಂಶಗಳು ಗಿಡಕ್ಕೆ ಆಹಾರವಾಗಿ ಪರಿವರ್ತನೆಗೊಂಡು ಇಳುವರಿ ಹೆಚ್ಚಿಸುತ್ತದೆ ಎಂದು ವಿವರಿಸಿದರು.
ವಿಚಾರ ಸಂಕಿರಣವನ್ನು ಪ್ರಗತಿಪರ ಕೃಷಿಕ ಎಂ.ಎಸ್. ದಿವಾಕರಭಟ್ ಉದ್ಘಾಟಿಸಿದರು. ಕೃಷಿ ಸಲಹೆಗಾರ ಡಾ.ಜಿ.ಎಸ್.ಮಹಾಬಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿತ್ತಲಮಕ್ಕಿಯ ಪ್ರಗತಿಪರ ಕೃಷಿಕ ಎಚ್.ಎಸ್.ಗಜೇಂದ್ರಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಯುವಕೃಷಿಕ ಎಚ್.ಜಿ.ಭರತ್ ಮಾತನಾಡಿದರು. ಕಳಸದ ಜಿ.ವಿ.ರಮೇಶ್ ಸ್ವಾಗತಿಸಿ, ಪರಿಸರವಾದಿ ಗಜೇಂದ್ರಗೊರಸು ಕೊಡುಗೆ ನಿರೂಪಿಸಿದರು. ಕೃಷಿಕ ನಾಗಭೂಷಣ್ ವಂದಿಸಿದ್ದು, ನಿವೇದಿತಾ ಪ್ರಾರ್ಥಿಸಿದರು.