ಮಳೆ ಅನಾಹುತ ತಡೆಯಲು ಪೂರ್ವಸಿದ್ಧತೆ: ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್
ಕಾರವಾರ, ಮೇ 21: ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಅಧಿಕವಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮಳೆ ಅನಾಹುತ ತಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ರವರು ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಮಳೆ ಹಾನಿ ಎದುರಿಸುವ ಕುರಿತು ಕರೆಯಲಾಗಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು. ದೇಶದಲ್ಲಿ ಶೇ. 6ರಿಂದ 8ರಷ್ಟು ಹೆಚ್ಚು ವಾಡಿಕೆ ಮಳೆಯಾಗುವ ಸಾಧ್ಯತೆಯಿದ್ದು, ಕೊಂಕಣ ಕರಾವಳಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಕರಾವಳಿ ತಾಲೂಕುಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ಅಗತ್ಯವಿದೆ. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಮಳೆಯಿಂದ ಎದುರಾಗುವ ಅಪಾಯವನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ಎಂದರು.
ಾಷ್ಟ್ರೀಯ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ನೈಸರ್ಗಿಕ ಚರಂಡಿಗಳ ಮೂಲಕ ನೀರು ಹರಿದು ಹೋಗಲು ಅಡ್ಡಿಯಾಗಿರುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ, ಎಲ್ಲಿಯೂ ನೀರು ನಿಂತು ಕೃತಕ ನೆರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಅಗಲೀಕರಣ ಕಂಪೆನಿಯ ಜವಾಬ್ದಾರಿಯುತ ಅಧಿಕಾರಿ ಪ್ರತೀ ಉಪವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ ಇದ್ದು, 24x7 ಸಂಪರ್ಕದಲ್ಲಿರಬೇಕು. ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಹಲವು ಕಡೆಗಳಲ್ಲಿ ಗುಡ್ಡಗಳನ್ನು ಕಡಿಯಲಾಗಿದ್ದು, ಮಳೆಯಿಂದ ಕುಸಿತವಾಗದಂತೆ ಈಗಲೇ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದರು.
*ಚರಂಡಿ, ಗಟಾರ ಸ್ವಚ್ಛಗೊಳಿಸಿ: ಎಲ್ಲಾ ನಗರ, ಗ್ರಾಮೀಣ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಹಾಗೂ ಗಟಾರ ಹೂಳು ತೆಗೆಯುವ ಕಾರ್ಯವನ್ನು ಆರಂಭಿಸಬೇಕು. ಕೋ
ಡಿಭಾಗ ರಸ್ತೆಯಲ್ಲಿ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ, ಮೆಡಿಕಲ್ ಕಾಲೇಜು ಬಳಿಯಿಂದ ಹಾದು ಬಂದಿರುವ ಚರಂಡಿಯನ್ನು ಸಂಪರ್ಕಿಸುವ ಕಾಮಗಾರಿಯನ್ನು ಮುಂದಿನ 15ದಿನಗಳ ಒಳಗಾಗಿ ಪೂರ್ಣ ಗೊಳಿಸಬೇಕು ಎಂದು ಡಿಸಿ ಸೂಚಿಸಿದರು.
ಬೆಳೆ ಹಾನಿ ಪರಿಹಾರ: ಮಳೆಯಿಂದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾದ ಸಂದರ್ಭದಲ್ಲಿ ತಕ್ಷಣ ಜಂಟಿ ಸಮೀಕ್ಷೆ ನಡೆಸಿ ಪರಿಹಾರವನ್ನು ಒದಗಿಸಬೇಕು. ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದು. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ನಡೆಯಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಬೋಟ್ಗಳ ಪರಿಶೀಲನೆ
: ಗ್ರಾಪಂ, ತಹಶೀಲ್ದಾರ್ಗೆ ತುರ್ತು ಸಂದರ್ಭದಲ್ಲಿ ಬೋಟ್ಗಳನ್ನು ಬಳಕೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಸದರಿ ಬೋಟ್ಗಳನ್ನು ಪರಿಶೀಲಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ಈ ಕುರಿತು ಎಲ್ಲಾ ತಹಶೀಲ್ದಾರ್ ವರದಿಯನ್ನು ನೀಡಬೇಕು. ಬೋಟ್ಗಳಿಗೆ ತುರ್ತು ಬಳಕೆಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ 200ಲೀಟರ್ ಸೀಮೆಎಣ್ಣೆ ದಾಸ್ತಾನು ಇರಿಸಲು ಕ್ರಮ ಕೈಗೊಳ್ಳಬೇಕು. ಇದೇ ರೀತಿ ಲಭ್ಯವಿರುವ ಜೆಸಿಬಿ ಯಂತ್ರಗಳು, ಅಗ್ನಿಶಾಮಕ ವಾಹನಗಳು, ಮೋಟಾರು ಯಂತ್ರಗಳ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಹೇಳಿದರು.
ಸ್ಪಂದನೆಗೆ ಸಮಯ ನಿಗದಿ: ಮಳೆ, ಗಾಳಿಯಿಂದ ಮರಗಳು, ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಪರ್ಕ ಅಡ್ಡಿಯಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಅಡ್ಡಿ ನಿವಾರಣೆಗೆ ಪ್ರತೀ ಇಲಾಖೆಗೆ ಸಮಯ ನಿಗದಿಪಡಿಸಲಾಗುವುದು. ನಿಗದಿತ ಸಮಯದ ಒಳಗೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಅಡಿ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.