ರಾಜ್ಯಸಭೆಗೆ ಜೆಡಿಎಸ್ ನಿಂದ ಬಿ .ಎಂ. ಫಾರೂಕ್ ?
ಬೆಂಗಳೂರು, ಮೇ 23 : ರಾಜ್ಯದಿಂದ ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯಾಗುವ ರೇಸಿನಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿ ಬಿ.ಎಂ. ಫಾರೂಕ್ ಅವರು ಮುಂಚೂಣಿಯಲ್ಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವದಂತಿ ಹರಡಿದೆ. ಇಂಜಿನಿಯರಿಂಗ್ ಶಿಕ್ಷಣ ಪಡೆದು ಪವನ ವಿದ್ಯುತ್, ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ದೊಡ್ಡ ಉದ್ಯಮಿಯಾಗಿರುವ ಫಾರೂಕ್ ಅವರು ಕಾಂಗ್ರೆಸ್ ಶಾಸಕ ಬಿ. ಎ. ಮೊಯ್ದಿನ್ ಬಾವಾ ಅವರ ಸೋದರ, ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ.
ಈ ಬಾರಿ ರಾಜ್ಯದಿಂದ ಕನ್ನಡಿಗರನ್ನೇ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂದು ತೀವ್ರ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್ ವರಿಷ್ಠ ದೇವೇ ಗೌಡರು ನಾವು ಕನ್ನಡಿಗರನ್ನೇ ಆಯ್ಕೆ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಳಿಕ ಫಾರೂಕ್ ಅವರ ಹೆಸರು ಚಾಲ್ತಿಗೆ ಬಂದಿದೆ. ಜೆಡಿಎಸ್ ಗೆ ಒಂದು ಸ್ಥಾನ ಖಚಿತವಿದೆ. ಈ ಹಿಂದೆಯೂ ಅದು ಉದ್ಯಮಿಗಳಿಗೆ ಮಣೆ ಹಾಕಿದೆ. ಹಾಗಾಗಿ ಈ ಬಾರಿ ರಾಜ್ಯದವರನ್ನು ಅದರಲ್ಲೂ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಜೆಡಿಎಸ್ ಕಾಂಗ್ರೆಸ್ ಹಾಗು ಸಿದ್ದರಾಮಯ್ಯನವರಿಗೆ ಸಡ್ದು ಹೊಡೆಯಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಎರಡು ಅಭ್ಯರ್ಥಿ ಮಾತ್ರ ಹಾಕಿದರೆ ಜೆಡಿಎಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ. ಕಾಂಗ್ರೆಸ್ ತನ್ನ ಬಳಿ ಇರುವ ಹೆಚ್ಚುವರಿ ಮತಗಳನ್ನು ಬಳಸಿಕೊಂಡು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚುನಾವಣೆ ನಡೆಯಲಿದೆ. ಆದರೆ ಈ ಮೂರನೇ ಅಭ್ಯರ್ಥಿ ಸೋತರೆ ರಾಜ್ಯ ಸರಕಾರಕ್ಕೆ ಮುಖಭಂಗವಾಗಲಿದೆ. ಹಾಗಾಗಿ ಆ ರಿಸ್ಕ್ ಅನ್ನು ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆಯೇ ಎಂದು ನೋಡಬೇಕಿದೆ.
ನನ್ನ ಬಗ್ಗೆ ಜೆಡಿಎಸ್ ಗೆ ಒಲವಿದೆ : ಫಾರೂಕ್
ಈ ಬಗ್ಗೆ ವಾರ್ತಾ ಭಾರತಿ ಯೊಂದಿಗೆ ಮಾತನಾಡಿದ ಫಾರೂಕ್ ಅವರ ಹೇಳಿಕೆ ಇಲ್ಲಿದೆ :
ಜೆಡಿಎಸ್ ಪ್ರಬಲ ರಾಜಕೀಯ ಪಕ್ಷ. ಮಾಜಿ ಪ್ರಧಾನಿ ದೇವೇ ಗೌಡ ಅವರು ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅಲ್ಪ ಸಂಖ್ಯಾತರಿಗೆ ಧ್ವನಿಯಾಗಿ, ಅವರಿಗೆ ಅನ್ಯಾಯವಾದಾಗ ಹೋರಾಡಿದವರು. ಅವರ ಬಗ್ಗೆ ಅಲ್ಪಸಂಖ್ಯಾತರಿಗೆ ಪ್ರೀತಿ ಇದೆ. ರಾಜ್ಯ ಸಭೆ ಹಾಗು ವಿಧಾನ ಪರಿಷತ್ ನಲ್ಲಿ ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ. ಈಗ ರಾಜ್ಯ ಸಭೆಗೆ ರಾಜ್ಯದವರನ್ನೇ ಆಯ್ಕೆ ಮಾಡಲು ಜೆಡಿಎಸ್ ಮಾತ್ರ ಒಲವು ತೋರಿಸಿದೆ. ರಾಜ್ಯದ ಹಲವು ಮಹತ್ವದ ವಿಷಯಗಳನ್ನು ರಾಜ್ಯ ಸಭೆಯಲ್ಲಿ ಚರ್ಚೆಗೆ ತರಬೇಕಾಗಿದೆ. ಹಾಗೆಯೇ ಅಲ್ಪಸಂಖ್ಯಾತರ ಬಗ್ಗೆ ಧ್ವನಿ ಎತ್ತುವ , ಅವರ ಸಮಸ್ಯೆಗಳನ್ನು ಚರ್ಚಿಸುವ ಸಮರ್ಥರು ಹೋಗಬೇಕಾಗಿದೆ. ಹಾಗಾಗಿ ಪ್ರಾತಿನಿಧ್ಯ ಕಡಿಮೆ ಇರುವ ಅಲ್ಪಸಂಖ್ಯಾತರಿಗೆ ಒಂದು ಅವಕಾಶ ನೀಡಬೇಕು ಎಂದು ಜೆಡಿಎಸ್ ಮಾತ್ರ ಮನಸ್ಸು ಮಾಡಿದೆ. ಆಯ್ಕೆಗಾಗಿ ಹಲವರು ರೇಸ್ ನಲ್ಲಿದ್ದಾರೆ. ಆದರೆ ನನಗೆ ಈ ಬಾರಿ ಜೆಡಿಎಸ್ ನಿಂದ ಅವಕಾಶ ಸಿಗುವ ವಿಶ್ವಾಸವಿದೆ. ಈ ಬಗ್ಗೆ ದೇವೇ ಗೌಡರು , ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಜೊತೆ ಚರ್ಚಿಸುತ್ತಿದ್ದಾರೆ.