×
Ad

ಪೂರ್ಣ ತೋಳಿನ ಅಂಗಿ ತೊಟ್ಟ ವಿದ್ಯಾರ್ಥಿಗಳಿಗಿರಲಿಲ್ಲ ಪ್ರವೇಶ

Update: 2016-05-23 23:08 IST

  - ಅಂಗಿಯ ಕೈ ಕತ್ತರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.
  - ಹೊಸ ನಿಯಮದ ವಿರುದ್ಧ ತೀವ್ರ ಆಕ್ರೋಶ.
  - ಮೇಲ್ವಿಚಾರಕರ ದರ್ಪದಿಂದ ಪರೀಕ್ಷೆ ವಂಚಿತಳಾದ ವಿದ್ಯಾರ್ಥಿನಿ.

ಬೆಂಗಳೂರು, ಮೇ 23: ಮೈಸೂರಿನಲ್ಲಿ ರವಿವಾರ ನಡೆದ ಐಐಟಿ-ಜೆಇಇ ಪೂರ್ವಭಾವಿ ಪರೀಕ್ಷೆಗೆ ಪೂರ್ಣ ತೋಳಿನ ಅಂಗಿ ಧರಿಸಿದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
 ಪೂರ್ಣ ತೋಳಿನ ಅಂಗಿ ಧರಿಸಿ ಬಂದ ವಿದ್ಯಾರ್ಥಿಯೊಬ್ಬನ ಪೂರ್ಣತೋಳಿನ ಅಂಗಿಯನ್ನು ಕತ್ತರಿಸಿ, ಅರ್ಧ ತೋಳು ಮಾಡಿದ ನಂತರ ಪರೀಕ್ಷೆ ಬರೆಯಲು ಅನುಮತಿ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೈಸೂರಿನ ಸದ್ವಿದ್ಯಾ ಕಾಲೇಜಿನಲ್ಲಿ ನಿಗದಿಯಾಗಿದ್ದ ಐಐಟಿ-ಜೆಇಇ ಪೂರ್ವಭಾವಿ ಪರೀಕ್ಷೆ ಬೆಳಗ್ಗೆ 9 ಗಂಟೆಗೆ ಆರಂಭಗೊಂಡಾಗ ವಿದ್ಯಾರ್ಥಿಗಳೆಲ್ಲರೂ ಕೊಠಡಿಯೊಳಗೆ ಆಗಮಿಸಿ ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು.
ಪೂರ್ಣ ತೋಳಿನ ಅಂಗಿ ಧರಿಸಿ ಹಾಜರಾಗಿದ್ದ ಅಭ್ಯರ್ಥಿಯೊಬ್ಬನಿಗೆ ಐಐಟಿ ಕನಸು ನನಸಾಗಬೇಕಾದರೆ ನೀನು ತ್ಯಾಗ ಮಾಡಲೇಬೇಕು ಎಂದು ಪರೀಕ್ಷಾ ಮೇಲ್ವಿಚಾರಕರು ಹೇಳಿದ್ದು, ಅದು ವಿದ್ಯಾರ್ಥಿಗೆ ಅರ್ಥವಾಗಲಿಲ್ಲ. ಕೊನೆಗೆ ಆತ ತನ್ನ ಪೂರ್ಣ ತೋಳಿನ ಅಂಗಿಯನ್ನು ಕತ್ತರಿಸಲು ಅನುಮತಿ ನೀಡುವ ಮೂಲಕ ಪರೀಕ್ಷೆ ಬರೆದು ಮನೆಗೆ ಮರಳಿದ್ದಾನೆ.
ಪರೀಕ್ಷೆ ವಂಚಿತೆ ವಿದ್ಯಾರ್ಥಿನಿ: ವಿದ್ಯಾರ್ಥಿನಿಯೊಬ್ಬಳು ಪೂರ್ಣತೋಳಿನ ಕುರ್ತಾ ಧರಿಸಿದ್ದಳು. ಆಕೆಯನ್ನೂ ಕೊಠಡಿಯಿಂದ ಹೊರಗೆ ಕಳುಹಿಸಿ, ವಸ್ತ್ರ ಬದಲಾಯಿಸಿ ಬರುವಂತೆ ಸೂಚಿಸಲಾಯಿತು. ಆದರೆ, ಆಕೆ ಮತ್ತೆ ಮರಳಿ ಬರಲೇ ಇಲ್ಲ. ಹತ್ತಿರ ಮನೆ ಇದ್ದ ಕೆಲವು ವಿದ್ಯಾರ್ಥಿಗಳು ಮನೆಗೆ ಹೋಗಿ ಅರ್ಧ ತೋಳಿನ ಅಂಗಿ ಧರಿಸಿ ಮತ್ತೆ ಬಂದು ಪರೀಕ್ಷೆ ಬರೆದ ಘಟನೆಗಳು ನಡೆದಿವೆ.
 ಅದೃಷ್ಟದ ಅಂಗಿ ಕತ್ತರಿಸಿದ ವಿದ್ಯಾರ್ಥಿ: ಸ್ವಲ್ಪಹೊತ್ತಿನ ಬಳಿಕ ವಿದ್ಯಾರ್ಥಿಯೊಬ್ಬ ಈ ಬಗ್ಗೆ ಮಾಹಿತಿ ಇಲ್ಲದೆ ಪರೀಕ್ಷಾ ಕೊಠಡಿಗೆ ಪೂರ್ಣ ತೋಳಿನ ಬಟ್ಟೆ ಧರಿಸಿ ಆಗಮಿಸಿದ್ದಾನೆ. ಆಗ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು, ಪೂರ್ಣತೋಳಿನ ಅಂಗಿಯ ನಿಷೇಧದ ನಿಯಮದ ಬಗ್ಗೆ ಆತನ ಗಮನಸೆಳೆದರು. ಆಗ ವಿದ್ಯಾರ್ಥಿ, ಇದು ನನ್ನ ಅದೃಷ್ಟದ ಅಂಗಿ. ಎಲ್ಲಾ ಪರೀಕ್ಷೆಗಳಿಗೂ ನಾನು ಇದನ್ನೇ ಧರಿಸುತ್ತೇನೆ. ಈ ಪರೀಕ್ಷೆಗೂ ಇದನ್ನು ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾನೆ.
ಆದರೆ, ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಆತನಿಗೆ ಅವಕಾಶ ನೀಡದೆ, ಪರೀಕ್ಷಾ ಕೊಠಡಿಯಿಂದ ಹೊರಗೆ ಕಳುಹಿಸಲಾಯಿತು. ಮನೆಗೆ ಹೋಗಿ ಅಂಗಿ ಬದಲಾಯಿಸಿ ಬಾರದ ಹೊರತು ಕೊಠಡಿಗೆ ಅನುಮತಿ ನೀಡುವುದಿಲ್ಲ ಎಂದು ಪರೀಕ್ಷಾ ಮೇಲ್ವಿಚಾರಕ ಕಡಾಖಂಡಿತವಾಗಿ ಹೇಳಿದ್ದಾರೆ. ಆದರೆ, ವಿದ್ಯಾರ್ಥಿ 25 ಕಿ.ಮೀ ದೂರದ ಎಚ್.ಡಿ.ಕೋಟೆಯಿಂದ ಬಂದಿದ್ದರಿಂದ ಮತ್ತೆ ಮನೆಗೆ ಹೋಗಿ ಅಂಗಿ ಬದಲಾಯಿಸಿ ಬರುವುದು ಅಸಾಧ್ಯವಾಗಿತ್ತು.
ಕೆಲವರು ಸಮೀಪದ ಅಂಗಡಿಯಲ್ಲಿ ಹೊಸ ಬಟ್ಟೆ ಖರೀದಿಸುವಂತೆ ಸಲಹೆ ನೀಡಿದರು. ಆದರೆ, ರವಿವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಹಾಗಾಗಿ ಈ ಯೋಚನೆಯೂ ಕೈಬಿಡಬೇಕಾಗಿ ಬಂತು.
ಆತನ ತಂದೆ ಟೀ ಶರ್ಟ್ ಧರಿಸಿ ಆತನೊಂದಿಗೆ ಬಂದಿದ್ದರು. ತಂದೆಯ ಟೀ-ಶರ್ಟನ್ನು ಮಗನಿಗೆ ನೀಡಿ ಮಗನ ಪೂರ್ಣತೋಳಿನ ಅಂಗಿಯನ್ನು ತಂದೆ ಧರಿಸುವ ಬಗ್ಗೆಯೂ ಚರ್ಚೆ ನಡೆಯಿತು. ತಂದೆಯ ಟೀ-ಶರ್ಟನ್ನು ಧರಿಸಲು ಮಗ ಸಿದ್ಧನಿದ್ದ. ಈ ಬಗ್ಗೆ ಪ್ರಯತ್ನ ನಡೆಸಿದಾಗ ತಂದೆಗೆ ಮಗನ ಶರ್ಟ್‌ನ ಅಳತೆ ಸರಿಹೊಂದುತ್ತಿರಲಿಲ್ಲ. ಮಾತ್ರವಲ್ಲ ಪರೀಕ್ಷೆ ಮುಗಿಯುವವರೆಗೂ ಇಡೀ ದಿನ ಮೈಸೂರಿನಲ್ಲಿ ಅರ್ಧ ಬೆತ್ತಲೆಯಾಗಿ ನಿಲ್ಲಲು ತಮಗೆ ಸಾಧ್ಯವಿಲ್ಲ ಎಂದು ಈ ಐಡಿಯಾವನ್ನು ಕೈಬಿಡಬೇಕಾಯಿತು.
ಇಷ್ಟೊತ್ತಿಗೆ ಸಾಕಷ್ಟು ಸಮಯ ಕೂಡ ಮೀರಿತ್ತು. ಅಲ್ಲಿದ್ದ ವ್ಯಕ್ತಿಯೊಬ್ಬರು ಪೂರ್ಣತೋಳಿನ ಅಂಗಿಯ ಕೈಗಳನ್ನು ಕತ್ತರಿಸಿ ಎಂಬ ಪುಕ್ಕಟೆ ಸಲಹೆ ನೀಡಿದರು. ಕೊನೆಗೆ ವಿದ್ಯಾರ್ಥಿ ಮತ್ತು ಆತನ ತಂದೆ ಅನಿವಾರ್ಯವಾಗಿ ಇದಕ್ಕೆ ಅನುಮತಿಸಬೇಕಾಯಿತು. ಅಂತಿಮವಾಗಿ ಪರೀಕ್ಷಾ ಅಧಿಕಾರಿಗಳು ಕತ್ತರಿ ತಂದು ಅಂಗಿಯ ಪೂರ್ಣತೋಳನ್ನು ಕತ್ತರಿಸಿದರು. ಅಮಾನವೀಯ ಮತ್ತು ಅತ್ಯಂತ ಕ್ರೂರ ನಿಯಮವೊಂದಕ್ಕೆ ವಿದ್ಯಾರ್ಥಿ ತನ್ನ ಅದೃಷ್ಟದ ಅಂಗಿಯನ್ನು ಕತ್ತರಿಸಬೇ ಕಾಯಿತು.
 ಮೇಲ್ವಿಚಾರಕರ ಸಮರ್ಥನೆ: ತಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದು ಸಿಬಿಎಸ್‌ಇ ಅಧಿಕಾರಿಗಳು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೊದಲು ವಾಚ್‌ಗೆ ನಿಷೇಧ ಹೇರಲಾಯಿತು. ಆದರೆ, ಇದೀಗ ಸಾಮಾನ್ಯ ವಾಚ್‌ಗಳನ್ನು ಕಟ್ಟಲು ಅನುಮತಿ ನೀಡಲಾಗಿದೆ. ಪೂರ್ಣತೋಳಿನ ಅಂಗಿ, ದೊಡ್ಡ ಗುಂಡಿಗಳಿರುವ ಅಂಗಿ, ಆಭರಣ, ಹೂವುಗಳನ್ನು ಧರಿಸಿರುವ ವಿದ್ಯಾರ್ಥಿಗಳನ್ನು ಒಳಗೆ ಬಿಡದಂತೆ ನಮಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಪೂರ್ಣತೋಳಿನ ಅಂಗಿ ಧರಿಸುವುದು ಯಾವ ರೀತಿಯ ನಿಯಮ ಉಲ್ಲಂಘನೆ ಹಾಗೂ ಇದರಿಂದ ಯಾವ ರೀತಿಯ ಅಕ್ರಮ ನಡೆಸಲು ಸಾಧ್ಯ ಎಂಬ ಪ್ರಶ್ನೆ ವಿದ್ಯಾರ್ಥಿ ವಲಯದಿಂದ ಕೇಳಿಬಂದಿದೆ. ಇಂತಹ ಅಸಂಬದ್ಧ ನಿಯಮಗಳ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ಚರ್ಚೆ ನಡೆಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News