×
Ad

ಕೈಬಿಡಲು ಒತ್ತಾಯಿಸಿ ಕರವೇ ಪ್ರತಿಭಟನೆ

Update: 2016-05-24 22:34 IST

ಚಿಕ್ಕಮಗಳೂರು, ಮೇ 24: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಸೂಚಿಸಿರುವ ವೆಂಕಯ್ಯ ನಾಯ್ಡುರವರ ಹೆಸರನ್ನು ಕೈಬಿಡುವಂತೆ ಬಿಜೆಪಿ ಪಕ್ಷವನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್‌ರವರ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹನುಮಂತಪ್ಪ ವೃತ್ತದ ಬಳಿ ಪ್ರತಿಕೃತಿ ದಹಿಸಿ, ವೆಂಕಯ್ಯನಾಯ್ಡುರವರ ಹೆಸರನ್ನು ಸೂಚಿಸಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ತೇಗೂರು ಜಗದೀಶ್ ಮಾತನಾಡಿ, ಬಿಜೆಪಿ ಪಕ್ಷದಿಂದ ರಾಜ್ಯ ಸಭೆ ಸದಸ್ಯರಾಗಿ ಕಳೆದ ಮೂರು ಬಾರಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡುರವರು ರಾಜ್ಯದ ನೆಲ, ಜಲ, ಗಡಿ, ಭಾಷೆ ಮತ್ತು ರೈತರ ಆತ್ಮಹತ್ಯೆ ವಿಚಾರವಾಗಿ ಇದುವರೆಗೂ ಪ್ರಸ್ತಾಪಿಸಿಲ್ಲ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಕೊಂಡು ಕನ್ನಡಿಗರ ಧ್ವನಿಯಾಗದೆ ನಾಡಿಗೆ ದ್ರೋಹ ಬಗೆಯುತ್ತಿರುವ ವೆಂಕಯ್ಯನಾಯ್ಡು ಅವರ ಹೆಸರನ್ನು ಬಿಜೆಪಿ ಈ ಬಾರಿಯೂ ರಾಜ್ಯಸಭೆಗೆ ಸೂಚಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ರಾಜ್ಯದ ಪರ ನಿಲ್ಲದ ವೆಂಕಯ್ಯನಾಯ್ಡುರವರ ಹೆಸರನ್ನು ಬಿಜೆಪಿ ಹಿಂಪಡೆದು ನಾಡಿನ ಜನತೆಯ ಕ್ಷಮೆ ಕೋರಬೇಕು. ಕನ್ನಡಿಗರನ್ನೇ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಶಾಸಕರು ಮತ್ತು ಸಂಸದರ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ವಕ್ತಾರ ಸೋಮಣ್ಣ, ತಾಲೂಕು ಉಪಾಧ್ಯಕ್ಷ ಕುಮಾರ್ ಆರ್.ಶೆಟ್ಟಿ, ದಶರಥ ರಾಜು, ಭರತರಾಜ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಾಗಲತಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News