×
Ad

ಘಟ್ಟ ಪ್ರದೇಶ, ಜೀವಿ-ವೆವಿಧ್ಯ ಸಂರಕ್ಷಣೆ ಇಂದಿನ ಅಗತ್ಯ: ಡಾ. ಹರೀಶ್ ಆರ್.ಭಟ್

Update: 2016-05-28 21:54 IST

ಕುಶಾಲನಗರ, ಮೇ 28: ಶುದ್ಧ ಗಾಳಿ, ನೀರು ಹಾಗೂ ಆಹಾರ ಮೂಲಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುತ್ತಿರುವ ಪಶ್ಚಿಮಘಟ್ಟ ಪ್ರದೇಶ ಹಾಗೂ ಜೀವಿ -ವೈವಿಧ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಇಲ್ಲಿನ ಜೀವಿ-ವೈವಿಧ್ಯ ಸಂಪತ್ತನ್ನು ಉಳಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ಜಲಕ್ಷಾಮ ಬರುವ ಅಪಾಯವಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞ್ಞಾನ ಸಂಸ್ಥೆಯ ಪರಿಸರ ವಿಜ್ಞ್ಞಾನಿ ಡಾ. ಹರೀಶ್ ಆರ್.ಭಟ್ ಹೇಳಿದರು.

   ಅರಣ್ಯ ಇಲಾಖೆ ಹಾಗೂ ವಿಜ್ಞ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೊಡಗು ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ಹಾಗೂ ಕೊಡಗು ಜಿಲ್ಲಾ ಸಮಿತಿಯು ಹಾಗೂ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಸಹಯೋಗದೊಂದಿಗೆ ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಜೀವಿ ವೈವಿಧ್ಯತೆಯ ಪ್ರಾಮುಖ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮುಂದೆ ಇರುವ ಸವಾಲುಗಳ ಕುರಿತು ಸಾಕ್ಷಚಿತ್ರದೊಂದಿಗೆ ಉಪನ್ಯಾಸ ನೀಡಿದರು. ಪಶ್ಚಿಮಘಟ್ಟದಲ್ಲಿನ ಸಸ್ಯ ಹಾಗೂ ಪ್ರಾಣಿ ಸಂಪತ್ತು ವಿನಾಶದಂಚಿನಲ್ಲಿರುವುದು ತೀವ್ರ ಆತಂಕಕಾರಿಯಾಗಿದೆ. ಪರಿಸರ ಸಮತೋಲನದ ಕೊಂಡಿಯಾಗಿರುವ ಜೀವಿ-ಸಂಕುಲದ ತಾಣವಾದ ಪಶ್ಚಿಮಘಟ್ಟಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟುಮಾಡಬಾರದು ಎಂದರು.

ಅರಣ್ಯಗಳಿಂದ ನಾವು ಪಡೆಯುತ್ತಿರುವ ದಿನಬಳಕೆಯ ವಸ್ತುಗಳು ಕಲ್ಪನೆಗೂ ನಿಲುಕದಷ್ಟು ಅಪಾರ. ಅರಣ್ಯ ನಾಶವಾದರೆ ಮೇಲ್ಮಣ್ಣು ನಾಶವಾಗುತ್ತದೆ. ಇದರಿಂದ ಆಹಾರೋತ್ಪಾದನೆಯ ವ್ಯವಸ್ಥೆಗೆ ತೀವ್ರ ತೊಂದರೆಯಾಗಲಿದೆ. ಮಾನವ ಪ್ರೇರಿತ ಚಟುವಟಿಕೆಗಳಿಂದ ಪರಿಸರದ ಮೇಲಾಗುತ್ತಿರುವ ಚಟುವಟಿಕೆಗಳಿಂದ ನೈಸರ್ಗಿಕ ಸಂಪನ್ಮೂಲಗಳು ದಿನೇ ದಿನೇ ಕ್ಷೀಣಿಸತೊಡಗಿವೆ ಎಂದು ಹರೀಶ್‌ಭಟ್ ಹೇಳಿದರು.

 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಎಂ.ಜಿ.ಯತೀಶ್, ಪರಿಸರ ಸಂರಕ್ಷಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ, ಜಲಕಾಯ್ದೆ ಪ್ರಕಾರ ನಾವು ಜಲಮೂಲಗಳನ್ನು ಕಲುಷಿತಗೊಳಿಸುವಂತಿಲ್ಲ. ಶೇ. 85 ರಷ್ಟು ಪ್ರಮಾಣದಷ್ಟು ತ್ಯಾಜ್ಯವು ದಿನನಿತ್ಯ ಉದ್ದಿಮೆ, ಹೊಟೇಲ್, ಗೃಹ ಹಾಗೂ ಮತ್ತಿತರ ಮೂಲಗಳಿಂದ ಹೊರಬರುವ ಕಲುಷಿತ ನೀರು ಜಲಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದರು.

ಜಲ ಶುದ್ಧೀಕರಣ ಘಟಕಗಳಲ್ಲಿ ಮಾಲಿನ್ಯಯುಕ್ತ ನೀರು ಕಾವೇರಿ ನದಿಯನ್ನು ಸೇರುತ್ತಿದೆ. ಕಾವೇರಿ ನದಿಗೆ ಯಾವುದೇ ಮಾಲಿನ್ಯ ಉಂಟಾಗದಂತೆ ಜಾಗ್ರತೆ ವಹಿಸುವ ಮೂಲಕ ನದಿಮೂಲವನ್ನು ಸಂರಕ್ಷಿಸಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಇಕೋ-ಕ್ಲಬ್‌ನ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಶಾಲೆಯ ಇಕೋ-ಕ್ಲಬ್ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ ಕುರಿತು, ಮೈಸೂರಿನ ಸೈನ್ಸ್ ಫೌಂಡೇಶನ್ ಸೆಂಟರ್‌ನ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್, ಪರಿಸರ ಸಂರಕ್ಷಣೆ ಕುರಿತು ಸಾಕ್ಷ ಚಿತ್ರದೊಂದಿಗೆ ಉಪನ್ಯಾಸ ನೀಡಿದರು. ಬೆಂಗಳೂರಿನ ಪತಂಗತಜ್ಞ ಚತುರ್ವೇದಿ ನಿಸರ್ಗದಲ್ಲಿ ಚಿಟ್ಟೆಗಳ ವೈವಿಧ್ಯತೆ ಕುರಿತು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News