ಮಹಿಳಾ ದೌರ್ಜನ್ಯ ತಡೆಗೆ ಸಮಿತಿ ರಚನೆ: ಉಗ್ರಪ್ಪ
ಕಾರವಾರ, ಮೇ 28: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆ ಯರ ಮೇಲೆ ನಡೆಯುವ ಲೈಂಗಿಕ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸರಕಾರಿ ಕಚೇರಿಗಳ ಮಟ್ಟದಲ್ಲಿ ಸಮಿತಿ ರಚಿಸುವಂತೆ ನಿಯಮ ರೂಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ರಾಜ್ಯಾಧ್ಯಕ್ಷ ಉಗ್ರಪ್ಪಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೂ ಬಹುತೇಕ ಇಲಾಖೆಗಳ ಕಚೇರಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ ಆಗದಿರುವುದು ಖೇದಕರ ಎಂದು ಹೇಳಿದರು.
ಇತ್ತೀಚೆಗೆ ದೇಶದ ಎಲ್ಲೆಡೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕಾನೂನು ಬಿಗಿಯಾಗಿದ್ದರೂ ಅಪಧಿರಾಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ತನಿಖಾಕಾಧಿ ಕಾರಿಗಳು ಸೂಕ್ತ ಕ್ರಮಕೈಗೊಳ್ಳದಿರುವುದು ಕಾರಣ ಎಂದರು.
ಈ ವರೆಗೆ ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಶೇ. 5ರಷ್ಟು ಪ್ರಕರಣಗಳ ಮಾತ್ರ ಆರೋಪಿಗೆ ಶಿಕ್ಷೆ ಆಗಿದೆ. ರಾಷ್ಟ್ರಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಕಡಿಮೆ ಇದೆ. ಈ ರೀತಿ ಅಪರಾಧಿಗಳಿಗೆ ರಕ್ಷಣೆ ಪಡೆಯಲು ಅವಕಾಶ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಅಪರಾಧಿಗೂ ಕಠಿಣ ಶಿಕ್ಷೆಯಾಗುವ ನಿಟ್ಟಿ ನಲ್ಲಿ ತನಿಖಾಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದರು.
ಕಾನೂನು ತಿಳಿದಿರಲಿ: ನಮ್ಮಲ್ಲಿ ಬಹುತೇಕ ತನಿಖಾಕಾಧಿರಿಗಳಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ಬಗ್ಗೆ ಅರಿವೇ ಇಲ್ಲ. ಇದರಿಂದಾಗಿ ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗುತ್ತಿದೆ. ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೊಂದವರಿಗೆ ಗರಿಷ್ಠ 5 ಲಕ್ಷ ರೂ. ವರೆಗೂ ವೈದ್ಯಕೀಯ ನೆರವು ನೀಡಲು ಅವಕಾಶವಿದೆ. ಆದರೆ ರಾಜ್ಯದಲ್ಲಿ ನಡೆದ ಬಹುತೇಕ ಪ್ರಕರಣಗಳಲ್ಲಿ ಈ ನಿಯಮಗಳನ್ನು ಪಾಲನೆ ಮಾಡಿರುವುದು ಸಮಿತಿಯ ಗಮನಕ್ಕೆ ಬಂದಿಲ್ಲ ಎಂದರು.
ಉಗ್ರಪ್ಪನವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಉಜ್ವಲ್ಕುಮಾರ ಘೋಷ್ ಜಿಲ್ಲೆಯಲ್ಲಿ ಲಿಂಗಾನುಪಾತದ ವಿವರಗಳನ್ನು ಸಭೆಗೆ ತಿಳಿಸಿದರು. 2011ರ ಗಣತಿಯ ಪ್ರಕಾರ ಜಿಲ್ಲೆಯಲ್ಲಿ ಪ್ರತಿ 1000 ಪುರುಷರಿಗೆ 979 ಸ್ತ್ರೀಯರಿದ್ದಾರೆ. ಆದರೆ 0-6 ವರ್ಷದ ಮಕ್ಕಳಲ್ಲಿ ಲಿಂಗಾನುಪಾತ ಕಡಿಮೆ ಇದೆ. ಪ್ರತಿ 1000 ಗಂಡು ಮಕ್ಕಳಿಗೆ 955 ಹೆಣ್ಣು ಮಕ್ಕಳಿದ್ದಾರೆ ಎಂದರು.
ಜಿಲ್ಲಾಧಿಕಾರಿ ವಿವರಣೆಯಿಂದ ಸಂತ್ರಪ್ತರಾಗದ ಉಗ್ರಪ್ಪ, ನೀವು ನನಗೆ ಕೊಟ್ಟ ದಾಖಲೆಗಳಲ್ಲಿ ಬೇರೆಯದೇ ವಿವರಣೆ ಇದೆ. ಇದರಲ್ಲಿ 0-6 ವರ್ಷಗಳ ಮಕ್ಕಳಲ್ಲಿ ಲಿಂಗಾನುಪಾತ ಸಾವಿರಕ್ಕೆ 933 ಇದೆ ಎಂದು ತೋರಿಸಿದ್ದೀರಿ. ಇನ್ನೊಂದೆಡೆ ಸಾವಿರಕ್ಕೆ 955 ಎಂದು ತಿಳಿಸುತ್ತಿದ್ದೀರಿ ಎಂದು ಆಕ್ಷೇಪಿಸಿದರು.
ಜಿಲ್ಲೆಯ ಹಿಂದುಳಿದ ತಾಲೂಕು ಜೋಯಿಡಾದಲ್ಲಿ ಲಿಂಗಾನುಪಾತ ಸಾವಿರಕ್ಕೆ 1,048 ಇದೆ. ಆದರೆ ಮುಂಡಗೋಡದಲ್ಲಿ ಹೆಚ್ಚು ಹೆರಿಗೆಗಳು ಆಸ್ಪತ್ರೆಗಳಲ್ಲೇ ಆಗುತ್ತಿದ್ದರೂ ಲಿಂಗಾನುಪಾತ 848 ಇದೆ. ಇಷ್ಟೊಂದು ವ್ಯತ್ಯಾಸವಾಗಿರುವುದಕ್ಕೆ ಏನಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಜಿಲ್ಲಾ ಆರೋಗ್ಯಾಕಾರಿ ಡಾ. ಅಶೋಕ ಕುಮಾರ್ ಅವರನ್ನು ಉಗ್ರಪ್ಪ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಶೋಕ್ ಕುಮಾರ್ ಮದರ್ ಚೈಲ್ಡ್ ಟ್ರಾಕಿಂಗ್ ಸಿಸ್ಟಮ್ ಪ್ರಕಾರ ಪರಿಶೀಲನೆ ನಡೆಸತ್ತಿದ್ದೇವೆ. ಆದರೆ ಕೆಲ ಗರ್ಭಿಣಿ ಮಹಿಳೆಯರು ಹೆರಿಗೆಗೆ ಹೊರ ಊರಿನಲ್ಲಿರುವ ತವರು ಮನೆಗೆ ಹೋಗುವುದರಿಂದ ವಿವರಗಳು ಲಭ್ಯವಾಗುತ್ತಿಲ್ಲ ಎಂದರು. ಈ ಉತ್ತರದಿಂದ ಗರಂ ಆದ ಉಗ್ರಪ್ಪ, ಸರಕಾರ ಗರ್ಭಿಣಿ ಮಹಿಳೆಯರಿಗೆ ನಾನಾ ರೀತಿಯ ಸವಲತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಸವಲತ್ತುಗಳು ದುರ್ಬಳಕೆಯಾಗದಂತೆ ಹೆರಿಗೆ ವರದಿಯನ್ನು ತರಿಸಿಕೊಳ್ಳುವುದು ನಿಮ್ಮ ಕರ್ತವ್ಯ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ನಡೆದ ಅತ್ಯಾಚಾರಗಳ ಕುರಿತು ಸರಿಯಾದ ಮಾಹಿತಿ ಕಲೆ ಹಾಕುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರಾದ ರೇಣುಕಾ, ಶರಣಪ್ಪಮಟ್ಟೂರ, ಡಾ. ವಸುಂದರಾ ಭೂಪತಿ, ಜಿ ಪಂ ಮುಖ್ಯ ಕಾರ್ಯ ನಿರ್ವಹಣಾಕಾರಿ ರಾಮಪ್ರಸಾತ್ ಮನೋಹರ್ ಮತ್ತಿತರ ಅಧಿಕಾರಿಗಳು ಉಪಸ್ತಿತರಿದ್ದರು.