×
Ad

ಕೋರಮಂಗಲ, ಚಲ್ಲಘಟ್ಟ ವ್ಯಾಲಿ ಯೋಜನೆ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣ: ಸಿಎಂ

Update: 2016-05-30 16:56 IST

ಕೋಲಾರ, ಮೇ 30: ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರು ಸಂಸ್ಕರಿಸಿ ಆ ನೀರಿನಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 126 ಕೆರೆಗಳನ್ನು ತುಂಬಿಸುವ 1,300 ಕೋಟಿ ರೂ. ವೆಚ್ಚದ ಕೋರಮಂಗಲ, ಚಲ್ಲಘಟ್ಟ ವ್ಯಾಲಿ ಯೋಜನೆ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಚಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕೋಲಾರ ಸಮೀಪದ ನರಸಾಪುರದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿಯವರು ಸೋಮವಾರ ಮಾತನಾಡಿದರು.

ಕೋಲಾರ ಜಿಲ್ಲೆಗೆ ಇದು ಐತಿಹಾಸಿಕ ದಿನ. ಇದು ಬರಡು ಜಿಲ್ಲೆ, ಶಾಶ್ವತವಾಗಿ ಹರಿಯುವ ನದಿ, ನಾಲೆಗಳು ಈ ಜಿಲ್ಲೆಯಲ್ಲಿ ಇಲ್ಲ. ಹೀಗಾಗಿ ಕುಡಿಯುವ ನೀರಿಗೆ ಮತ್ತು ವ್ಯವಸಾಯಕ್ಕೆ ಭಾರಿ ತೊಂದರೆ ಆಗಿದೆ. ನಾನು ಮುಖ್ಯಮಂತ್ರಿ ಆದ ಬಳಿಕ ಕೆಸಿ ವ್ಯಾಲಿ ಯೋಜನೆ ವಿಚಾರ ಪ್ರಸ್ತಾಪ ಆಯಿತು. ಬಳಿಕ ಯೋಜನೆಗೆ ಚಾಲನೆ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಿದೆ. ಯಾವದೇ ಮನುಷ್ಯತ್ವ ಇರುವ ಸರ್ಕಾರ ಮಾಡಬೇಕಾದ ಕೆಲಸ ಇದು ಎಂದರು.

ಮುಂದಿನ ಎರಡು ವರ್ಷದಲ್ಲಿ ಯೋಜನೆ ಕಾಮಗಾರಿ ಮುಗಿಸಿ, ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಎಲ್ಲ ಕೆರೆಗಳನ್ನು ತುಂಬಿಸುವಂತೆ ಮಾಡುತ್ತೇವೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪ್ರಯತ್ನದ ಫಲವಾಗಿ ಯೋಜನೆಗೆ ಚಾಲನೆ ಸಿಕ್ಕಿದೆ. ಇದರ ಜೊತೆಗೆ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಇದರಿಂದ ಕೋಲಾರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಯೋಜನಾ ವರದಿ ಸಿದ್ಧಪಡಿಸಲು ಆದೇಶಿಸಿದೆ.

ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಇದೆ. ಇದನ್ನು ಮುಂದಿನ ವರ್ಷ ಪರಿಶೀಲಿಸಲಾಗುವುದು. ಹಳ್ಳಿಯ ಮಕ್ಕಳು ಡಾಕ್ಟರ್ ಮತ್ತು ಇಂಜಿನಿಯರ್ ಆಗಬೇಕು. ಎಲ್ಲ ವರ್ಗದ ಜನ ಮುಖ್ಯ ವಾಹಿನಿಗೆ ಬರಬೇಕು. ಅವಕಾಶಗಳಿಂದ ವಂಚಿತ ಆಗಬಾರದು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಮತ್ತು ಸಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ.

ಕೋಲಾರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೈಲು ಕೋಚಿಂಗ್ ಘಟಕ ಸ್ಥಾಪನೆ ಸಂಬಂಧ ಕೇಂದ್ರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಲ್ಲ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುವ ಬಗ್ಗೆ ಪರಿಶೀಲಿಸಲಾಗುವುದು. ಒಟ್ಟಾರೆ ಗಡಿ ಭಾಗದಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸರ್ಕಾರ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲವನ್ನು ಸಮರ್ಥವಾಗಿ ಸರಕಾರ ಎದುರಿಸಿದೆ. ಈ ಬಾರಿ ಮುಂಗಾರು ಆಶಾದಾಯಕವಾಗಿದೆ. ಒಂದು ವೇಳೆ ಮಳೆ ಕೈ ಕೊಟ್ಟರೆ, ಜನ ಪರಿಸರದ ಮೇಲೆ ದಾಳಿಗೆ ಮುಂದಾದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಒತ್ತುವರಿ ಪರಿಣಾಮ ರಾಜ ಕಾಲುವೆಗಳು ಮತ್ತು ಕೆರೆಗಳು ಇಂದು ಮೂಲ ಸ್ವರೂಪ ಕಳೆದುಕೊಂಡಿವೆ. ಮನುಷ್ಯನಿಗೆ ದುರಾಸೆ ಹೆಚ್ಚಾಗುತ್ತಿದೆ. ಹೀಗಾಗಿ ಧಾನ, ಧರ್ಮದ ಮನೋಭಾವದ ಬದಲಾಗಿ ಎಲ್ಲವನ್ನೂ ಕಬಳಿಸುವ ಆಸೆ ತುಂಬಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಕರು. ಸರಕಾರ ಜನರ ಟ್ರಸ್ಟಿಗಳಿದ್ದಂತೆ. ಜನಸೇವೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ನಮ್ಮ ಸರಕಾರ ಜನಪರ ಕೆಲಸ ಮಾಡುವ ಸರಕಾರ. ನುಡಿದಂತೆ ನಡೆಯುವ ಸರಕಾರ. ಯಾರು ಏನೇ ಹೇಳಿದರೂ ಈ ಮಾತನ್ನು ಆತ್ಮ ವಿಶ್ವಾಸದಿಂದ ಹೇಳುತ್ತೇನೆ. ಏಕೆಂದರೆ ಜನರಿಗೆ ಕೊಟ್ಟ ಮಾತಿನಂತೆ ಸರಕಾರ ನಡೆದುಕೊಂಡಿದೆ. ವಿಧಾನಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮೈತ್ರಿ, ಮನಸ್ವಿನಿ, ವಿದ್ಯಾಸಿರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ನಮ್ಮ ಸರ್ಕಾರ ಜನಪರವಾಗಿದೆ. ದಲಿತರು, ಹಿಂದುಳಿದವರು, ಬಡವರು ಮತ್ತು ಮಹಿಳೆಯರ ಪರವಾಗಿದೆ ಎಂದು ತಿಳಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುವ ಬಿಜೆಪಿ ನಾಯಕರೇ ಮೊದಲು ನಿಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತರಾಗಿ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು.

ಕೆಲವರು ಆರೋಪಗಳನ್ನು ಮಾಡುತ್ತಾರೆ. ನಾನಾ ಹಗರಣಗಳಲ್ಲಿ ಭಾಗಿ ಆದವರು, ಅದರಿಂದ ಜೈಲಿಗೆ ಹೋದವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರು ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಾರೆ. ನಮ್ಮ ಉದ್ದೇಶ ರಾಜ್ಯವನ್ನು ಬಡತನ ಮುಕ್ತ, ಹಸಿವು ಮುಕ್ತ, ನಿರುದ್ಯೋಗ ಮುಕ್ತ ಮತ್ತು ಅನಕ್ಷರತೆ ಮುಕ್ತ ಮಾಡುವುದಾಗಿದೆ. ರಾಜ್ಯವನ್ನು ಬಿಜೆಪಿ ಮುಕ್ತ ಮಾಡುತ್ತೇವೆ ಎದು ನಾನು ಹೇಳುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾತ್ರ ಮುಖ್ಯ ಎಂದು ಮುಖ್ಯಮಂತ್ರಿಯವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News