ಸಕಲೇಶಪುರ: ದೊಣ್ಣೆಯಿಂದ ಹೊಡೆದು ಮಹಿಳೆಯ ಹತ್ಯೆ
Update: 2016-06-01 19:29 IST
ಸಕಲೇಶಪುರ, ಜೂ. 1: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ತಾಲೂಕಿನ ಬಿಳತಾಳ್ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಸುರೇಶ್ ಎಂಬವರ ಪತ್ನಿ ಮೀನಾಕ್ಷಿ(53) ಮೃತ ಮಹಿಳೆ. ಗ್ರಾಮದ ರಾಜುಗೌಡ ಕೊಲೆಗೈದ ಆರೋಪಿ.
ಘಟನೆಯ ವಿವರ
ಮೃತ ಮಹಿಳೆ ವಡ್ಡರಹಳ್ಳಿ ಗ್ರಾಮದ ಮಠದ ಗದ್ದೆ ಎಂಬಲ್ಲಿ ಶುಂಠಿ ಹಾಗೂ ತರಕಾರಿ ಬೆಳೆದಿದ್ದು, ರಾಜುಗೌಡ ಎಂಬವರ ಎಮ್ಮೆ ತರಕಾರಿ ಬೆಳೆ ತಿನ್ನುತ್ತಿದ್ದನ್ನು ಗಮನಿಸಿದ ಮಹಿಳೆ ರಾಜುಗೌಡರಿಗೆ ಮನಬಂದಂತೆ ತೆಗಳಿದ್ದರು. ಇದರಿಂದ ಕೋಪಗೊಂಡ ರಾಜುಗೌಡ ಕೈಯಲ್ಲಿದ್ದ ದೊಣ್ಣೆಯಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.