×
Ad

ಇತರರಿಗೆ ಮಾದರಿಯಾದ ಬೀದರ್‌ನ ಬರದ ವಿರುದ್ಧ ರಕ್ಷಣಾ ಕ್ರಮ

Update: 2016-06-02 20:41 IST

ಬೀದರ್,ಜೂ.2: ಇತಿಹಾಸದಲ್ಲಿ ಕಂಡು ಕೇಳರಿಯದ ಭೀಕರ ಬರಕ್ಕೆ ಗುರಿಯಾಗಿರುವ ರಾಜ್ಯದ ಬೀದರ್ ಜಿಲ್ಲೆಯು ಭವಿಷ್ಯದಲ್ಲಿ ಇಂತಹ ಸ್ಥಿತಿ ಮರುಕಳಿಸದಿರಲು ಕ್ರಮಗಳನ್ನು ಕೈಗೊಂಡಿದೆ. ವಿವೇಚನೆಯುಳ್ಳ ಅಧಿಕಾರಿಗಳಿದ್ದರೆ ಸರಕಾರದ ಮರ್ಜಿ ಕಾಯದೇ ಜನಹಿತದ ಕ್ರಮಗಳನ್ನು ಜನರದ್ದೇ ಸಹಕಾರದೊಂದಿಗೆ ಕೈಗೊಂಡು ಅವರ ಬದುಕುನ್ನು ಹಸನಾಗಿಸಬಹುದು ಎನ್ನುವುದಕ್ಕೆ ಈ ಜಿಲ್ಲೆಯು ಜೀವಂತ ಉದಾಹರಣೆಯಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ವೆಚ್ಚದಲ್ಲಿ ಐತಿಹಾಸಿಕ ಕೆರೆಗಳು ಮತ್ತು ಬಾವಿಗಳಲ್ಲಿಯ ಹೂಳನ್ನೆತ್ತಲಾಗಿದ್ದು, 10 ಸಾವಿರ ಮಿಲಿಯ ಘನ ಅಡಿ(ಟಿಎಂಸಿ)ಗೂ ಹೆಚ್ಚಿನ ಅತಿರಿಕ್ತ ನೀರಿನ ಸಂಗ್ರಹವನ್ನು ಸೃಷ್ಟಿಸಲಾಗಿದೆ. ತನ್ಮೂಲಕ ಜಿಲ್ಲೆಯು ದೇಶದಲ್ಲಿನ ಇತರ 250ಕ್ಕೂ ಅಧಿಕ ಇತರ ಬರಪೀಡಿತ ಜಿಲ್ಲೆಗಳಿಗೆ ಮಾದರಿಯಾಗಿದೆ. ಮುಂದಿನ ವಾರ ಮುಂಗಾರು ಮಳೆಯ ಆಗಮನದವರೆಗೂ ಹೂಳೆತ್ತುವ ಕಾರ್ಯ ಮಂದುವರಿಯಲಿದ್ದು, ಕೆರೆಗಳು ಮತ್ತು ಬಾವಿಗಳನ್ನು ಇನ್ನೂ 10 ಟಿಎಂಸಿ ನೀರಿನ ಸಂಗ್ರಹಾಗಾರವನ್ನಾಗಿ ಮಾಡುವ ಮೂಲಕ ಒಟ್ಟೂ ನೀರಿನ ಸಂಗ್ರಹ ಸಾಮರ್ಥ್ಯವನ್ನು 20 ಟಿಎಂಸಿಗಳಿಗೆ ಹೆಚ್ಚಿಸಲು ಜಿಲ್ಲಾಡಳಿತವು ಉದ್ದೇಶಿಸಿದೆ.

ಜಿಲ್ಲಾಡಳಿತದ ಉತ್ತಮ ಕಾರ್ಯದಿಂದ ಪ್ರೇರಿತ ರಾಜ್ಯ ಸರಕಾರವು ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿಯ ಕೆರೆಗಳು ಮತ್ತು ಬಾವಿಗಳನ್ನು ಸ್ವಚ್ಛಗೊಳಿಸಲು ಮತ್ತು ಹೂಳೆತ್ತಲು ಕಳೆದ ತಿಂಗಳು ‘ಕೆರೆ ಸಂಜೀವಿನಿ’ಯೋಜನೆಯನ್ನು ಪ್ರಕಟಿಸಿದೆ, ಆದರೆ ಇದಕ್ಕಾಗಿ ಯಾವುದೇ ಜಿಲ್ಲೆಗೂ ಈವರೆಗೂ ಒಂದೇ ಒಂದು ಪೈಸೆ ಬಿಡುಗಡೆಯಾಗಿಲ್ಲ!

ಜಿಲ್ಲಾಡಳಿತವು ಕಳೆದ ಮಾರ್ಚ್‌ನಲ್ಲಿಯೇ ಹೂಳೆತ್ತುವ ಕಾಮಗಾರಿಯನ್ನು ಆರಂಭಿಸಿದ್ದು, 26 ಲಕ್ಷ ಘನಅಡಿಗಳಷ್ಟು ಹೂಳೆತ್ತಲು ಕೇವಲ 2.5 ಕೋ.ರೂ.ಗಳನ್ನು ವ್ಯಯಿಸಿದೆ. ವಾಸ್ತವದಲ್ಲಿ ಈ ಕಾರ್ಯಕ್ಕೆ ಕನಿಷ್ಠ 100 ಕೋ.ರೂ.ಗಳಾದರೂ ಬೇಕು. ಹೀಗಾಗಿ ‘ಬೀದರ್ ಮಾದರಿ’ಯು ವಿಶಿಷ್ಟವಾಗಿದೆ.

ಜಿಲ್ಲೆಯಲ್ಲಿ ಭೀಕರ ಬರ ಸ್ಥಿತಿಗೆ ನಾನು ಸಾಕ್ಷಿಯಾಗಿದ್ದೇನೆೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಸಕಾಲದಲ್ಲಿ ಹೂಳೆತ್ತುವ ಕೆಲಸ ಆರಂಭಿಸಿದ್ದೇವೆ. ಇವೆಲ್ಲ ಭವಿಷ್ಯದಲ್ಲಿ ಬರದ ವಿರುದ್ಧ ಜಿಲ್ಲೆಗೆ ರಕ್ಷಣೆ ನೀಡಲಿವೆ ಎಂದು ಜಿಲ್ಲಾಧಿಕಾರಿ ಅನುರಾಗ ತಿವಾರಿ ತಿಳಿಸಿದರು.

ಹೂಳೆತ್ತುವ ಕಾಮಗಾರಿಯ ವೆಚ್ಚವನ್ನು ತಗ್ಗಿಸುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಮಹತ್ವದ್ದಾಗಿದೆ. ನಮ್ಮ ಸಲಹೆಯ ಮೇರೆಗೆ ರೈತರು ಪೋಷಕಾಂಷಗಳಿಂದ ಸಮೃದ್ಧ ಹೂಳನ್ನು ತಮ್ಮ ಹೊಲಗದ್ದೆಗಳಿಗೆ ತಮ್ಮದೇ ಖರ್ಚಿನಲ್ಲಿ ಸಾಗಿಸಿದ್ದಾರೆ ಎಂದರು.

ಒಂದು ಘನ ಮೀಟರ್ ಹೂಳೆತ್ತಲು 60 ರೂ.ದರವನ್ನು ಸರಕಾರವು ನಿಗದಿಗೊಳಿಸಿದೆ. ಆದರೆ ಜಿಲ್ಲಾಡಳಿತವು ಮಾಡಿರುವ ವೆಚ್ಚವು ಪ್ರತಿ ಘನ ಅಡಿಗೆ 11 ರೂ.ದಾಟಿಲ್ಲ ಎಂದು ಜಿಲ್ಲಾ ಕೆರೆ ಹೂಳೆತ್ತುವ ಸಮಿತಿಯ ಅಧ್ಯಕ್ಷ ಬಾಲ್ಹಿಮ್ ಕಾಮ್ಲೆ ಹೇಳಿದರು.

ಈ ವರೆಗೆ ಜಿಲ್ಲಾಡಳಿತವು ಐದು ಜಿಲ್ಲೆಗಳಲ್ಲಿಯ 1,000 ತೆರೆದ ಬಾವಿಗಳ ಪೈಕಿ 200ರಲ್ಲಿ ಮತ್ತು 120 ಕೆರೆಗಳ ಪೈಕಿ 100 ಕೆರೆಗಳಲ್ಲಿ ಹೂಳನ್ನೆತ್ತಿದೆ. 400 ದೇವಸ್ಥಾನಗಳ ಪುಷ್ಕರಿಣಿಗಳಲ್ಲಿ 20 ಹೂಳುಮುಕ್ತಗೊಂಡಿವೆ.

ಹೂಳು ತೆಗೆಯಲಾದ ಬಾವಿಗಳ ನೀರು ಪಾನಯೋಗ್ಯವಾಗಿದ್ದು, ಟ್ಯಾಂಕರ್‌ಗಳ ಮೂಲಕ ಜನರಿಗೆ ಪೂರೈಸಲಾಗುತ್ತಿದೆ.

 ಮಹತ್ವದ ಹೆಜ್ಜೆಯೊಂದರಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪುರಾತನ ಭೂಗತ ಜಲ ಸುರಂಗಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ‘ಕರೇಝ’ ವ್ಯವಸ್ಥೆ ಎಂದು ಕರೆಯಲಾಗುವ ಇದು ಇರಾನ್ ಮೂಲದ ಜಲಪೂರೈಕೆ ವ್ಯವಸ್ಥೆಯಾಗಿದೆ. 15ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಇದು ಮೂರು ಕಿ.ಮೀ.ಗೂ ಅಧಿಕ ಉದ್ದವಿದ್ದು, 21 ಗಾಳಿಕಿಂಡಿಗಳನ್ನು ಹೊಂದಿದೆ ಎಂದು ತಿವಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News