ಕೊಡಗಿನ ಪೊಲೀಸರು ಪ್ರತಿಭಟನೆ ಮಾಡಲ: ಎಸ್ಪಿ ಪಿ. ರಾಜೇಂದ್ರ ಪ್ರಸಾದ್
ಮಡಿಕೇರಿ, ಜೂ. 2: ಪೊಲೀಸರು ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಮುಷ್ಕರ ಎನ್ನುವ ಕಾರಣವೊಡ್ಡಿ ಸಮಾಜದಿಂದ ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲ. ಪೊಲೀಸ್ ಸಮವಸ್ತ್ರ ಖಾಕಿ ತ್ಯಾಗ ಮತ್ತು ಸೇವೆಯ ಸಂಕೇತವಾಗಿದ್ದು, ಜೂ. 4 ರಂದು ಪೊಲೀಸರು ಮುಷ್ಕರ ನಡೆಸುವುದಿಲ್ಲ ಎಂದು ಕೊಡಗು ಜಿಲ್ಲೆಯ ನೂತನ ಎಸ್ಪಿ ಪಿ. ರಾಜೇಂದ್ರ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯತೆ ಪಡೆಯದ ಸಂಘದ ಕರೆಗೆ ಓಗೊಟ್ಟು ಮಾಹಿತಿಯ ಕೊರತೆಯಿಂದ ರಜಾ ಅರ್ಜಿ ನೀಡಿದ್ದ ಕೊಡಗಿನ ಪೊಲೀಸರು ಮರಳಿ ಅದನ್ನು ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಶಶಿಧರ್ ಎಂಬವರು ಮುಷ್ಕರಕ್ಕೆ ಪ್ರಚೋದನೆ ನೀಡಿದ್ದು, ಇದರ ಅರಿವಿಲ್ಲದ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಸರಕಾರ ಈಗಾಗಲೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದೆ. ಪೊಲೀಸರು ಸಮಾಜದ ಅವಿಭ್ಯಾಜ್ಯ ಅಂಗವಾಗಿರುವುದರಿಂದ 1 ನಿಮಿಷವೂ ಸಮಾಜವನ್ನು ಬಿಟ್ಟಿರಲು ಸಾಧ್ಯವಿಲ್ಲ. ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಜವಾಬ್ದಾರಿಯಾಗಿದ್ದು, ಮುಷ್ಕರ ನಡೆಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರ ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಇದು ಪೊಲೀಸರ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವ ಸಂಘ ಸಂಸ್ಥೆಗಳಿಗೆ ತಿಳಿದಿಲ್ಲ. ಪೊಲೀಸ್ ಇಲಾಖೆಗೆ ನಾವಾಗಿ ಸೇರಿಕೊಂಡಿದ್ದೇವೆ ಹೊರತು ಯಾರು ಇಲಾಖೆಗೆ ಸೇರಿಸಿಲ್ಲ ಎಂದರು.
ಸೇನೆಗಿಂತ ಹೆಚ್ಚಿನ ಸೌಲಭ್ಯವಿದೆ: ಮುಷ್ಕರದ ಹೆಸರಿನಲ್ಲಿ ಪ್ರಚೋದನೆ ನೀಡುವುದು ಸರಿಯಲ್ಲ ಎಂದ ಎಸ್ಪಿ ರಾಜ್ಯದಲ್ಲಿ 45 ಕಡೆ ಪೊಲೀಸ್ ಕ್ಯಾಂಟೀನ್ಗಳಿದ್ದು, ರಿಯಾಯಿತಿ ದರದಲ್ಲಿ ಸಾಮಗ್ರಿಗಳು ದೊರೆಯುತ್ತಿದೆ. ಕೋರಮಂಗಲ ಹಾಗೂ ಮೈಸೂರಿನಲ್ಲಿ ಪೊಲೀಸ್ ಶಾಲೆ ಇದ್ದು, ಇಲ್ಲಿ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ.
ಸೇನೆಗಿಂತ ಹೆಚ್ಚಿನ ಸೌಲಭ್ಯವನ್ನು ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿದ್ದು, ಸಿಬ್ಬಂದಿ ಕೊರತೆ ಇದ್ದಲ್ಲಿ ಮಾತ್ರ ನಿಗದಿತ ಅವಧಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆಯೇ ಹೊರತು ವಿನಾ ಕಾರಣ ದುಡಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಸರಕಾರಿ ನೌಕರರೊಂದಿಗೆ ಪೊಲೀಸರ ಸೇವೆಯನ್ನು ಹೋಲಿಸುವುದು ಸರಿಯಲ್ಲ. ವೈದ್ಯರಂತೆ ಪೊಲೀಸರು ಕೂಡ ಸದಾ ಸೇವೆಯಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಪೊಲೀಸ್ ಸಿಬ್ಬಂದಿಗೂ ವಾರದ ರಜೆ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಪೊಲೀಸರ ಸಮಸ್ಯೆಯನ್ನು ಆಲಿಸಲು ತಿಂಗಳಿಗೊಂದು ಬಾರಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಲಾಗುತ್ತಿದ್ದು, ಸಿಬ್ಬಂದಿ ನೀಡುವ ಅರ್ಜಿಗಳಿಗೆ ಸ್ಪಂದಿಸುವ ಕಾರ್ಯ ಇತರ ಜಿಲ್ಲೆಗಳಲ್ಲಿ ಆಗುತ್ತಿದೆ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆಯಲ್ಲೂ ಸಿಬ್ಬಂದಿಯ ಸಭೆ ನಡೆಸಲಾಗುವುದೆಂದು ರಾಜೇಂದ್ರ ಪ್ರಸಾದ್ ಹೇಳಿದರು.
ಎಸ್ಮಾ ಜಾರಿಯಲ್ಲಿರುವುದರಿಂದ ಸರಕಾರದ ಮನವಿ ನಂತರವೂ ಜೂ.4ರಂದು ಮುಷ್ಕರ ನಡೆಸುವಂತಿಲ್ಲ. ತಮ್ಮ ಜವಾಬ್ದಾರಿಯನ್ನು ಅರಿತು ಪೊಲೀಸರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.