ಮೀನು ಮಾರುಕಟ್ಟೆ ಸ್ಥಾಪನೆ ವಿಳಂಬ: ನಗರಸಭೆಗೆ ಮುತ್ತಿಗೆ

Update: 2016-06-02 16:27 GMT

ಕಾರವಾರ, ಜೂ.2: ಇಲ್ಲಿನ ಹಳೆಯ ಮೀನುಮಾರುಕಟ್ಟೆ ಇದ್ದ ಪ್ರದೇಶದಲ್ಲಿ ಹೊಸ ಸುಸಜ್ಜಿತ ಮೀನು ಮಾರುಕಟ್ಟೆ ಸ್ಥಾಪನೆಗೆ ನಗರಸಭೆ ವಿಳಂಬಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮೀನುಗಾರ ಮಹಿಳೆಯರು ನಗರಸಭೆಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರಸಭೆ ಆವರಣದೊಳಗೆ ಬೆಳಗ್ಗೆ ಒಂದೆಡೆ ಸೇರಿದ ನೂರಾರು ಮಹಿಳೆಯರು ನಗರಸಭೆಯ ವಿಳಂಬಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು.

 ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಆರ್.ವಿ.ಜತ್ತನ್ನ ಸಮಾಧಾನಪಡಿಸಲು ಯತ್ನಿಸಿ, ಈ ವಿಷಯವಾಗಿ ಸಮಾಧಾನದಿಂದ ಚರ್ಚಿಸಿ ಸೂಕ್ತ ಪರಿಹಾರ ಹುಡುಕಬೇಕಾಗಿದೆ ಎಂದರು. ನಂತರ ನಗರಸಭೆ ಸಭಾಂಗಣದಲ್ಲಿ ಮೀನುಗಾರ ಮಹಿಳೆಯರೊಂದಿಗೆ ಸಭೆ ನಡೆಸಿದರು.

     ಸಭೆಯಲ್ಲಿ ಹಳೆಯ ನಿವೇಶನದಲ್ಲಿ ಮೀನುಮಾರುಕಟ್ಟೆ ನಿರ್ಮಿಸಬೇಕಾದರೆ, ಈ ಹಿಂದೆ ಹೆಸ್ಕಾಮ್ ಹತ್ತಿರ ನಿರ್ಮಿಸಲು ನಗರಸಭೆ ತೆಗೆದುಕೊಂಡ ನಿರ್ಣಯವನ್ನು ರದ್ದು ಪಡಿಸಬೇಕಾಗಿದೆ. ಈ ಉದ್ದೇಶದಿಂದ ಮೇ 31ರಂದು ಸಭೆ ಕರೆಯಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿದೆ. ಅತೀ ಶೀಘ್ರದಲ್ಲಿಯೇ ಈ ಸಂಬಂಧ ಸಭೆ ಕರೆದು ಹಿಂದಿನ ಠರಾವು ರದ್ದುಗೊಳಿಸಲಾಗುವುದು ಎಂದು ಆಯುಕ್ತ ಆರ್.ವಿ.ಜತ್ತನ್ನ ಮಹಿಳೆಯರಿಗೆ ಮನವರಿಕೆ ಮಾಡಿದರು.

    ಆದರೂ ನಗರಸಭೆ ಕಾರ್ಯ ವೈಖರಿ ಬಗ್ಗೆ ಸಂಶಯ ತಾಳಿದ ಮಹಿಳೆಯರು, ಯಾವ ದಿನಾಂಕದಂದು ಸಭೆ ನಡೆಸುತ್ತೀರಿ ಎಂದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.

ಸಭೆ ನಡೆಸುವ ದಿನವನ್ನು ಅಧ್ಯಕ್ಷರೊಂದಿಗೆ ಚರ್ಚಿಸಿ ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದರು.

    ಮಳೆಗಾಲದಲ್ಲಿ ಕಡಲತೀರದ ಮೇಲಿನ ತಾತ್ಕಾಲಿಕ ಮೀನುಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸಾಧ್ಯ ಇಲ್ಲ. ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ತಾತ್ಕಾಲಿಕ ಮಾರುಕಟ್ಟೆಯ ಅರ್ಧ ಭಾಗ ನೆಲಸಮಗೊಳಿಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಬಹಳ ತೊಂದರೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಮಾರುಕಟ್ಟೆ ಸಮೀಪದಿಂದ ಹಾದು ಹೋಗಿದ್ದು, ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹಿಂದಿನ ಮುಖ್ಯ ಮಾರುಕಟ್ಟೆ ಬಹಳ ಅನುಕೂಲಕರವಾಗಿದ್ದು, ಅದೃಷ್ಟದ ನೆಲೆಯಾಗಿತ್ತು. ಹಾಗಾಗಿ ಆದಷ್ಟು ಬೇಗ ನಮಗೆ ಹೊಸ ಮೀನುಮಾರುಕಟ್ಟೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸುಶೀಲಾ ಹರಿಕಂತ್ರ, ಕುಸುಮಾ ಕುಡ್ತಳಕರ ಮೊದಲಾದ ಮೀನುಗಾರರ ಪ್ರಮುಖ ಮಹಿಳೆಯರು ಸಭೆಯಲ್ಲಿ ಆಗ್ರಹಿಸಿದರು.

       ಇಲ್ಲಿನ ತಾತ್ಕಾಲಿಕ ಮಾರುಕಟ್ಟೆ ಪ್ರದೇಶ ಅಪಘಾತದ ವಲಯವಾಗುತ್ತಿದೆ. ಈಗಿನ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಂತೂ ಮೀನುಮಾರಾಟಕ್ಕೆ ಬಹಳಷ್ಟು ಸಮಸ್ಯೆಗಳು ಉದ್ಭವಿಸಲಿವೆ. ಆದ್ದರಿಂದ ಹಿಂದಿನ ಮಾರುಕಟ್ಟೆ ನೆಲಸಮಗೊಳಿಸಿದ ಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕ ಮೀನು ಮಾರುಕಟ್ಟೆಯಾಗಿ ಪರಿವರ್ತಿಸಿ ಅನುಕೂಲ ಮಾಡಿಕೊಡಬೇಕು ಎಂದು ಕುಸುಮಾ ಕುಡ್ತಳಕರ ಅಧ್ಯಕ್ಷರಲ್ಲಿ ಕೋರಿದರು.

     ಮೀನುಗಾರ ಮಹಿಳೆಯರ ಒತ್ತಾಯಕ್ಕೆ ಸ್ಪಂದಿಸಿದ ನಗರಸಭೆ ಅಧ್ಯಕ್ಷರು, ಮಾರುಕಟ್ಟೆ ಹೊರಗಡೆ ಪ್ಲಾಸ್ಟಿಕ್ ತಾಡಪತ್ರಿ ಹಾಕಿ ಮಳೆ, ಗಾಳಿ ತಗಲದಂತೆ ವ್ಯವಸ್ಥೆ ಮಾಡಿಕೊಡಿ ಎಂದು ಆಯುಕ್ತರಿಗೆ ಸೂಚಿಸಿದರು.

                 

   

ಹಳೆಯ ಮಾರುಕಟ್ಟೆ ಇದ್ದಲ್ಲಿಯೇ ಹೊಸ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗುತ್ತದೆ. ಮುಂದಿನ ಹದಿನೈದು ದಿನಗಳ ಒಳಗೆ ವಿಶೇಷ ಸಭೆ ಕರೆಯಲಾಗುವುದು. ಅಂದಿನ ಸಭೆಯಲ್ಲಿ ಬೇರೆ ಕಡೆಗೆ ಮಾರುಕಟ್ಟೆ ಸ್ಥಳಾಂತರ ಮಾಡುವುದರ ಬಗ್ಗೆ ತೆಗೆದುಕೊಂಡ ಠರಾವು ರದ್ದುಗೊಳಿಸಲಾಗುವುದು. ಹಳೆಯ ಮೀನು ಮಾರುಕಟ್ಟೆಯ ನಿವೇಶನದಲ್ಲಿಯೇ ಹೊಸ ಮಾರುಕಟ್ಟೆ ನಿರ್ಮಿಸುವುದರ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಠರಾವು ಪಾಸು ಮಾಡಲಾಗುವುದು.ಈ ಬಗ್ಗೆ ಯಾವುದೇ ರೀತಿಯ ಸಂಶಯ ಬೇಡ ಎಂದು ಅಧ್ಯಕ್ಷರು ಮಹಿಳೆಯರಿಗೆ ಭರವಸೆ ನೀಡಿದರು.ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ ಮಾತನಾಡಿ, ಈ ಸಂದರ್ಭದಲ್ಲಿ ಮಹಿಳಾ ಪ್ರಮುಖರಾದ ಸುಶೀಲಾ ಹರಿಕಂತ್ರ, ಕುಸುಮಾ ಕುಡ್ತಳಕರ, ಲತಾ ಅಂಬಿಗ, ತಾರಾ ಬಾನಾವಳಿ, ಕೇಸರಿ ಸುರಂಗೇಕರ, ಹರಿಕಂತ್ರ ಖಾರ್ವಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಹರಿಕಂತ್ರ,ಚೇತನ್ ಹರಿಕಂತ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News