ನಿಸ್ವಾರ್ಥ, ಸೇವೆಯಲ್ಲಿ ತೃಪ್ತಿಯಿದೆ: ದೋರನಾಳ್ ಪರಮೇಶ್
Update: 2016-06-07 23:47 IST
ತರೀಕೆರೆ ಜೂ.7 : ಬಡವ, ಶ್ರೀಮಂತ ಎಂಬ ಭೇದ ಭಾವವಿಲ್ಲದೇ ದೋರನಾಳು ಗ್ರಾಮದಲ್ಲಿ 24ವರ್ಷಗಳ ಕಾಲ ಶುಶ್ರೂಷಕಿಯಾಗಿ ನಿಸ್ವಾರ್ಥ ಸೇವೆ ಮಾಡಿ ದೋರನಾಳು ಮತ್ತು ಸುತ್ತಮುತ್ತಲ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ್ದ ಲಲಿತಮ್ಮ, ಗ್ರಾಮದ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೋರನಾಳ್ ಪರಮೇಶ್ ಹೇಳಿದರು.
ಅವರು ದೋರನಾಳು ಗ್ರಾಮದಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಲಲಿತಮ್ಮ ಅವರನ್ನು ಗ್ರಾಮದ ಸಮುದಾಯ ಭವನದಲ್ಲಿ ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲಲಿತಮ್ಮ, ಸೇವಾ ಅವಧಿಯಲ್ಲಿ ಕರ್ತವ್ಯವೇ ದೇವರೆಂದು ನಿಷ್ಠೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮನಸ್ಸಿಗೆ ತೃಪ್ತಿ, ನೆಮ್ಮದಿ ಮತ್ತು ಆನಂದ ಸಿಗುತ್ತದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಶೋಕ್, ನಿಂಗಪ್ಪ, ಚಂದ್ರಶೇಖರ್, ಕುಮಾರ್ಮತ್ತಿತರರು ಉಪಸ್ಥಿತರಿದ್ದರು.