ಕಲ್ಯಾಣ ರಾಜ್ಯ ನಿರ್ಮಾಣ ವಚನಕಾರರ ಆಶಯ: ಚಟ್ನಳ್ಳಿ ಮಹೇಶ್
ಚಿಕ್ಕಮಗಳೂರು, ಜೂ.8: ತಾತ್ವಿಕ ಮತ್ತು ಸಾತ್ವಿಕ ಚಿಂತನೆಗಳನ್ನು ಸಮಾಜದಲ್ಲಿ ಮೂಡಿಸುವ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣ ಆಶಯ ವಚನಕಾರರ ಆಶಯವಾಗಿತ್ತು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಸಾಹಿತಿ ಚಟ್ನಳ್ಳಿಮಹೇಶ್ ಹೇಳಿದರು.
ಅವರು ನಗರದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ರವೀಶ್ಕ್ಯಾತನಬೀಡು ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, 12ನೆ ಶತಮಾನದ ವಚನಕಾರರ ಬದುಕು ಮತ್ತು ಬರಹ ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಹೊಂದಿದ್ದು, ಸಮಾಜದ ಅನೇಕ ಸಮಸ್ಯೆಗಳಿಗೆ ಉತ್ತರವಾಗಿದೆ. ಸಮಾನತೆ ಮತ್ತು ಸಹೋದರತೆಯನ್ನು ಶರಣ ಸಮೂಹ ಅಂದೇ ಪ್ರತಿಪಾದಿಸಿತ್ತು. ಕಲ್ಯಾಣದ ಮಹಾಮಂತ್ರಿ ಬಸವಣ್ಣ ಅನುಭವ ಮಂಟಪದಲ್ಲಿ ಸರಿಸಮಾನವಾಗಿ ಎಲ್ಲ ವರ್ಗ, ವರ್ಣ, ಕಾಯಕ ವ್ಯಕ್ತಿಗಳು ಸಮಾನತೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದದ್ದು, ಇಂದಿನ ಪಾರ್ಲಿಮೆಂಟ್ ವ್ಯವಸ್ಥೆಗೆ ಅಡಿಪಾಯ ಎಂದವರು ವಿಶ್ಲೇಷಿಸಿದರು.
ಸತ್ಯ, ಶುದ್ಧ ಕಾಯಕದಿಂದ ಗಳಿಸಿದ ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಕೆ ಹಣವನ್ನು ಸಮಾಜಕ್ಕೆ ದಾಸೋಹದ ಮೂಲಕ ನೀಡುವ ಅದ್ಭುತ ಪರಿಕಲ್ಪನೆ ಶರಣರದಾಗಿತ್ತು. ಜಿಲ್ಲಾ ಶಸಾಪ ಘಟಕ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ರವೀಶ್ ನೇತೃತ್ವದಲ್ಲಿ ಮತ್ತಷ್ಟು ಪ್ರಜ್ವಲಿಸುತ್ತದೆಂಬ ಆಶಯ ವ್ಯಕ್ತಪಡಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ರವೀಶ್ಕ್ಯಾತನಬೀಡು ಪದವಿ ಸ್ವೀಕರಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 97ರಷ್ಟು ಅಂಕ ಪಡೆದ ವಿದ್ಯಾರ್ಥಿ ಸಿ.ಆರ್.ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು.
ಸಿಡಿಎ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಕೃತಿಕಾರ ಸಾಹಿತಿ ಕೆ.ಎಂ.ರೇವಣ್ಣ, ಡಿಎಸ್ಎಂಎಸ್ ಅಧ್ಯಕ್ಷ ಎಸ್.ಪ್ರಭು, ಸಾಂಬಾರ ಮಂಡಳಿ ನಿರ್ದೇಶಕ ಪವನ್, ಸರಕಾರಿ ನೌಕರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಅಮ್ಜದ್, ಹಿರೇಮಗಳೂರು ರಾಮಚಂದ್ರ, ಗಮಕ ಪರಿಷತ್ ಅಧ್ಯಕ್ಷ ರಾಮ ಸುಬ್ರಾಯಶೇಟ್, ಮಂಜುನಾಥ್, ಕಲ್ಯಾಣನಗರ ಸಾಹಿತ್ಯ ವೇದಿಕೆಯ ಮಂಜುನಾಥ, ಬಾಣೂರುಚನ್ನಪ್ಪ, ಪತ್ರಕರ್ತ ಕೆ.ಮಂಜುನಾಥ ರಂಗಕರ್ಮಿ ಸೋಮಣ್ಣ, ಹಳ್ಳಿಹಿತ್ಲುಮಹೇಶ್, ಚಿದಾನಂದ್, ದಯಾನಂದ, ಧನಂಜಯ, ದೇವನೂರು ಪಂಚಾಯತ್ ಮಾಜಿ ಅಧ್ಯಕ್ಷ ನಟರಾಜ್, ನಿಡಘಟ್ಟ ಗ್ರಾಪಂ ಅಧ್ಯಕ್ಷ ಸಂತೋಷ ಮತ್ತಿತರರು ಉಪಸ್ಥಿತರಿದ್ದರು.