ಅವಿಭಜಿತ ಕೋಲಾರಕ್ಕೆ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಬೀದಿಗಿಳಿದ ಚಿತ್ರ ತಾರೆಯರು
ಬೆಂಗಳೂರು, ಜೂ.12: ಅಭಿಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಕೋಲಾರದಲ್ಲಿ ಇಂದು ಕನ್ನಡ ಚಿತ್ರ ರಂಗದ ನಟ ನಟಿಯರು ಕೈಗೊಂಡಿರುವ ರ್ಯಾಲಿಗೆ ಅಪೂರ್ವ ಬೆಂಬಲ ವ್ಯಕ್ತವಾಗಿದೆ.
ನಗರದ ಪ್ರವಾಸಿ ಮಂದಿರದ ಬಳಿ ಆರಂಭಗೊಂಡ ರ್ಯಾಲಿಯಲ್ಲಿ ಸ್ಯಾಂಡಲ್ವುಡ್ ನಟರಾದ ಡಾ. ಶಿವರಾಜ್ ಕುಮಾರ್, ಯಶ್, ರಾಗಿಣಿ, ಪೂಜಾಗಾಂಧಿ, ಬುಲೆಟ್ ಪ್ರಕಾಶ್ , ಅರುಣ್ ಸಾಗರ್, ಪದ್ಮಾ ವಾಸಂತಿ, ರಾಕ್ಲೈನ್ ವೆಂಕಟೇಶ್,ಚಿರಂಜೀವಿ, ಸಾಧು ಕೋಕಿಲ, ಸಾರಾ ಗೋವಿಂದ, ಶ್ರೀನಿವಾಸಮೂರ್ತಿ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಥಾಮಸ್ ಡಿಸೋಜಾ, ದಕ್ಷಿಣ ಭಾರತ ಫಿಲಂ ಚೇಂಬರ್ ಅಧ್ಯಕ್ಷ ಎಚ್ಡಿ ಗಂಗರಾಜು, ಭಾಮಾ ಹರೀಶ್, ನಿರ್ದೇಶಕರು, ನಿರ್ಮಾಪಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ತೆರೆದ ವಾಹನಗಳಲ್ಲಿ ಸಿನಿ ತಾರೆಯರು ರ್ಯಾಲಿಯಲ್ಲಿ ಸಾಗಿದರು. ಬಳಿಕ ಸರ್ವಜ್ಞ ವೃತ್ತದ ಬಳಿ ಸಿನಿ ಸಮಾವೇಶ ನಡೆಯಿತು. ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ ಉದ್ಘಾಟಿಸಿದರು. ಡಾ.ಶಿವಕುಮಾರ್ ಮತ್ತಿತರರು ಸಾಥ್ ನೀಡಿದರು.
6 ವೋಲ್ವೋ ಬಸ್ಗಳಲ್ಲಿ ಕಲಾವಿದರು ಕೋಲಾರಕ್ಕೆ ತೆರಳಿದ್ದಾರೆ. ಕೋಲಾರ ಜಿಲ್ಲೆಯ ನೀರಾವರಿ ಹೋರಾಟ ಸಮಿತಿಯ ವತಿಯಿಂದ ಶಾಶ್ವತ ನೀರಾವರಿ ಆಗ್ರಹಿಸಿ ನಿರಂತರ ಧರಣಿ ನಡೆಯಲಿದೆ.