×
Ad

ಬಾಲ ಕಾರ್ಮಿಕ ಪದ್ಧತಿ ವಿಶ್ವದ ದೊಡ್ಡ ಸಾಮಾಜಿಕ ಪಿಡುಗು: ನ್ಯಾ. ಭೀಮನಗೌಡ ಕಳವಳ

Update: 2016-06-12 23:12 IST

ಶಿವಮೊಗ್ಗ, ಜೂ.12: ವಿಶ್ವದ ಬಹುದೊಡ್ಡ ಸಾಮಾಜಿಕ ಪಿಡುಗು ಬಾಲಕಾರ್ಮಿಕ ಪದ್ಧತಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಭೀಮನಗೌಡ ಕೆ.ನಾಯಿಕ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಕಟುನಿಟ್ಟಿನ ಕಾನೂನುಗಳನ್ನು ಮಾಡಿದರೂ ಜಗತ್ತನ್ನು ಕಾಡುವ ಪಿಡುಗಾಗಿ ಬಾಲ ಕಾರ್ಮಿಕ ಪದ್ಧತಿ ಇರುವುದು ದುರದೃಷ್ಟಕರ ಎಂದು ಅವರು ವಿಷಾದಿಸಿದರು.

ಬಾಲ ಕಾರ್ಮಿಕ ಪದ್ಧತಿಗೆ ಸಾಮಾನ್ಯ ಕಾರಣ ಬಡತನ, ಅನಕ್ಷರತೆ. ಆದರೆ ಈ ಮೂಲ ಸಮಸ್ಯೆಯನ್ನು ಪರಿಹರಿಸಲು ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಡತನ ನಿರ್ಮೂಲನೆಗೆ ಹಲವಾರು ಕ್ರಮಗಳನ್ನು ತರಲಾಗಿದೆ, ಆರ್ಥಿಕ ಸ್ವಾಲಂಬಿಗಳಾಗಿ ಮಾಡಲಾಗುತ್ತಿದೆ, ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಆದರೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಇನ್ನೂ ಜೀವಂತವಾಗಿರುವುದು ದುರದೃಷ್ಟಕರ ಎಂದರು.

ನಾಗರಿಕ ಸ್ವಯಂ ಪ್ರೇರಿತರಾಗಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಅಂತಹ ಸಂದರ್ಭಗಳು ಕಂಡು ಬಂದರೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಬೇಕು. ಕಾರ್ಮಿಕ ಇಲಾಖೆ ಕಟ್ಟು ನಿಟ್ಟಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು. ಬಾಲ ಕಾರ್ಮಿಕರನ್ನು ಪತ್ತೆಹಚ್ಚಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪಮಾತನಾಡಿ, ಬಾಲ ಕಾರ್ಮಿಕರನ್ನಾಗಿ ಮಾಡುತ್ತಿರುವುದು ನಮ್ಮಿಳಗಿನ ಸುಕ್ಷಿತ ನಾಗರಿಕ ಸಮಾಜ. ಈ ಹಿನ್ನೆಲೆಯಲ್ಲಿ ಅಂತಹ ಸಮುದಾಯವನ್ನು ಕೇಂದ್ರೀಕರಿಸಿ ಕಾನೂನು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ನ್ಯಾಯಾಧೀಶೆ ಶಾಂತಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ನ್ಯಾಯಾಲಯ ಅಥವಾ ಇಲಾಖೆಗಿಂತಲೂ ನಾಗರಿಕ ಸಮಾಜದ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಪ್ರತಿಪಾತಿಪಾದಿಸಿದರು.

ಮುಖ್ಯ ನ್ಯಾಯಿಕ ದಂಡಾಧಿಕಾರಿ ಜೈಶಂಕರ್, ನ್ಯಾ.ಹರೀಶ್, ನ್ಯಾ.ಕುರವತ್ತಿ, ಜಿಪಂ ಉಪ ಕಾರ್ಯದರ್ಶಿ ಕೆ.ಎಸ್.ಮಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಸೋಮಶೇಖರ್ ಸಿ.ಬಾದಾಮಿ, ಕಾರ್ಮಿಕ ಅಧಿಕಾರಿ ಶಿವಾನಂದ್, ಜಿಲ್ಲಾ ವಾರ್ತಾಧಿಕಾರಿ ಹಿಮಂತ್ ರಾಜು ಜಿ. ಕಾನೂನು ಕಾಲೇಜು ಪ್ರಾಂಶುಪಾಲ ಜಿ.ಆರ್.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

 ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಬಾಲಕಾರ್ಮಿಕನಾಗಿ ದುಡಿಯುತ್ತಿದವನನ್ನು ಸಾಗರದ ವನಶ್ರೀ ವಸತಿ ವಿದ್ಯಾಲಯ ವಶಪಡಿಸಿಕೊಂಡು ಶಿಕ್ಷಣ ನೀಡಿ ಇದೀಗ ಕೆಪಿಸಿಎಲ್‌ನಲ್ಲಿ ಇಂಜಿಯರ್ ಆಗಿರುವ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಂಡದ ಮಂಜಾನಾಯಕ್ ಅವರನ್ನುಸನ್ಮಾನಿಸಲಾಯಿತು.

ನಮ್ಮ ವನಶ್ರೀ ವಸತಿ ವಿದ್ಯಾಲಯದ ಮಕ್ಕಳಿಂದ ಡೊಳ್ಳು, ಲಂಬಾಣಿ ನೃತ್ಯ, ಯೋಗ, ವೀರಗಾಸೆ ಸೇರಿದಂತೆ ವಿವಿಧ ಕಲಾ ಪ್ರದರ್ಶನ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News