ಕ್ಷೇತ್ರದಲ್ಲಿ ಬಿಜೆಪಿ ಮೂಲೋತ್ಪಾಟನೆಯೇ ನನ್ನ ಗುರಿ: ಕಿಮ್ಮನೆ ರತ್ನಾಕರ
ತೀರ್ಥಹಳ್ಳಿ, ಜೂ.20: ಹಣ ಮ್ತು ಅಧಿಕಾರಕ್ಕಾಗಿ ನಾನೆಂದೂ ಹಿಂದೆ ಬಿದ್ದವನಲ್ಲ. ಗೂಟದ ಕಾರು ಯಾರಿಗೂ ಶಾಶ್ವತವಲ್ಲ. ಇನ್ನು ಮುಂದೆ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಬಿಜೆಪಿಯ ಮೂಲೋತ್ಪಾಟನೆ ನನ್ನ ಗುರಿ. ಸಚಿವ ಸ್ಥಾನ ಹೋಗಿದ್ದಕ್ಕೆ ಚಿಂತೆಯಿಲ್ಲ. ಮಂತ್ರಿ ಸ್ಥಾನ ಕಳೆದುಕೊಂಡಿರಬಹುದು, ನಾನು ಕಳೆದು ಹೋಗಿಲ್ಲ. ಜನರ ಮಧ್ಯೆ ಸದಾ ಇರುತ್ತೇನೆ ಎಂದು ಕಿಮ್ಮನೆ ರತ್ನಾಕರ ಹೇಳಿದರು.
ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಗತ್ತು, ಗೈರತ್ತು, ಅಹಂಕಾರ ನನ್ನಲ್ಲಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ತೆಗೆಯುವುದೇ ನನ್ನ ಕೆಲಸವಾಗಿದ್ದು, ಪ್ರತಿಯೊಂದು ಮನೆಗೂ ಭೇಟಿ ನೀಡಿ ಜನರನ್ನು ಸಂಪರ್ಕಿಸುತ್ತೇನೆ. ಕಾಗೋಡು ತಿಮ್ಮಪ್ಪನವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಅಭಿನಂದಿಸುತ್ತಿದ್ದೇನೆ. ಒಬ್ಬ ಅನುಭವಿ ರಾಜಕಾರಣಿಗೆ ಸಿಕ್ಕ ಗೌರವವಿದು. ಮುಂದಿನ ದಿನಗಳಲ್ಲಿ ನನ್ನ ಪಾದಯಾತ್ರೆಯ ಪರ್ವ ಆರಂಭವಾಗಲಿದ್ದು, ಜನರ ಮಧ್ಯೆ ಇದ್ದು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದಾ ಸ್ಪಂದಿಸುತ್ತೇನೆ ಎಂದರು.