ಮೂಡಿಗೆರೆ: ರೈತ ಯಾತ್ರೆಗೆ ಚಾಲನೆ
ಮೂಡಿಗೆರೆ, ಜೂ.22: ಸರಕಾರದ ಸವಲತ್ತುಗಳನ್ನು ಕೃಷಿ ಅಭಿಯಾನದ ಮೂಲಕ ಇಲಾಖೆಯಿಂದ ಸಿಗುವಂತಹ ಸವಲತ್ತುಗಳನ್ನು ರೈತರಿಗೆ ಸರಿಯಾಗಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಇಂತಹ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ತಿಳಿಸಿದರು. ಅವರು ತಾಪಂ ಆವರಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಕೃಷಿ ಅಭಿಯಾನ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜದೊಂದಿಗೆ, ಉತ್ತಮ ಗುಣ ಮಟ್ಟದ ಯಂತ್ರೋಪಕರಣಗಳನ್ನು ಕೊಡಿಸುವತ್ತ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ತಾಪಂ ಸದಸ್ಯ ರಂಜನ್ಅಜಿತ್ಕುಮಾರ್ ಮಾತನಾಡಿ, ಸರಕಾರ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೃಷಿ ಅಭಿಯಾನದಂತಹ ಕಾರ್ಯಕ್ರಮವನ್ನು ಆಯೋಜಿಸಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ, ಪ್ರತಿ ವರ್ಷ ಸರಕಾರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಾಕಷ್ಟು ರಿಯಾಯಿತಿಗಳನ್ನು ನೀಡುತ್ತಿದೆ. ಇದರ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್ ಮಾತನಾಡಿದರು. ಈ ಸಂದಭರ್ದಲ್ಲಿ ತಾಪಂ ಇಓ ರುದ್ರಪ್ಪ, ಕೃಷಿ ಅಧಿಕಾರಿ ಲೋಲಾಕ್ಷಿ, ತಾಪಂ ಸದಸ್ಯ ದೇವರಾಜು ಉಪಸ್ಥಿತರಿದ್ದರು.