ಹಾಸನ: ಪತಿಯಿಂದ ಗಂಭೀರ ಹಲ್ಲೆಗೊಳಗಾಗಿದ್ದ ಮಹಿಳೆ ಮೃತ್ಯು

Update: 2016-06-27 14:43 GMT

ಹಾಸನ, ಜೂ.27: ಪತಿಯಿಂದ ಹಲ್ಲೆಗೊಳಗಾಗಿ ಬೆಂಕಿ ಹಚ್ಚಲ್ಪಟ್ಟಿದ್ದ ಮಹಿಳೆಯು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಸಾವನಪ್ಪಿದ್ದು, ತಲೆಮರೆಸಿಕೊಂಡಿದ್ದ ಗಂಡ ಜಗದೀಶ್ ಈಗ ಪೊಲೀಸ್ ಅತಿಥಿಯಾಗಿದ್ದಾನೆ.

ನಗರದ ಬೀರನಹಳ್ಳಿ ಕೆರೆ (ರಾಘವೇಂದ್ರ ಕಾಲೋನಿ)ಯಲ್ಲಿ ವಾಸವಾಗಿರುವ ಇಂದ್ರ (24) ಎಂಬಾಕೆಯೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.

ಕಾರು ಚಾಲಕನಾಗಿರುವ ಜಗದೀಶ್ 7 ವರ್ಷಗಳ ಹಿಂದೆ ಇಂದ್ರರನ್ನು ಪ್ರೀತಿಸಿ ಮದುವೆ ಆಗಿದ್ದನು. ಬಳಿಕ ಜೀವನ ನಿಭಾಯಿಸಲು ಈಕೆ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಲು ಜಗದೀಶ್ ತನ್ನ ಹೆಂಡತಿಗೆ ಪ್ರತಿನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಆಡುವಳ್ಳಿಯಲ್ಲಿರುವ ಅಜ್ಜಿ ಮನೆಗೆ ಮಕ್ಕಳು ತೆರಳಿದ್ದಾಗ, ಹೆಂಡತಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಕುಡಿದು ಬಂದ ಜಗದೀಶ್ ಮಕ್ಕಳು ಮನೆಯಲ್ಲಿ ಇಲ್ಲವೆಂದು ಜಗಳವಾಡಿದ್ದ. ನಂತರ ಮಕ್ಕಳನ್ನು ವಾಪಸ್ ಕರೆ ತರಲಾಗಿತ್ತು. ಬಳಿಕ ಈಕೆ ಮಲಗಿದ್ದ ವೇಳೆ ಜಗದೀಶ್ ಕಂಠ ಪೂರ್ತಿ ಕುಡಿದು ಬಂದು ರಾತ್ರಿ 12 ಗಂಟೆ ಸಮಯದಲ್ಲಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಬಾಗಿಲ ಚಿಲಕ ಹಾಕಿಕೊಂಡು ಹೊರ ಹೋಗಿದ್ದ ಎನ್ನಲಾಗಿದೆ.

ಆಕೆಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬೆಂಕಿ ನಂದಿಸಿ ತಕ್ಷಣ ನಗರದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಕಳೆದ ಒಂದು ವಾರದಿಂದ ಸಾವು ಬದುಕಿನ ನಡುವೆ ಹೊರಾಟ ನಡೆಸಿದರೂ ಆಕೆಯ ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದ್ರ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದಿದ್ದಾರೆ.

ನನ್ನನ್ನು ಮದುವೆಯಾದ ಜಗದೀಶ್ ಮತ್ತೊರ್ವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದ ಒಂದೆ ಕಾರಣಕ್ಕೆ ಮನೆಯಿಂದ ಹಣ ತರಲು ಪೀಡಿಸುತ್ತಿದ್ದ. ನನ್ನನ್ನು ಸಾಯಿಸುವ ಉದ್ದೇಶದಿಂದಲೇ ಜಗಳ ತೆಗೆದಿರುವುದಾಗಿ ಇಂದ್ರ ಸಾಯುವ ಮುನ್ನ ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ. ಅದರಂತೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು 2 ದಿನಗಳ ಹಿಂದೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News