ಜಿಲ್ಲೆಯಾದ್ಯಂತ ವರ್ಷಧಾರೆಯ ಅಬ್ಬರ: ನದಿಗಳ ಆರ್ಭಟ
ಶಿವಮೊಗ್ಗ, ಜೂ.29: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದ್ದು, ಜಲಾನಯನ ಪ್ರದೇಶಗಳಲ್ಲಿ ಮಳೆ ತೀವ್ರಗೊಂಡಿರುವುದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಈ ನಡುವೆ ತುಂಗಾ ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಲಾಗಿದ್ದು, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿದೆ. ವಿಶೇಷವಾಗಿ ಪಶ್ಚಿಮಘಟ್ಟ ವ್ಯಾಪ್ತಿಯ ತಾಲೂಕುಗಳಾದ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬುಧವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 77.17 ಮಿಲಿ ಮೀಟರ್ (ಮಿ.ಮೀ.) ಆಗಿದೆ. ಪ್ರಸ್ತುತ ಜೂನ್ ಮಾಹೆಯಲ್ಲಿ ಬಿದ್ದ ಅತ್ಯಧಿಕ ಮಳೆ ಇದಾಗಿದೆ. ಮಳೆಯ ಸರಾಸರಿ ಪ್ರಮಾಣ
ಶಿವಮೊಗ್ಗ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ 35.40 ಮಿ.ಮೀ., ಭದ್ರಾವತಿ 22 ಮಿ.ಮೀ., ತೀರ್ಥಹಳ್ಳಿ 139.40 ಮಿ.ಮೀ., ಸಾಗರ 88.40 ಮಿ.ಮೀ., ಶಿಕಾರಿಪುರ 38.60 ಮಿ.ಮೀ., ಸೊರಬ 55.20 ಮಿ.ಮೀ. ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 161.20 ಮಿ.ಮೀ. ವರ್ಷಧಾರೆಯಾಗಿದೆ. ಉಳಿದಂತೆ ಘಟ್ಟ ಪ್ರದೇಶಗಳಾದ ಹುಲಿಕಲ್ನಲ್ಲಿ 276 ಮಿ.ಮೀ., ಮಾಣಿಯಲ್ಲಿ 286 ಮಿ.ಮೀ., ಸಾವೇಹಕ್ಲುವಿನಲ್ಲಿ 200 ಮಿ.ಮೀ. ಮಳೆಯಾಗಿದೆ. ಹೆಚ್ಚಳ: ಇಷ್ಟು ದಿನ ನೀರಿಲ್ಲದೆ ನಿಸ್ತೇಜವಾಗಿದ್ದ ಜಿಲ್ಲೆಯ ಜೀವ ನದಿಗಳಾದ ತುಂಗಾ, ಭದ್ರಾ, ಶರಾವತಿ, ಕುಮುದಾವತಿ, ದಂಡಾವತಿ, ವರಾಹಿ ನದಿಗಳ ಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡು ಬಂದಿದೆ. ಅದರಲ್ಲಿಯೂ ತುಂಗಾ ನದಿಯೂ ಮೈದುಂಬಿ ಹರಿಯಲಾರಂಭಿಸಿದೆ. ಇದರಿಂದ ಗಾಜನೂರು ಬಳಿಯಿರುವ ತುಂಗಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಮತ್ತೊಂದೆಡೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳಿವೆ. ಮಂಡಗದ್ದೆ ಪಕ್ಷಿಧಾಮಕ್ಕೆ ಕುತ್ತು...!:ತಿೀರ್ಥಹಳ್ಳಿ ಹಾಗೂ ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿದೆ. ಇದರಿಂದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಪಕ್ಷಿಧಾಮವು ಪ್ರತಿವರ್ಷದಂತೆ ಈ ಬಾರಿ ಕೂಡ ತುಂಗಾ ನದಿಯ ಪ್ರವಾಹಕ್ಕೆ ಸಿಲುಕುವ ಆತಂಕ ಎದುರಾಗಿದೆ. ಇದರಿಂದ ಸಂತಾನೋತ್ಪತ್ತಿಗೆ ವಿದೇಶದಿಂದ ಆಗ ಮಿಸಿರುವ ಪಕ್ಷಿ ಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ನದಿಯ ನೀರಿನ ಹರಿವು ಹೆಚ್ಚಳ ವಾದರೆ ಪಕ್ಷಿಗಳು ಮರದಲ್ಲಿ ಕಟ್ಟಿರುವ ಗೂಡುಗಳು ನೀರಿನಲ್ಲಿ ಕೊಚ್ಚಿ ಹೋಗಲಿವೆೆ. ಇದು ಪ್ರತಿವರ್ಷದ ಬಾನಾಡಿಗಳ ಗೋಳಿನ ವ್ಯಥೆಯಾಗಿದೆ ಎಂದು ಸ್ಥಳೀಯರು ತಿಳಿಸುತ್ತಾ
ರೆ. ಕೃಷಿ ಚುರುಕು: ಜೂ
ನ್ ಪ್ರಾರಂಭದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಇದರಿಂದ ಕೃಷಿ ಚಟುವಟಿಕೆ ಕೂಡ ಬಿರುಸುಗೊಂಡಿತ್ತು. ತದನಂತರ ನೈಋತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡು ಮಳೆ ಮಾಯವಾಗಿತ್ತು. ಇದು ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿತ್ತು. ರೈತರು ಹಲವೆಡೆ ಮೆಕ್ಕೆಜೋಳ ಬಿತ್ತನೆಯನ್ನು ಮಾಡಿದ್ದರು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತೆ ಚಾಲನೆ ಸಿಕ್ಕಿದೆ. ಬಹುತೇಕ ಎಲ್ಲೆಡೆ ಹದ ಮಳೆಯಾಗಿರುವುದರಿಂದ ಭತ್ತ ಬೆಳೆಗಾರರು ಸಂತಸಗೊಂಡಿದ್ದಾರೆ. ಭತ್ತ ನಾಟಿ ಹಾಗೂ ಬಿತ್ತನೆ ಕಾರ್ಯ ಪ್ರಾರಂಭಿಸಲು ಸಿದ್ಧ್ದತೆ ಮಾಡಿಕೊಳ್ಳುತ್ತಿದ್ದಾರೆ.
ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ
: ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮದಿಂದ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, 24 ಗಂಟೆ ಅವಧಿಯಲ್ಲಿ ಡ್ಯಾಂನಲ್ಲಿ ಸುಮಾರು ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಬುಧವಾರ ಬೆಳಗ್ಗೆಯ ಮಾಹಿತಿಯ ಪ್ರಕಾರ ಲಿಂಗನಮಕ್ಕಿ ಡ್ಯಾಂನ ಒಳಹರಿವು 24,711 ಕ್ಯೂಸೆಕ್ಗೆ ಏರಿಕೆಯಾಗಿದೆ. ಹೊರಹರಿವನ್ನು ಕಡಿಮೆಗೊಳಿಸಲಾಗಿದ್ದು, 401 ಕ್ಯೂಸೆಕ್ ಇಳಿಕೆ ಮಾಡಲಾಗಿದೆ. ಡ್ಯಾಂನ ನೀರಿನ ಮಟ್ಟ 1,758.00 (ಗರಿಷ್ಠ ಮಟ್ಟ : 1,819) ಅಡಿಯಿದೆ. ಡ್ಯಾಂ ವ್ಯಾಪ್ತಿಯಲ್ಲಿ 193.40 ಮಿಲಿ ಮೀಟರ್ (ಮಿ.ಮೀ.) ವರ್ಷಧಾರೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1,769.95 ಅಡಿಯಷ್ಟಿತ್ತು. ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದ ಹಿನ್ನೆಲೆಯಲ್ಲಿ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಬಿಡಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಡ್ಯಾಂನ 15 (ಒಟ್ಟು : 22) ಕ್ರಸ್ಟ್ ಗೇಟ್ ತೆರೆದು ಸುಮಾರು 30 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಡ್ಯಾಂ ವ್ಯಾಪ್ತಿಯ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.