×
Ad

‘ಮದುವೆ ಎಂದರೆ ಉಸಿರುಗಟ್ಟಿಸುವ ವಾತಾವರಣವಲ್ಲ’

Update: 2016-07-03 23:16 IST

ಕಡೂರು, ಜು.3: ಪ್ರತಿ ಗ್ರಾಮಗಳಿಗೆ ಕೆರೆಗಳು ಹೇಗೆ ಮುಖ್ಯವೋ ಅದೇ ರೀತಿ ಪ್ರತಿ ಗ್ರಾಮಕ್ಕೊಂದು ಸಮುದಾಯ ಭವನ ಇರಬೇಕಿದೆ. ಈ ಸಮುದಾಯ ಭವನದಲ್ಲಿ ನಡೆಯುವ ಮದುವೆಗಳು ಉಸಿರುಗಟ್ಟುವ ವಾತಾವರಣವಾಗಿ ನಿರ್ಮಾಣವಾಗದೆ ಉತ್ತಮವಾಗಿ ವಧು-ವರರು ಬಾಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಹೇಳಿದ್ದಾರೆ.

ಅವರು ತಾಲೂಕಿನ ಆಸಂದಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸಮುದಾಯ ಭವನದ ಉದ್ಘಾಟನೆ ಕಾರ್ಯವನ್ನು ನೆರವೇರಿಸಿ ಸರ್ವ ಶರಣದ ಸಮ್ಮೇಳನದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ, ಹಿಂದಿನ ದಿನಗಳಲ್ಲಿ ಮದುವೆ ಎಂದರೆ ಅದರದ್ದೇ ಆದ ಸಂಸ್ಕೃತಿ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಸತಿಪತಿಗಳು ಕಿತ್ತಾಡುವುದೇ ಒಂದು ಕಾರ್ಯವಾಗಿ ಮನಸ್ಸಿನ ನೆಮ್ಮದಿ ಹಾಳಾಗುತ್ತಿದೆ. ಹಿರಿಯರೂ ಸಹ ತಮ್ಮ ಮಕ್ಕಳು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿರುವುದು ಸರಿಯಾದ ಕ್ರಮ ಅಲ್ಲ. ಮಕ್ಕಳನ್ನು ತಿದ್ದಿ ಸಂಸಾರಗಳು ಉತ್ತಮವಾಗಿ ನಡೆಯಲು ಸಹಕಾರಿಯಾಗಬೇಕಿದೆ ಎಂದರು.

                ಗ್ರಾಮಗಳ ಜನರ ಬದುಕನ್ನು ಕಟ್ಟಿಕೊಡಲು ನಮ್ಮ ಮತದ ಹಿರಿಯ ಶ್ರೀಗಳ ಶ್ರಮ ಬಹಳಷ್ಟು ಇದೆ. ಪುರಾಣದ ಕಥೆಗಳು ವಾಸ್ತವ ಜೀವನಕ್ಕೆ ಪಡಿಯಚ್ಚುಗಳು. ತವರು ಮನೆ ಹೆಂಗಸರಿಗೆ ಶಾಂತಿ-ನೆಮ್ಮದಿ ನೀಡಲಿದೆ. ಗ್ರಾಮಗಳ ಕೆಲಸಗಳು ಎಲ್ಲರ ಸಹಕಾರದಿಂದಾಗಬೇಕಿದೆ. ರಾಜಕೀಯ ಧುರೀಣರು ಇತ್ತೀಚಿನ ದಿನಗಳಲ್ಲಿ ಊದುವ ಶಂಖಗಳಾಗಿರುತ್ತಾರೆ. ಇವರು ನೀಡುವ ಶಂಖಗಳಾಗಬೇಕಿದೆ. ಪಾರ್ಟಿ-ಪಕ್ಷಗಳು ಚುನಾವಣೆಯಲ್ಲಿ ಮಾತ್ರ.ಅಭಿವೃದ್ಧಿಯಲ್ಲಿ ಪಕ್ಷಗಳು ಇರಬಾರದು. ನೋವು, ಸಂಕಷ್ಟ ಎಲ್ಲರ ಬದುಕಿನಲ್ಲಿದೆ. ನೋವಿನ ಮಧ್ಯೆ ಬದುಕನ್ನು ಕಲಿಸಿದವರು ಶರಣರುಗಳು ಎಂದು ತಿಳಿಸಿದರು.

  ಬದುಕು ಹಾಳಾಗದಂತೆ ಸಮತೆ ಮತ್ತು ಸೈರಣೆಯನ್ನು ತಿಳಿಯಬೇಕಿದೆ. ಇದು ಇದ್ದಾಗ ಮಾತ್ರ ಜೀವನದಲ್ಲಿ ಬದುಕು ಸಾಧ್ಯ. ಎಲ್ಲರ ಬದುಕಿನಲ್ಲೂ ನೋವು ಇರಲಿದೆ. ಪ್ರತಿ ವ್ಯಕ್ತಿಯೂ ಬದುಕಿನಲ್ಲಿ ಏನೇ ಸಮಸ್ಯೆಗಳು ಬಂದರೂ ಆದರ್ಶವನ್ನು ಇಟ್ಟುಕೊಂಡು ಎದುರಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಿದೆ. ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಕಲಿಯಬೇಕಿದೆ. ಸಾಮಾಜಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. ಕಾನೂನಿನಿಂದಲೇ ವ್ಯಕ್ತಿ ಸುಧಾರಿಸಲು ಸಾಧ್ಯವಿದೆ. ಹೊಣೆಗಾರಿಕೆಯನ್ನು ಅರಿತು ಜೀವನ ನಿರ್ವಹಿಸಬೇಕಿದೆ. ಸಮಾರಂಭವನ್ನು ಲಲಿತಮ್ಮ ಉದ್ಘಾಟಿಸಿದರು. ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್, ಧರ್ಮೇ ಗೌಡ, ವೈ.ಸಿ. ವಿಶ್ವನಾಥ್, ತರೀಕೆರೆ ಸುರೇಶ್ ಮಾತನಾಡಿದರು. ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜ್, ವನಮಾಲ ದೇವರಾಜ್, ಧ್ರುವಕುಮಾರ್, ಭಾಗ್ಯ ಜಯಣ್ಣ, ಎಂ. ಮರುಳಸಿದ್ಧಪ್ಪ, ಸಿ.ಎನ್. ಶೇಖರಪ್ಪ, ಎಸ್.ಜಿ. ರಾಮಪ್ಪ, ಕಲ್ಲುರುಡಪ್ಪ, ಎ.ಸಿ. ಚಂದ್ರಪ್ಪ, ಕೆ.ಎಂ. ಮಹೇಶ್ವರಪ್ಪ, ನವೀನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News