×
Ad

ಶಿವಮೊಗ್ಗ ಎಸ್ಪಿಯಿಂದ ರ್ಯಾಫ್ಟಿಂಗ್ ಸಾಹಸ

Update: 2016-07-05 23:20 IST

ಶಿವಮೊಗ್ಗ, ಜು.5: ತನ್ನ ನೇರ-ನಿರ್ಭೀತ ಕಾರ್ಯ ವೈಖರಿಯ ಮೂಲಕ ‘ಟ್ರಬಲ್ ಶೂಟರ್’ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರವರು ಮಂಗಳವಾರ ಮತ್ತೊಂದು ಸಾಹಸ ಮಾಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  ಮೈದುಂಬಿ ಹರಿಯುತ್ತಿರುವ, ಪ್ರವಾಹದ ಭೀತಿ ಸೃಷ್ಟಿಸಿರುವ ತುಂಗಾ ನದಿಯಲ್ಲಿ ‘ರಿವರ್ ರ್ಯಾಫ್ಟಿಂಗ್’ ನಡೆಸುವ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ರಮ ನಡೆಸಿಕೊಟ್ಟರು. ಹೊರವಲಯ ಮತ್ತೂರು ಗ್ರಾಮದಿಂದ ಆರಂಭವಾದ ‘ರ್ಯಾಪ್ಟಿಂಗ್’ ಸಾಹಸವು ನಗರದ ಕೋಟೆ ರಸ್ತೆ ಸಮೀಪದ ಕೋರ್ಪಳಯ್ಯನ ಛತ್ರದ ಬಳಿ ಸಮಾಪನೆ ಗೊಂಡಿತು. ಈ ವೇಳೆ ಸಾರ್ವಜನಿಕರು ಎಸ್‌ಪಿ ಸೇರಿದಂತೆ ‘ರ್ಯಾಫ್ಟಿಂಗ್’ ಸಾಹಸದಲ್ಲಿ ಭಾಗಿಯಾಗಿದ್ದವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾಹಸ ಅಕಾಡಮಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ರ್ಯಾಫ್ಟಿಂಗ್’ ಸಾಹಸ ಆಯೋಜಿಸಲಾಗಿತ್ತು. ಸುಮಾರು 10 ಜನರಿದ್ದ ತಂಡವು 7 ಕಿ.ಮೀ. ವರೆಗೆ ನದಿಯಲ್ಲಿ ರ್ಯಾಫ್ಟಿಂಗ್ ನಡೆಸಿ, ನಾಗರಿಕರ ಗಮನ ಸೆಳೆಯಿತು.
 ರ್ಯಾಫ್ಟಿಂಗ್ ಸಾಹಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ. ರವಿ ಡಿ. ಚೆನ್ನಣ್ಣನವರ್, ಸಂಚಾರ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರ್ಯಾಪ್ಟಿಂಗ್ ಸಾಹಸ ನಡೆಸಲಾಯಿತು.
‘ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾವು-ನೋವುಗಳು ಸಂಭವಿಸುತ್ತಿವೆ. ಪ್ರತಿಯೋರ್ವ ನಾಗರಿಕರು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ವಾಹನ ಸಂಚಾರದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಇದೇ ವೇಳೆ ಮನವಿ ಮಾಡಿದರು. ರ್ಯಾಪ್ಟಿಂಗ್ ಸಾಹಸದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಹೇಮಂತರಾಜು, ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರ್ಯಾಫ್ಟಿಂಗ್ ಹೊಸ ರೀತಿಯ ಆತ್ಮವಿಶ್ವಾಸ ಮೂಡಿಸುತ್ತವೆ. ಯುವಕರಿಗೆ ಸ್ಪೂರ್ತಿಯಾಗಿದೆ ಎಂದು ಅನುಭವ ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News