ಡಿವೈಎಸ್ಪಿ ಎಂ.ಕೆ.ಗಣಪತಿಗೆ ಸಂಘ ಸಂಸ್ಥೆಗಳಿಂದ ಶ್ರದ್ಧಾಂಜಲಿ
ಮಡಿಕೇರಿ, ಜು.9: ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಭಾವಚಿತ್ರಕ್ಕೆ ನಗರ ಠಾಣೆಯ ಮುಂಭಾಗದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ವಿವಿಧ ಸಂಘ ಸಂಸ್ಥೆಗಳು ಶ್ರದ್ಧಾಂಜಲಿ ಸಲ್ಲಿಸಿದವು.
ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ, ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಎಂ.ರವಿ, ಕುಲಾಲ ಸಮಾಜದ ಎಂ.ಡಿ. ನಾಣಯ್ಯ, ಪ್ರಮುಖರಾದ ಕೋಳಿಬೈಲು ಜಯರಾಂ, ವಸಂತ ಭಟ್, ನಿತ್ಯಾನಂದ ರೈ, ಸತ್ಯೇಶ್ ಭಟ್, ಉದಯ ಕುಮಾರ್ ಭಟ್, ಪಾರ್ವತಿ ಆಚಾರ್ಯ, ವಿಮಲಾ ಗೌಡ, ಎಂ.ವಿ. ಪ್ರವೀಣ್ ಸೇರಿದಂತೆ ಹಲವರು ಎಂ.ಕೆ. ಗಣಪತಿಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷದ ವೌನಾಚರಣೆಯ ಮೂಲಕ ಗೌರವ ಸಲ್ಲಿಸಿದರು.
ಹ್ಯೂಮನ್ ರೈಟ್ಸ್ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, ಪ್ರಾಮಾಣಿಕ ಮತ್ತು ದಿಟ್ಟ ಅಧಿಕಾರಿ ಎಂ.ಕೆ. ಗಣಪತಿ ಅವರು ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಬ್ಬರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಆರೋಪವಿದ್ದು, ದಕ್ಷ ಅಧಿಕಾರಿಗಳು ಧೃತಿಗೆಡಬಾರದು ಎಂದರು. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಾರೇ ಆಗಲಿ ಇಂತಹ ಕಿರುಕುಳಗಳಿಗೆ ಸಿಲುಕಿದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಬೇಕು. ಸಾವಿಗೆ ಶರಣಾದಲ್ಲಿ ದಕ್ಷ ಅಧಿಕಾರಿಗಳಿಗಾದ ಅನ್ಯಾಯ, ನೋವುಗಳು ಮುಚ್ಚಿಹೋಗುತ್ತವೆ. ಇವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಂಡಾಗ ಹೋರಾಟಕ್ಕೆ ಬಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇತರ ದೇಶಗಳಲ್ಲಿ ಅಧಿಕಾರಿ ವರ್ಗ ಧಂಗೆ ಏಳುವ ಪರಿಸ್ಥಿತಿ ಎದುರಾಗಿದ್ದು, ಭ್ರಷ್ಟ ರಾಜಕಾರಣಿಗಳಿಂದ ನಮ್ಮ ದೇಶದಲ್ಲಿಯೂ ಇದೇ ಪರಿಸ್ಥಿತಿ ಉದ್ಭವಿಸಬಹುದೆಂದು ಹರೀಶ್ ಆಚಾರ್ಯ ಎಚ್ಚರಿಸಿದರು.
ಸಿಬಿಐ ತನಿಖೆಗೆ ಒತ್ತಾಯ: ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಪೀಪಲ್ಸ್ ಮೂವ್ಮೆಂಟ್ ಪಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೆೇಕೆಂದು ಆಗ್ರಹಿಸಿದರು.
ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿ ತನ್ನ ಸಾವಿಗೂ ಮುನ್ನ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿ, ತಮ್ಮ ಮೇಲಿನ ಕಿರುಕುಳಗಳಿಗೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಸಿಬಿಐ ತನಿಖೆ ಅವಶ್ಯವೆಂದು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.