ಭೂಮಿಯ ತಾಪಮಾನ ನಿಯಂತ್ರಿಸಲು ಗಿಡಮರ ಬೆಳೆಸಿ: ಅನಂತ ಹೆಗಡೆ
ಚಿಕ್ಕಮಗಳೂರು, ಜು.9: ಭೂಮಿಯ ತಾಪಮಾನ ಏರಿಕೆ ಮತ್ತು ಹವಾಮಾನದ ವೈಪರೀತ್ಯ ನಿಯಂತ್ರಿಸಲು ವ್ಯಾಪಕವಾಗಿ ಗಿಡಮರಗಳನ್ನು ಬೆಳೆಸಬೇಕೆಂದು ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರಾದ ಪರಿಸರವಾದಿ ಅನಂತ ಹೆಗಡೆ ಆಶೀಸರ ಕರೆ ನೀಡಿದರು.
ಹರಿಹರಪುರದ ಪ್ರಬೋಧಿನಿ ಗುರುಕುಲದಲ್ಲಿ ಅರಣ್ಯಇಲಾಖೆ, ಪಶ್ಚಿಮಘಟ್ಟಉಳಿಸಿ ಆಂದೋಲನ ಮತ್ತು ಪ್ರಬೋಧಿನಿ ಟ್ರಸ್ಟ್ಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮನುಷ್ಯನ ದುರಾಸೆಯಿಂದ ಪ್ರಕೃತಿದತ್ತವಾದ ದಟ್ಟ ಅರಣ್ಯ ಪ್ರದೇಶ ನಾಶವಾಗುತ್ತಿದೆ. ಮಲೆನಾಡಿನ ಗ್ರಾಮಗಳ ಸಂಮೃದ್ಧಿಯ ಸರಪಳಿ ಯಲ್ಲಿ ಕೆರೆಗಳು-ಹಳ್ಳಗಳು ಗಿಡ-ಮರಗಳು ಹುಲ್ಲುಗಾವಲು ಪ್ರಮುಖ ಪಾತ್ರ ವಹಿಸುತ್ತವೆ. ಈ ಸರಪಳಿ ಕಳಚಿದರೆ ವಿನಾಶ ತಪ್ಪಿದ್ದಲ್ಲ. ಚಿಕ್ಕಮಗಳೂರು ಸೇರಿದಂತೆ ಪಶ್ಚಿಮಘಟ್ಟ ಗಳನ್ನೊಳಗೊಂಡ ನಿತ್ಯಹರಿದ್ವರ್ಣ ಕಾಡುಗಳು ಸಸ್ಯ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ಕೀಟ ಸೇರಿದಂತೆ ಅಪರೂಪದ ಜೀವವೈವಿಧ್ಯ ಹೊಂದಿದೆ ಎಂದರು. ಆಹಾರಕ್ಕೆ, ನಿತ್ಯ ಬಳಕೆಗೆ, ಉರುವಲಿಗೆ ಇಂಧನವಾಗಿ ವ್ಯಾಪಕವಾಗಿ ಮರಕಡಿಯಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಗಿಡಗಳನ್ನು ನೆಡುತ್ತಿಲ್ಲ. ಹೆಚ್ಚು ಹೆಚ್ಚು ಹಸಿರು ಬೆಳೆಸುವುದು ನಮ್ಮ ಹೊಣೆಗಾರಿಕೆ. ಮರಕಡಿಯುವುದು ಅಭಿವೃದ್ಧಿಯಲ್ಲ. ಪರಿಸರ ಜಾಗೃತಿ ಶಿಕ್ಷಣವನ್ನು ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಜನರಿಗೆ ವ್ಯಾಪಕವಾಗಿ ನೀಡುವ ಕೆಲಸ ವೃಕ್ಷಲಕ್ಷ ಆಂದೋಲನ ಮಾಡುತ್ತಿದೆ. ವಿಶೇಷವಾಗಿ ಸೌರಶಕ್ತಿಯಬಳಕೆ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಂತಹ ಪರ್ಯಾಯ ಮಾರ್ಗಗಳನ್ನು ವ್ಯಾಪಕವಾಗಿ ಬಳಸುವುದರಿಂದ ಕಾಡಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಮಾತನಾಡಿ, ಇರುವುದೊಂದೇ ಭೂಮಿ ಇದರ ರಕ್ಷಣೆ ನಮ್ಮೆಲ್ಲರ ಹೊಣೆ. ಗಿಡನೆಡುವ ಕಾರ್ಯಕ್ರಮವನ್ನು ಆಂದೋಲನ ರೂಪವಾಗಿ ಸರಕಾರ ನಡೆಸುತ್ತಿದೆ. ಬೀಜಬಿತ್ತನೆ ಹಾಗೂ ಗಿಡನೆಡುವ ಪ್ರಕ್ರಿಯೆಯನ್ನು ವ್ಯಾಪಕವಾಗಿ ಕೈಗೊಳ್ಳಲಾಗಿದೆ. ಮುಂಗಾರು ಸಂದರ್ಭ ಇದಾಗಿದ್ದು, ಸಸಿನೆಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಪರಿಸರಪ್ರಿಯ ಸಂಘಟನೆಗಳು, ಶಾಲಾಕಾಲೇಜುಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ಪರಿಸರಪ್ರಜ್ಞೆ ಬಿತ್ತುವಲ್ಲಿ ಹಿರಿಯರ ಮಾತುಗಳು ಪ್ರೇರಕವಾಗುತ್ತದೆ ಎಂದರು. ಕೊಪ್ಪವಲಯಾರಣ್ಯಾಧಿಕಾರಿ ಹಂಸವೇಣಿ, ಭಾರತೀಯ ವಿಜ್ಞಾನಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಕೃಷ್ಣ, ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಕುಮಾರಸ್ವಾಮಿ ಮಾತನಾಡಿದರು. ಪಶ್ಷಿಮಘಟ್ಟಉಳಿಸಿ ಆಂದೋಲನ ಜಿಲ್ಲಾ ಸಂಚಾಲಕ ಗಜೇಂದ್ರಗೊರಸುಕೊಡುಗೆ ಪ್ರಾಸ್ತಾವಿಸಿದರು. ಗುರುಕುಲದಮುಖ್ಯಸ್ಥ ಉಮೇಶ್ಆಚಾರ್ಯ, ಶಿಕ್ಷಕ ಅವಿನಾಶ್ಆಚಾರ್ಯ, ಫಾರೆಸ್ಟರ್ ಪುಷ್ಪಾಂಜಲಿ ಮತ್ತಿತರರು ಉಪಸ್ಥಿತರಿದ್ದರು.