ಕೋಟಿವೃಕ್ಷ ಕಾರ್ಯಕ್ರಮ ಪರಿಸರ ಸಂರಕ್ಷಣೆಗೆ ಸಹಕಾರಿ
ಚಿಕ್ಕಮಗಳೂರು, ಜು.12: ರಾಜ್ಯಾದ್ಯಂತ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಕೋಟಿವೃಕ್ಷ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಸರ್ವರೂ ಭಾಗಿಯಾದಾಗ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಹೇಳಿದ್ದಾರೆ.
ಅವರು ನಗರ ಹೊರವಲಯದ ಹಿರೇಮಗಳೂರಿನ ರುದ್ರಭೂಮಿಯಲ್ಲಿ ನವಚೇತನ ಯುವಕ ಸಂಘ ಹಮ್ಮಿಕೊಂಡಿದ್ದ ಕೋಟಿವೃಕ್ಷ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿ, ಇಂದಿನ ಯುಗ ಮಾನಸದಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಐಶಾರಾಮಿ ಜೀವನ ನಡೆಸುವ ಸಲುವಾಗಿ ಮರಕಡಿಯುವುದನ್ನೆ ಯೋಚನೆ ಮಾಡುತ್ತಾನೆ ಹೊರತು ಸಸಿನೆಟ್ಟು ಗಿಡ ಬೆಳೆಸಿ ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಟಿ ವೃಕ್ಷ ಕಾರ್ಯಕ್ರಮದಲ್ಲಿ ಗಿಡ ನೆಡುವುದು ಮಾತ್ರ ಅರಣ್ಯ ಇಲಾಖೆ ಕೆಲಸವಲ್ಲ. ಅದನ್ನು ಪೋಷಿಸಿ ಬೆಳೆಸುವ ಹೊಣೆಗಾರಿಗೆ ನಿಮ್ಮ ಮೇಲಿದೆ ಎಂದರು. ಮರ ಕಡಿಯುವುದು ಸುಲಭ ಆದರೆ ಒಂದು ಗಿಡನೆಟ್ಟು ಅದಕ್ಕೆ ನಿತ್ಯ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಬೇಕಾದರೆ ಅದರ ಹಿಂದಿನ ಶ್ರಮ ಬೆಳೆಸಿದವರಿಗೆ ಮಾತ್ರ ತಿಳಿಯುತ್ತದೆ ಎಂದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ನಾಣ್ನುಡಿಯನ್ನು ಸರ್ವರೂ ಪಾಲಿಸೋಣ ಎಂದರು.
ನವಚೇತನ ಯುವಕ ಸಂಘದ ಅಧ್ಯಕ್ಷ ಬಿ.ರೇವನಾಥ್ ಮಾತನಾಡಿ, ಮನುಷ್ಯಗೆ ಒಳ್ಳೆಯ ಗಾಳಿ,ನೀರು ಪೂರೈಕೆಯಾಗಬೇಕಾದರೆ ಗಿಡ, ಮರಗಳು ಸಮೃದ್ಧಿಯಾಗಿರಬೇಕು. ಪ್ರಕೃತಿ ಸೊಬಗನ್ನು ಅನುಭವಿಸಲು ಉತ್ತಮ ಪರಿಸರದ ಅಗತ್ಯವಿದೆ. ಈ ಸಂಬಂಧ ಪ್ರತಿವರ್ಷ ನಮ್ಮ ಸಂಘದಿಂದ ರುದ್ರಭೂಮಿ, ಶಾಲೆ ಆವರಣ, ರಸ್ತೆಬದಿಗಳಲ್ಲಿ ಸೇರಿದಂತೆ ಅವಶ್ಯವಿರುವ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಕುಡಿಯುವ ನೀರಿಗಾಗಿ ಹಪಹಪಿಸುವುದನ್ನು ನೋಡಿದಾಗ ಮಲೆನಾಡಿನ ಜನರಾದ ನಾವು ಪುಣ್ಯವಂತರು ಎನಿಸುತ್ತದೆ. ಉತ್ತಮ ಗಾಳಿ, ನೀರು ಬೆಳಕು, ಪ್ರಕೃತಿ ಸೊಬಗನ್ನು ಮಡಿಲಲ್ಲಿಟ್ಟುಕೊಂಡು ಅದರ ನಡುವೆ ಆರೋಗ್ಯವಂತರಾಗಿ ಬದುಕುತ್ತಿದ್ದೇವೆ ಎಂದರೆ ಹಿರಿಯರು ಗಿಡ ಮರಗಳನ್ನು ಬೆಳೆಸಿರುವುದೆ ಕಾರಣ ಎಂದು ತಿಳಿಸಿದರು. ಮಾಜಿ ನಗರಸಭಾ ಸದಸ್ಯ ಎಚ್.ಎಸ್.ಜಗದೀಶ್,ಶೌರ್ಯಚರಣ್,ಸೋಮನಾಥ್, ನಂದನ್,ಜನಕರಾಜ್,ಮಂಜುನಾಥ್,ಸಂಜೈ ಇತರರು ಉಪಸ್ಥಿತರಿದ್ದರು.