ಕುಸಿತದ ಭೀತಿಯ ಶಾಲೆಗಳಿಗೆ ಪರ್ಯಾಯ ವ್ಯವಸ್ಥೆ
ಕಾರವಾರ,, ಜು.12: ಶಾಲಾ ಕೊಠಡಿಗಳು ಕುಸಿಯುವ ಹಂತದಲ್ಲಿದ್ದರೆ ಅಂತಹ ಕಡೆಗಳಲ್ಲಿ ತರಗತಿಗಳನ್ನು ನಡೆಸದೆ ಪರ್ಯಾಯ ವ್ಯವಸ್ಥೆ ಕಲ್ಪಿಸ ಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಮಂಗಳವಾರ ಕಂದಾಯ ಇಲಾಖೆ ಸಭೆಯಲ್ಲಿ ಅತಿವೃಷ್ಟಿ ಎದುರಿ ಸಲು ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿ ಬಳಿಕ ಮಾತನಾಡುತ್ತಿದ್ದರು.
ಶಾಲೆಗಳಿಗೆ ವಿದ್ಯಾರ್ಥಿಗಳು ಹಳ್ಳಿಗಾಡುಗಳಿಂದ ಬರುವ ಹಾದಿಯಲ್ಲಿ ಅಪಾಯಕಾರಿ ಮತ್ತು ಕುಸಿತದ ಭೀತಿಯಲ್ಲಿರುವ ಕಾಲುಸಂಕಗಳನ್ನು ಗುರುತಿಸಿ ಅದನ್ನು ದುರಸ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದರು.
ವಿದ್ಯುತ್ ಸಂಪಕ ದರ್ ಕುರಿತು ಸಾರ್ವಜನಿಕರು ಸಲ್ಲಿಸುವ ಅಹವಾಲುಗಳಿಗೆ ತಕ್ಷಣ ಸ್ಪಂದಿಸಬೇಕು. ಕಾರವಾರ ನಗರದಲ್ಲಿ ತಾಂತ್ರಿಕ ದುರಸ್ತಿ ಇದ್ದರೆ ಮಾತ್ರ ಬುಧವಾರದ ದಿನ ವಿದ್ಯುತ್ ಕಡಿತ ಮಾಡಬೇಕು. ಜಲಾಶಯಗಳಲ್ಲಿ ನೀರಿನ ಮಟ್ಟದ ಕುರಿತು ನಿರಂತರ ನಿಗಾ ವಹಿಸಬೇಕು. ಹೆಚ್ಚುವರಿ ನೀರು ಬಿಡುಗಡೆ ಮಾಡುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚುವರಿ ನೀರು ಬಿಡುವುದರಿಂದ ನದಿಪಾತ್ರದಲ್ಲಿ ಉಂಟಾಗಬಹುದಾದ ಹಾನಿಯ ಕುರಿತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸ್ವಚ್ಛತಾ ಕಾರ್ಯ ಬಾಕಿ ಉಳಿದಿದ್ದರೆ ತಕ್ಷಣ ಪೂರ್ಣಗೊಳಿಸಬೇಕು. ಅಧಿಕಾರಿಗಳಿಗೆ ಈಗಾಗಲೇ ಒದಗಿಸಲಾಗಿರುವ ವಯರ್ಲೆಸ್ ಸೆಟ್ಗಳ ಕಾರ್ಯಕ್ಷಮತೆ ಪರಿಶೀಲಿಸಿ, ಸುಸ್ಥಿತಿಯಲಿ್ಲ ರುವುದನ್ನು ಖಾತ್ರಿಪಡಿಸಬೇಕು ಎಂದು ತಿಳಿಸಿದರು.
ಜಮೀನು ಒದಗಿಸಲು ಆದ್ಯತೆ: ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಲು ಆದ್ಯತೆಯ ಮೇರೆಗೆ ಜಮೀನು ಗುರುತಿಸಿ ಒದಗಿಸಬೇಕು. ಸರಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಿ ಕಟ್ಟಡ ನಿರ್ಮಿಸಲು ಅವಕಾಶವಿದೆ ಎಂದು ಅವರು ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.
ಬಾಕಿ ಉಳಿದಿರುವ ಪೋಡಿ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಬೇಕು. ಪೆನ್ಶನ್ ಅದಾಲತ್ಗಳನ್ನು ಕಾಟಾಚಾರಕ್ಕೆ ಮಾಡದೆ, ಎಲ್ಲಾ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಸ್ಮಶಾನ ಅಭಿವೃದ್ಧಿಗೆ ಒಂದು ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗಿದೆ. ಅಂತಹ ಕಡೆಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಅವಕಾಶವಿದ್ದು, ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.