ಅಕ್ಕಮಹಾದೇವಿ ವಚನಳು ಭಕ್ತಿರಸವನ್ನು ಉಕ್ಕಿಸುತ್ತದೆ: ಡಾ. ಶಿವಪ್ರಕಾಶ್
ಸಾಗರ, ಜು.17: ಅಕ್ಕಮಹಾದೇವಿ ವಚನಕಾರರಿಂದಲೇ ಸರ್ವಶ್ರೇಷ್ಠ ವಚನಕಾರ್ತಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾಳೆ ಎಂದು ನವದೆಹಲಿಯ ಜವಾಹರಲಾಲ್ ವಿವಿಯ ಪ್ರಾಧ್ಯಾಪಕ ಹಾಗೂ ಚಿಂತಕ ಡಾ. ಎಚ್.ಎಸ್.ಶಿವಪ್ರಕಾಶ್ ಹೇಳಿದರು. ತಾಲೂಕಿನ ಹೆಗ್ಗೋಡಿನ ನೀನಾಸಮ್ನಲ್ಲಿ ದಿ. ಕೆ.ವಿ.ಸುಬ್ಬಣ್ಣ ಸಂಸ್ಮರಣಾರ್ಥ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ಕಾಶ್ಮೀರ ಶೈವ ದರ್ಶನದಲ್ಲಿ ಅಕ್ಕಮಹಾದೇವಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಕಾಶ್ಮೀರ ಶೈವ ದರ್ಶನ ಹಾಗೂ ಅಕ್ಕಮಹಾದೇವಿ ವಚನಗಳ ಅಧ್ಯಯನ ಉತ್ತಮ ಬೆಳವಣಿಗೆ. ಉತ್ಪಲಾಚಾರ್ಯರ ಶಿವಸ್ತ್ರೋತ್ರದಲ್ಲಿ ಅಕ್ಕಮಹಾದೇವಿ ಅವರ ಕಾಶ್ಮೀರ ಶೈವ ದರ್ಶನದ ಚಿಂತನೆ ಕಾಣಿಸಿಕೊಳ್ಳುತ್ತದೆ. ಬಸವ ಕೇಂದ್ರಿತ ಹಾಗೂ ಅಲ್ಲಮ್ಮ ಕೇಂದ್ರೀತ ಸಂಕಥನಗಳು ಸಾಕಷ್ಟು ಬಂದಿದ್ದರೂ, ಈವರೆಗೂ ಅಕ್ಕಮಹಾದೇವಿ ಕೇಂದ್ರಿತ ಕಥನ ಬಂದಿಲ್ಲ ಎಂದು ತಿಳಿಸಿದರು. ಅನೇಕ ವಚನಕಾರರ ವಚನಗಳು ಓದಿದ ತಕ್ಷಣ ಅನುಭವ ಕೊಡುವುದಿಲ್ಲ. ಆದರೆ ಅಕ್ಕಮಹಾದೇವಿ ಅವರು ರಚಿಸಿದ ವಚನಗಳು ಬದುಕಿನ ದರ್ಶನವನ್ನು ಕಟ್ಟಿಕೊಡುತ್ತದೆ. ವಚನವನ್ನು ಸಾಹಿತ್ಯವೇ ಅಲ್ಲ ಎನ್ನುವ ಗುಂಪು ಸಹ ಇದೆ. ಆದರೆ ವಚನಗಳು ಸಾಹಿತ್ಯರೂಪ ತಳೆದು ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಲಾಗಾಯ್ತಿನಿಂದ ಯಶಸ್ಸು ಕಂಡಿದೆ. ಹಾಗೆ ನೋಡಿದರೆ ಅಕ್ಕ ಮಹಾದೇವಿ ಸಹ ಕಾವ್ಯಚಿಂತನೆ ನಡೆಸಿದ ದಾಖಲೆಗಳು ನಮಗೆ ಸಿಗುತ್ತದೆ ಎಂದರು.
ಅಕ್ಕಮಹಾದೇವಿ ವಚನಗಳು ಭಕ್ತಿರಸವನ್ನು ಉಕ್ಕಿಸುತ್ತದೆ. ಇದು ವೇದ ವಿರೋಧಿಯೂ ಅಲ್ಲ, ವೇದಪರವೂ ಅಲ್ಲ. ಆದರೆ ವಚನದಲ್ಲಿ ಭಕ್ತಿರಸ ಕಟ್ಟಿಕೊಡುವ ಮೂಲಕ ಜನಜೀವನಕ್ಕೆ ಹತ್ತಿರವಾಗಿದೆ. ಅಕ್ಕಮಹಾದೇವಿಯವರ ವಚನದ ಸಾಹಿತ್ಯ ಗುಣವನ್ನು ಮೊದಲು ಗುರುತಿಸಿದವರು ಸಾಹಿತಿ ತೀ.ನಂ. ಶ್ರೀಕಂಠಯ್ಯ ಎಂಬುದು ಗಮನಾರ್ಹ ಎಂದರು. ನೀನಾಸಂ ಅಧ್ಯಕ್ಷ ಶ್ರೀಧರ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ರಂಗಕರ್ಮಿ ಕೆ.ವಿ.ಅಕ್ಷರ, ವಿಮರ್ಶಕ ಪ್ರೊ. ಟಿ.ಪಿ.ಅಶೋಕ್, ಕಡಿದಾಳ್ ಶಾಮಣ್ಣ, ಸವಿತಾ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು. ನಂತರ ರಂಗಕರ್ಮಿ ಕೆ.ವಿ.ಅಕ್ಷರ ಕನ್ನಡಕ್ಕೆ ರೂಪಾಂತರಿಸಿ, ನಿರ್ದೇಶಿಸಿದ ನೀನಾಸಮ್ ರಂಗ ವಿದ್ಯಾರ್ಥಿಗಳು ಅಭಿನಯಿಸಿದ ‘ಮಾಲತಿ-ಮಾಧವ’ ನಾಟಕ ಪ್ರದರ್ಶನಗೊಂಡಿತು.