ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಅಪರಾಧ : ಸಾಹಿತಿ ಡಾ. ನಾ.ಡಿಸೋಜ

Update: 2016-07-19 17:28 GMT

ಸಾಗರ, ಜು.19: ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವೈದ್ಯ ಸಿಬ್ಬಂದಿಯರ ಮೇಲೆ ರೋಗಿಯ ಕಡೆಯವರು ಹಲ್ಲೆ ನಡೆಸುವುದು ಅಕ್ಷಮ್ಯ ಅಪರಾಧ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು. ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಸಾಗರ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಸೇವೆ ಮಾಡುತ್ತಿರುವವರನ್ನು ಸಮಾಜ ಗೌರವಾಧಾರಗಳಿಂದ ನೋಡಿಕೊಳ್ಳಬೇಕು. ಯಾವ ವೈದ್ಯನೂ ರೋಗಿಯ ಸಾವನ್ನು ಬಯಸುವುದಿಲ್ಲ. ಕೆಲವೊಮ್ಮೆ ಅಚಾತುರ್ಯ ನಡೆಯುತ್ತದೆ. ಅದನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗದೆ, ಕುಳಿತು ಚರ್ಚಿಸಿ ತೀರ್ಮಾನಕ್ಕೆ ಬರುವ ನಿಟ್ಟಿನಲ್ಲಿ ಸಮಾಜ ಚಿಂತನೆ ನಡೆಸಬೇಕು. ವೈದ್ಯರು ಮಾತ್ರ ಶ್ರೇಷ್ಠರಾಗಿರಬೇಕು ಎಂದು ಭಾವಿಸುವುದಕ್ಕಿಂತ ಎಲ್ಲರೂ ಆ ನಿಯಮ ಪಾಲನೆ ಮಾಡಿದಾಗ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಕೆ.ಸಿ.ರಾಯ್ ಹೆಸರಿನಲ್ಲಿ ಪ್ರತಿ ವರ್ಷ ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ. ಅಂತಹವರ ಹೆಸರಿಗೆ ಕಳಂಕ ಬಾರದಂತೆ ಸಹ ವೈದ್ಯಸಿಬ್ಬಂದಿ ನಡೆದುಕೊಳ್ಳಬೇಕು. ವೈದ್ಯ ದಿನಾಚರಣೆ ದಿನದಲ್ಲಿ ಇನ್ನಷ್ಟು ಉತ್ತಮ ಆರೋಗ್ಯಸೇವೆ ನೀಡುವ ಸಂಕಲ್ಪ ಮಾಡಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್ ಮಾತನಾಡಿ, ಬದಲಾದ ದಿನಮಾನಗಳಲ್ಲಿ ವೈದ್ಯವೃತ್ತಿ ಅತ್ಯಂತ ಕಠಿಣವಾಗುತ್ತಿದೆ. ಹಳ್ಳಿಯಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸಿ, ವೈದ್ಯವೃತ್ತಿ ಪಡೆದವರು ಸಹ ಗ್ರಾಮೀಣ ಪ್ರದೇಶದಲ್ಲಿ ವೈದ್ಯರಾಗಿ ಕೆಲಸ ಮಾಡಲು ಇಷ್ಟಪಡದ ಸ್ಥಿತಿ ನಿರ್ಮಾಣವಾಗಿದೆ. ವೈದ್ಯವೃತ್ತಿ ಕಲುಷಿತಗೊಂಡರೆ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದರು. ಸಮರ್ಪಣಾ ಭಾವದಿಂದ ದಿನದ ಹೆಚ್ಚು ಹೊತ್ತು ಆರೋಗ್ಯಸೇವೆಯಲ್ಲಿ ತೊಡಗಿಕೊಂಡಿರುವ ವೈದ್ಯಸಿಬ್ಬಂದಿಯ ಬಗ್ಗೆ ಸದಾ ಗೌರವ ಅಗತ್ಯ. ಹೊಸ ತಲೆಮಾರಿನ ಯುವ ವೈದ್ಯರಿಗೆ ಹಿರಿಯ ವೈದ್ಯರು ನಡೆಸಿರುವ ಉತ್ತಮ ಸೇವೆ ಮಾರ್ಗದರ್ಶನವಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟದಿಂದ ಇಂತಹ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ವೆಂಕಟಗಿರಿ ರಾವ್ ಸಾಗರ, ಡಾ. ರಂಗಸ್ವಾಮಿ ಭದ್ರಾವತಿ ಹಾಗೂ ಡಾ. ಸಿದ್ದನಗೌಡ ಪಾಟೀಲ್ ಸಾಗರ ಅವರನ್ನು ಸನ್ಮಾನಿಸಲಾಯಿತು.ಒಕ್ಕ್ಕೂಟದ ಸ್ಥಳೀಯ ಶಾಖೆ ಅಧ್ಯಕ್ಷ ವೈ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಐಎಂಎ ಕೋ-ಆರ್ಡಿನೇಟರ್ ಡಾ. ಮಹಾಬಲೇಶ್ವರ ಎಸ್.ಡಿ., ಲತಾ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News