×
Ad

ಅಕ್ರಮ ನಲ್ಲಿ ಸಂಪರ್ಕ ಸಕ್ರಮಗೊಳಿಸಿ ಇಲ್ಲವೇ, ಕಡಿತ ಮಾಡಿ: ಜಿಲ್ಲಾಧಿಕಾರಿ ನಕುಲ್

Update: 2016-07-20 21:47 IST

ಕಾರವಾರ, ಜು.20: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಪಡೆದಿರುವ ನಲ್ಲಿ ಸಂಪರ್ಕಗಳನ್ನು ದಂಡ ವಸೂಲಿ ಮಾಡಿ ಸಕ್ರಮಗೊಳಿಸಬೇಕು. ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಬುಧವಾರ ನಗರದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಗರ ವ್ಯಾಪ್ತಿಯಲ್ಲಿ 98, 083 ಆಸ್ತಿಗಳ ಪೈಕಿ ಕೇವಲ 38, 572 ಕಡೆಗಳಲ್ಲಿ ಮಾತ್ರ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಕಾರವಾರ ನಗರದಲ್ಲಿ 15, 653 ಆಸ್ತಿಗಳ ಪೈಕಿ ಕೇವಲ 1, 583 ಅಧಿಕೃತ ನಲ್ಲಿ ಸಂಪರ್ಕಗಳಿವೆ. ಶಿರಸಿಯಲ್ಲಿ 16, 792 ಆಸ್ತಿಗಳ ಪೈಕಿ 7, 747 ಅಧಿಕೃತ ನಲ್ಲಿ ಸಂಪರ್ಕಗಳಿವೆ. ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ ಅನಧಿಕೃತ ನಲ್ಲಿ ಸಂಪರ್ಕಗಳನ್ನು ಗುರುತಿಸಿ ನಿಯಮಾನುಸಾರ ಸಕ್ರಮಗೊಳಿಸಬೇಕು. ಇಲ್ಲದಿದ್ದಲ್ಲಿ ಅಂತಹ ಸಂಪರ್ಕಗಳನ್ನು ಕಡಿತ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಕಾರವಾರ, ದಾಂಡೇಲಿ ಮತ್ತು ಶಿರಸಿ ನಗರಸಭೆ, ಭಟ್ಕಳ ಪುರಸಭೆ, ಹೊನ್ನಾವರ, ಸಿದ್ದಾಪುರ, ಮುಂಡಗೋಡು ಮತ್ತು ಯಲ್ಲಾಪುರ ಪಟ್ಟಣ ಪಂಚಾಯತ್‌ಗಳಲ್ಲಿ ಮೀಟರ್ ಅಳವಡಿಸದೇ ಇರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸದರಿ ಸ್ಥಳೀಯ ಸಂಸ್ಥೆಗಳು ಸರಕಾರದ ನಿರ್ದೇಶನದ ಪ್ರಕಾರ ದರವನ್ನು ಶೇಕಡಾವಾರು ಪರಿಷ್ಕರಿಸಬೇಕು ಎಂದರು.

ಪೌರ ಕಾರ್ಮಿಕರಿಗೆ ಸೌಲಭ್ಯ: ಎಲ್ಲಾ ಪೌರ ಕಾರ್ಮಿಕರಿಗೆ ಸಮವಸ್ತ್ರ, ಕೈಗವಚ, ಶೂ ಕಡ್ಡಾಯವಾಗಿ ಪ್ರತಿವರ್ಷ ಒದಗಿಸಬೇಕು. ಪ್ರತಿವರ್ಷ ಎರಡು ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು. ಪೌರ ಕಾರ್ಮಿಕರಿಗೆ ಮನೆಗಳ ನಿರ್ಮಾಣಕ್ಕೆ ನಿವೇಶನಗಳನ್ನು ಗುರುತಿಸುವಂತೆ ಈಗಾಗಲೇ ಹಲವು ಬಾರಿ ಸೂಚನೆಗಳನ್ನು ನೀಡಲಾಗಿದೆ. ಆದ್ಯತೆ ಮೇರೆಗೆ ಈ ಕಾರ್ಯವನ್ನು ಮಾಡಬೇಕು. ಹೊರಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಸಂಬಂಧಪಟ್ಟ ಸಂಸ್ಥೆಯಿಂದ ವೇತನ ಪಾವತಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೇರವಾಗಿ ಪಾವತಿ ಮಾಡುವಂತಿಲ್ಲ ಎಂದು ಸೂಚಿಸಿದರು.

ಶೇ.22.75 ಯೋಜನೆ, ಶೇ.7.2 ಯೋಜನೆ ಹಾಗೂ ಶೇ.3ರ ಯೋಜನೆಯಡಿ ಸ್ಥಳೀಯ ಸಂಸ್ಥೆಗಳು ನಿರೀಕ್ಷಿತ ಪ್ರಗತಿಯನ್ನು ಸಾಧಿಸಿರುವುದಿಲ್ಲ. ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನ ನಿಧಾನಗತಿಯಲ್ಲಿದೆ. ಕಾಮಗಾರಿ ಅನುಷ್ಠಾನದಲ್ಲಿ ಲೋಪ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶವಿದ್ದು, ಇದಕ್ಕೆ ಆಸ್ಪದ ಕೊಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ(ಹೆಚ್ಚುವರಿ ಪ್ರಭಾರ) ಎಚ್.ಪ್ರಸನ್ನ, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News