ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಬಜರಂಗದಳದಿಂದ ಬರ್ಬರ ಹಲ್ಲೆ
ಆಲ್ದೂರು, ಜು.26: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಬಸ್ಸಿನಲ್ಲಿ ಬಂದಿದ್ದ ಅಸ್ಸಾಮಿನ ಬಡ ಕಾರ್ಮಿಕರನ್ನು ಬಾಂಗ್ಲಾ ದೇಶೀಯರೆಂದು ಆರೋಪಿಸಿ ಸಂಘಪರಿವಾರ ಕಾರ್ಯಕರ್ತರು ಬರ್ಬರವಾಗಿ ಥಳಿಸಿರುವ ಘಟನೆ ಸೋಮವಾರ ರಾತ್ರಿ ಚಿಕ್ಕಮಗಳೂರಿನ ಆಲ್ದೂರಿನಲ್ಲಿ ನಡೆದಿದೆ. ಈ ಸಂಬಂಧ ಈಗಾಗಲೇ ಬಜರಂಗದಳದ ಆರು ಮಂದಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.
ಅಸ್ಸಾಂನಿಂದ 60 ಮಂದಿ ಕಾರ್ಮಿಕರ ಮೇಲೆ ಬೆದರಿಕೆ, ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕ ಹೊಯೈಸೂನ್ ಎಂಬಾತ ಗಂಬೀರಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ನಡೆದ ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಆಲ್ದೂರಿನ ಬಜರಂಗದಳದ ಮನು, ತೇಜಸ್, ಶಿವಕುಮಾರ, ಸುದರ್ಶನ್, ಶರತ್ ಮತ್ತು ರೋಹಿತ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಪುರದಲ್ಲಿ ಗೋ ಹತ್ಯೆ ಸಂಬಂಧ ನಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಬಜರಂಗದಳದ ಈ ಗೂಂಡಾಕೃತ್ಯವನ್ನು ಸ್ಥಳೀಯ ಮುಖಂಡರು, ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ.