×
Ad

ದಾರಿ ನೀಡುವ ಧಾವಂತಕ್ಕೆ ಶಾಲಾ ಬಸ್ ಪಲ್ಟಿ: ಮಗು ಮೃತ್ಯು

Update: 2016-08-04 21:40 IST

 ತರೀಕೆರೆ, ಆ.4: ಎದುರಿನಿಂದ ಬರುತ್ತಿದ್ದ ಬಸ್‌ಗೆ ದಾರಿ ನೀಡಲು ಮುಂದಾದ ಶಾಲಾ ವಾಹನ ರಸ್ತೆ ಬದಿಗೆ ಹಾಕಲಾಗಿದ್ದ ಮಣ್ಣಿನಲ್ಲಿ ಹೂತು ಪಲ್ಟಿಯಾದ ಪರಿಣಾಮ ಎಲ್‌ಕೆಜಿಯ ವಿದ್ಯಾರ್ಥಿ ಮೃತಪಟ್ಟಿದ್ದು, ಸುಮಾರು 10 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ಅಜ್ಜಂಪುರ ಹೋಬಳಿಯ ನಾರಾಯಣ ಪುರ ಬಳಿಯ ಹೆಬ್ಬೂರು ಎಂಬಲ್ಲಿ ಸಂಭವಿಸಿದೆ.

ದುರ್ಘಟನೆಯಲ್ಲಿ ಸಾಂದೀಪನಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಕಲಿಯುತ್ತಿರುವ ಹಿರೇನಲ್ಲೂರಿನ ಪ್ರಮೋದ್ ಮತ್ತು ಪೂರ್ಣಿಮಾ ದಂಪತಿಯ 4 ವರ್ಷದ ಮಗು ಪ್ರೀತಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 10 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಸಂಜೆ ಸಾಂದೀಪನಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಹೇರಿಕೊಂಡು ಬರುತ್ತಿದ್ದ ಶಾಲಾ ಬಸ್ ನಾರಾಯಣ ಪುರ ಸಮೀಪದ ಹೆಬ್ಬೂರು ಎಂಬಲ್ಲಿ ಎದುರಿನಿಂದ ಬಂದ ಮತ್ತೊಂದು ಬಸ್‌ಗೆ ದಾರಿ ನೀಡುವ ಸಲುವಾಗಿ ಚಾಲಕ ಬಸ್‌ನ್ನು ರಸ್ತೆಯ ಬದಿಗೆ ಇಳಿಸಿದ್ದ ಎನ್ನಲಾಗಿದೆ. ಭದ್ರಾ ನದಿಯ ಮೇಲ್ದಂಡೆ ಕುಸಿಯದಂತೆ ರಸ್ತೆಯ ಇಕ್ಕೆಲಗಳಿಗೆ ಹಾಕಲಾಗಿದ್ದ ಮಣ್ಣಿನಲ್ಲಿ ಶಾಲಾ ವಾಹನ ಹೂತು ಹೋಗಿ ಪಲ್ಟಿ ಹೊಡೆದ ಪರಿಣಾಮ ಶಾಲಾ ಬಸ್‌ನಲ್ಲಿದ್ದ ಪ್ರೀತಮ್‌ನ ತಲೆಗೆ ಕಬ್ಬಿಣದ ರಾಡ್ ಬಲವಾಗಿ ಬಡಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ, ಬಸ್‌ನಲ್ಲಿದ್ದ ಸುಮಾರು 10 ವಿದ್ಯಾರ್ಥಿಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರೆಲ್ಲರನ್ನೂ ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News