×
Ad

ಭತ್ತ ಬೆಳೆಗೆ ಪ್ರೋತ್ಸಾಹ ಧನ ಇಲ್ಲ: ಕೃಷ್ಣಭೈರೇಗೌಡ

Update: 2016-08-05 22:13 IST

ಚಿಕ್ಕಮಗಳೂರು, ಆ.5: ಭತ್ತ ಬೆಳೆಯುವ ಗದ್ದೆಗಳಿಂದ ರೈತರಿಗೆ ನಷ್ಟ ಸಂಭವಿಸಿದರೆ ಸರಕಾರ ಬೆಳೆಗೆ ಪ್ರೋತ್ಸಾಹ ಧನ ನೀಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಅವರು ಪಟ್ಟಣದ ಹೊರಹೊಲಯದ ಹ್ಯಾಂಡ್‌ಪೋಸ್ಟ್ ಕೃಷಿ ವಿಜ್ಞಾನ ಕೇಂದ್ರದ ಭತ್ತದ ಗದ್ದೆಗಳಿಗೆ ಭೇಟಿ ನೀಡಿ, ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ರೈತರು ಬೆಳೆದ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡಲು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಯಾಂತ್ರೀಕೃತ ಬೇಸಾಯಕ್ಕೆ ಸರಕಾರದಿಂದ ಅತೀ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಯಾಂತ್ರೀಕರಣ ಉಪಕರಣಗಳಿಗೆ ಈಗಾಗಲೇ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ಸರಕಾರ ಬದ್ಧವಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಕಳೆದ 15 ವರ್ಷಗಳ ಹಿಂದೆ 25 ಸಾವಿರ ಹೆಕ್ಟೇರ್ ಗದ್ದೆಗಳಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. ಈಗ ಅದು ಕ್ಷೀಣಿಸಿದ್ದು, 7 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಉಳಿದ 18 ಸಾವಿರ ಹೆಕ್ಟೇರ್‌ನಲ್ಲಿ ಕಾಫಿ, ಬಾಳೆ, ಅಡಿಕೆ ಮತ್ತಿತರ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ ಎಂದರು.

ಈ ಬಾರಿ ಪ್ರತೀ ವರ್ಷದಂತೆ ಮಳೆಯಾಗಿಲ್ಲ. ಆಗಸ್ಟ್ ತಿಂಗಳ ವೇಳೆಗೆ ಆಗುತ್ತಿದ್ದ ಪ್ರತಿಶತ ಮಳೆ ವಾಡಿಕೆಗಿಂತ 100 ಮಿ.ಮೀ. ನಷ್ಟು ಕಡಿಮೆಯಾಗಿದೆ. ಇದರಿಂದ ರೈತರು ಧೃತಿಗೆಡುವ ಅಗತ್ಯವಿಲ್ಲ. ಮಳೆಗಾಲ ಮುಂದುವರಿಯಲಿರುವುದರಿಂದ ಕೊನೆಯಲ್ಲಿ ಮಳೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ರೈತರ ಬೆಳೆಗಳ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ರೈತರನ್ನು ಹುರಿದುಂಬಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆಯಿಂದ ಮತ್ತು ಇತರ ಸಮಸ್ಯೆಗಳಿಂದ ರೈತರು ನೊಂದಿರುವ ಬಗ್ಗೆ ಕಂಡು ಬಂದಿಲ್ಲ. ಮಲೆನಾಡಿನ ಎಲ್ಲಾ ಜಿಲ್ಲೆಗಳ ರೈತರು ಲವಲವಿಕೆಯಿಂದ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಸಚಿವರೊಂದಿಗೆ ಶಾಸಕ ಬಿ.ಬಿ. ನಿಂಗಯ್ಯ, ವಿಧಾನ ಪರಿಷತ್ ಸದಸ್ಯೆ ಡಾ. ಮೋಟಮ್ಮ, ಜಿಪಂ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ, ತಾಪಂ ಅಧ್ಯಕ್ಷ ಕೆ.ಸಿ. ರತನ್, ಜಿಪಂ ಸದಸ್ಯ ಪ್ರಭಾಕರ, ತಾಪಂ ಸದಸ್ಯರಾದ ಸುಂದರ್ ಕುಮಾರ್, ಭಾರತಿ ರವೀಂದ್ರ, ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಪಪಂ ಉಪಾಧ್ಯಕ್ಷ ಟಿ.ಎ. ಮದೀಶ್, ಮಾಜಿ ಜಿಪಂ ಅಧ್ಯಕ್ಷ ರಾಮದಾಸ್, ಉಪ ವಿಭಾಗಾಧಿಕಾರಿ ಸ್ನೇಹಲ್, ಕೃಷಿ ವಿ.ವಿ.ಯ ಡೀನ್ ಮಾದಯ್ಯ, ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ನಿರ್ದೇಶಕ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News