ವರದಿ ಅನುಷ್ಠಾನಕೆ್ಕ ಸರಕಾರಗಳ ಮೀನಮೇಷ
ದಾವಣಗೆರೆ, ಆ.7: ಸಾಚಾರ್ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿ 11 ವರ್ಷಗಳು ಗತಿಸಿವೆ. ಆ ನಂತರ ಹಲವು ಸರಕಾರಗಳು ಅಧಿಕಾರಕ್ಕೆ ಬಂದು ಹೋಗಿವೆ. ಆದರೆ, ಈ ವರೆಗೂ ಸಾಚಾರ್ ವರದಿ ಅನುಷ್ಠಾನಗೊಳಿಸುವ ಇಚ್ಛಾಸಕ್ತಿಯನ್ನು ಯಾವ ಸರಕಾರಗಳೂ ಪ್ರದರ್ಶಿಸಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಖಾರವಾಗಿ ಹೇಳಿದ್ದಾರೆ.
ನಗರದ ರೋಟರಿ ಬಾಲಭವನದಲ್ಲಿ ರವಿವಾರ ಮುಸ್ಲಿಮ್ ಚಿಂತಕರ ಚಾವಡಿಯಿಂದ ಏರ್ಪಡಿಸಿದ್ದ ಸಾಚಾರ್ ವರದಿಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಗಳು ನೇಮಿಸುವ ಆಯೋಗ, ಸಮಿತಿಗಳು ನೀಡುವ ವರದಿಯನ್ನು ಅನುಷ್ಠಾನಗೊಳಿಸದಿದ್ದರೆ, ಇವುಗಳ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ ಅವರು, ಐ.ಕೆ. ಗುಜ್ರಾಲ್ ಅವರೇ ನೀಡಿದ್ದ ಗುಜ್ರಾಲ್ ಸಮಿತಿಯ ವರದಿಯನ್ನು ನಂತರ ಅವರೇ ಪ್ರಧಾನಿ ಯಾರೂ ಅನುಷ್ಠಾನಗೊಳಿಸಲು ಯತ್ನಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ಮಂಡಲ್ ಆಯೋಗದ ವರದಿ ಅನುಷ್ಠಾನಕ್ಕೆ ತರಬೇಕೆಂದು ಜನರೇ ದಂಗೆ ಎದ್ದಮೇಲೆ ಅಂದರೆ, ಸರಕಾರಕ್ಕೆ ವರದಿ ಸಲ್ಲಿಸಿ 16 ವರ್ಷ ಕಳೆದ ಮೇಲೆ ಮಂಡಲ್ ಆಯೋಗದ ವರದಿ ಅನುಷ್ಠಾನಗೊಳಿಸಿದ್ದು ಬಿಟ್ಟರೆ, ಇನ್ನುಳಿದ ಮಿಲ್ಲರ್ ಆಯೋಗ, ನಾಗನಗೌಡ ಕಮಿಟಿ, ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಕಮಿಟಿ ಸೇರಿದಂತೆ ಯಾವುದೇ ಆಯೋಗ ಹಾಗೂ ಸಮಿತಿಗಳ ವರದಿಗಳನ್ನು ಸರಕಾರ ಅನುಷ್ಠಾನಗೊಳಿಸಿಲ್ಲ. ಹಾಗಾದರೆ ಯಾವ ಪುರುಷಾರ್ಥಕ್ಕೆ ಇವುಗಳನ್ನು ರಚಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.
ಮಿಲ್ಲರ್ ಆಯೋಗದಿಂದ ತಾನು ಆಗಿದ್ದ ಹಿಂದುಳಿದ ವರ್ಗಗಳ ಆಯೋಗದ ವರೆಗಿನ ಎಲ್ಲಾ ಆಯೋಗ, ಸಮಿತಿಗಳು ಮುಸಲ್ಮಾನರಿಗೆ ಹಿಂದುಳಿದ ವರ್ಗಗಳ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬುದಾಗಿ ಶಿಫಾರಸು ಮಾಡಿವೆ. ಆದರೆ, ಆಂಧ್ರಪ್ರದೇಶ ಸರಕಾರ ಮುಸಲ್ಮಾನರಿಗೆ ಧಾರ್ಮಿಕ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವುದಾಗಿ ಹೇಳಿತ್ತು. ಇದು ಒಂದು ಕಡೆಯಿಂದ ಕೊಟ್ಟು, ಮತ್ತೊಂದು ಕಡೆ ಕಸಿದುಕೊಳ್ಳುವ ನೀತಿಯಾಗಿದೆ. ಆದ್ದರಿಂದ ಮುಸಲ್ಮಾನರಿಗೆ ಹಿಂದುಳಿದ ವರ್ಗಗಳ ಆಧಾರದಲ್ಲಿಯೇ ಮೀಸಲಾತಿ ಕಲ್ಪಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು.
1992ರಲ್ಲಿ ಕೋಲಾರದಲ್ಲಿ ಕೋಮು ಗಲಭೆಯ ವೇಳೆ ನಡೆದ ಕೊಲೆಯನ್ನು ಮಾಧ್ಯಮಗಳು ತಿರುಚಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ ಎಂಬುದಾಗಿ ಸುಳ್ಳು ಸುದ್ದಿ ಪ್ರಕಟಿಸಿದ್ದವು. ಇದರ ಪರಿಣಾಮ 10 ಜನ ಮುಗ್ಧ ಮುಸ್ಲಿಮರು ಕೋಮುದಳ್ಳೂರಿಗೆ ಬಲಿಯಾದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಗಗನಸಖಿಯರ ಆಯ್ಕೆಯ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅಲ್ಪಸಂಖ್ಯಾತರ ಆಯೋಗ ಮುಸ್ಲಿಮ್ ಮಹಿಳೆಯರ ನೇಮಕ ಮಾಡಲಿದೆ ಎಂಬುದಾಗಿ ಹೇಳಿದರು. ಹೀಗೆ ಅಲ್ಪಸಂಖ್ಯಾತರನ್ನು ಅವಕಾಶದಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಾತಿ ಹೊರತುಪಡಿಸಿ ಯಾವ ಧರ್ಮವೂ ಇಲ್ಲ. ಅದರಂತೆ ಮುಸ್ಲಿಂ ಧರ್ಮದಲ್ಲೂ ಜಾತಿಗಳಿವೆ. ಈಗಾಗಲೇ ಗುಜರಾತ್ ಮಾದರಿಯ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿ, ಹಿಂದೂಗಳನ್ನು ಒಗ್ಗೂಡಿಸಿದರು. ಆದರೆ, ಈಗ ಅಸ್ಪಶ್ಯರನ್ನು ಗುರಿಯಾಗಿಸಿಕೊಂಡು ದಾಳಿ, ಹಲ್ಲೆ ನಡೆಸಲಾಗುತ್ತಿದೆ ಎಂದು ಅವರು ದೂರಿದರು.
ಇತ್ತೀಚೆಗೆ ಹಿಂದೂ ಧರ್ಮದಲ್ಲಿರುವ ಇತರ ಜಾತಿಗಳನ್ನು ಒಂದು ಮಾಡುವ ಹುನ್ನಾರ ನಡೆಯುತ್ತಿದೆ. ಅಲ್ಲದೆ, ಮುಸಲ್ಮಾನ ರೊಂದಿಗೆ ಹಿಂದುಳಿದವರು ಬೆರೆಯಲು ಸಂಘಪರಿವಾರ ಆಸ್ಪದ ನೀಡುತ್ತಿಲ್ಲ ಎಂದು ಆರೋಪಿಸಿದ ಧ್ವಾರಕನಾಥ್, ಹೀಗಾಗಿ, ದಮನಕ್ಕೆ ಒಳಗಾಗಿರುವ ಮುಸಲ್ಮಾನರು ಹಾಗೂ ದಲಿತರು ಈಗ ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದರು.
ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದರೆ, ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯವಿದೆ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ರಾಜಕೀಯ ಪಕ್ಷವೊಂದು ಅಧಿಕಾರ ನಡೆಸುತ್ತಿರುವುದರಿಂದ ಪ್ರಜಾಪ್ರಭತ್ವ ಉಳಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಶಾಸನ ರೂಪಿಸುವ ಜಾಗಕ್ಕೆ ಹೋಗದ ಹೊರತು ನಮ್ಮ ಯಾವ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಾನು ಮುಷ್ತಾಕ್ ಮಾತನಾಡಿ, ಮುಸಲ್ಮಾನರ ಆಹಾರ, ವಸ್ತ್ರ, ಆಚಾರ, ವಿಚಾರ ರಾಕ್ಷಸೀಕರಣಕ್ಕೆ ಒಳಗಾಗಿಸುವ ಸಂಚು ನಡೆಯುತ್ತಿದೆ. ಜರ್ಮನಿಯ ಹಿಟ್ಲರ್ನಿಂದ ಪ್ರಾರಂಭವಾದ ರಾಕ್ಷಸೀಕರಣ ಈಗ ಭಾರತ ಪ್ರವೇಶಿಸಿದೆ. ಈ ರಾಕ್ಷಸೀಕರಣದಿಂದ ನೋವು, ರಕ್ತಪಾತಗಳ ಲ್ಲದೆ ಬೇರೆ ಏನನ್ನೂ ನಿರೀಕ್ಷಿಸಲಾಗದು ಎಂದು ಹೇಳಿದರು.
ನ್ಯಾಷನಲ್ ಡೇಟಾ ಬ್ಯಾಂಕ್ ಸ್ಥಾಪಿಸಿ, ಯಾವ ಸಮುದಾಯದ ಜನ ಎಷ್ಟು ಇದ್ದಾರೆ ಎಂಬುದರ ಅಂಕಿಅಂಶ ಅಳವಡಿಸಿ, ಆನ್ಲೈನ್ನಲ್ಲಿ ದೊರೆಯುವಂತೆ ಮಾಡಬೇಕು. ಮುಸಲ್ಮಾನರು ಸಮಾಜಘಾತುಕರು, ಭಯೋತ್ಪಾದಕರು ಎಂಬ ಮನೋಭಾವದಲ್ಲಿರುವ ಪೂರ್ವಾಗ್ರಹಪೀಡನೆ ದೂರ ಮಾಡಲು ಸರಕಾರ ಗಟ್ಟಿ ಕಾನೂನು ಜಾರಿಗೆ ತರಬೇಕು. ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು ಸಮಾನ ಅವಕಾಶಗಳ ಆಯೋಗ ರಚನೆ ಮಾಡಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ರಂಜಾನ್ ದರ್ಗಾ, ಸಾಹಿತಿ ರಹಮತ್ ತರೀಕೆರೆ, ನ್ಯಾಯವಾದಿ ಅನೀಸ್ ಪಾಷ, ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.