ಆರೋಗ್ಯದ ಸಮಸ್ಯೆಗೆ ಮನೋಜ್ಞಾನ ಅಗತ್ಯ: ಶಾಸಕ ಬಿ.ಬಿ.ನಿಂಗಯ್ಯ
ಮೂಡಿಗೆರೆ, ಆ.9: ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಲು ದಿನನಿತ್ಯದ ಚಟುವಟಿಕೆಗಳಲ್ಲಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಮನೋಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದ್ದಾರೆ.
ಇತ್ತೀಚೆಗೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುವರ್ಣ ಆರೋಗ್ಯಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಸಹಯೋಗದಲ್ಲಿ ಆ.2ರಿಂದ 7ರವರೆಗೆ ಮೂಡಿಗೆರೆ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಯೋಜನೆ ಕುರಿತು ಅರಿವು ಅಭಿಯಾನ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿರುವ ಈ ದಿನಗಳಲ್ಲಿ ಅವರ ಆರೋಗ್ಯದ ಕಡೆ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ ಎಂದರು.
ತಾಲೂಕಿನಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿದ್ದು, ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದುಕೊಳ್ಳುವ ಅಗತ್ಯವಿದೆ ಎಂದ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಬೀದಿ ನಾಟಕಗಳಿಂದ ಜನರಲ್ಲಿ ಅರಿವು ಮೂಡಿಸುವುದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸಾಧ್ಯವಿದೆ ಎಂದು ತಿಳಿಸಿದರು.
ವಾರ್ತಾ ಇಲಾಖೆಯ ಮೂರು ವಾಹನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕಲಾಜಾಥಾ ಹಾಗೂ ನಾಟಕ ಪ್ರದರ್ಶನಗಳು ನಡೆದವು. ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಶ್ರೀ, ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆ, ಇಂದಿರಾ ಸುರಕ್ಷಾ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆ ಸಹಿತ ಸರಕಾರದಿಂದ ಉಚಿತ ಆರೋಗ್ಯ ಯೋಜನೆಗಳ ಬಗ್ಗೆ ಸಾರ್ವಜನಿಕ ಮಾಹಿತಿ ನೀಡಲಾಯಿತು. ಕಲಾ ತಂಡಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಜಾನಪದ ಹಾಡು, ಲಾವಣಿ ಪದ, ಗೀಗೀಪದ ಸಹಿತ ಗ್ರಾಮೀಣ ಶೈಲಿಯ ಹಾಡುಗಳು ಸಾರ್ವಜನಿಕರನ್ನು ರಂಜಿಸಿದವು. ಈ ಸಂದರ್ಭ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾರಾಯಣ ಸ್ವಾಮಿ, ಎಂ.ಕೆ.ಪ್ರಾಣೇಶ್, ಕೆ.ಸಿ.ರತನ್, ಜಿ.ಎಚ್.ಹಾಲಪ್ಪಗೌಡ ಪಾರ್ವತಮ್ಮ, ಅಮಿತಾ ಮುತ್ತಪ್ಪ, ಶಾಮಣ್ಣ, ಟಿ.ಎ.ಮದೀಶ್, ವಿನೋದ್ ಚಂದ್ರ, ಮಂಜುನಾಥ, ಸುವರ್ಣ ಕುಮಾರ, ಡಾ.ಯೋಗೀಶ್, ಡಾ.ಸುಂದರೇಶ್, ಜೆ.ಡಿ.ಮೂರ್ತಿ, ಚಂದ್ರೇಶ್, ಶಬೀರ್ ಅಹ್ಮದ್, ನೂರುಲ್ಲ, ಯು.ಬಿ.ಮಂಜಯ್ಯ, ಬಿ.ಎನ್.ಮುತ್ತಪ್ಪ, ಛಲವಾದಿ ಯು.ಆರ್.ರುದ್ರಯ್ಯ ಮತ್ತಿತತರು ಉಪಸ್ಥಿತರಿದ್ದರು.