×
Ad

ರಾಜಕೀಯಕ್ಕೆ ಕಾರಣವಾದ ಅಂಗಡಿ ತೆರವು ಕಾರ್ಯಾಚರಣೆ

Update: 2016-08-09 22:10 IST

 ಶಿವಮೊಗ್ಗ, ಆ.9: ಬೆಂಗಳೂರು ಮಹಾನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಬೃಹದಾಕಾರದ ಕಟ್ಟಡಗಳನ್ನು ಅಲ್ಲಿನ ಮಹಾನಗರ ಪಾಲಿಕೆ ಆಡಳಿತ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತಿದೆ. ಆದರೆ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿದ್ದ ಪುಟ್ಟ ಪೆಟ್ಟಿಗೆ ಅಂಗಡಿ ತೆರವುಗೊಳಿಸಲು ಸ್ಥಳೀಯ ಮಹಾನಗರ ಪಾಲಿಕೆ ಆಡಳಿತ ಹರಸಾಹಸ ಪಡುವಂತಾಗಿದೆ.

 ಪುಟ್ಟ ಪೆಟ್ಟಿಗೆ ಅಂಗಡಿ ತೆರವು ಕಾರ್ಯಾ ಚರಣೆ ನಗರದಲ್ಲಿ ಭಾರೀ ದೊಡ್ಡ ರಾಜಕೀಯ ಹೈಡ್ರಾಮಾಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ನ ಕೆಲ ನಾಯಕರು ಅಧಿಕಾರಿಗಳ ಮೂಲಕ ತಿರುಗೇಟು ನೀಡುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಎರಡೂ ಪಕ್ಷಗಳ ನಡುವೆ ಸಿಲುಕಿ ಪಾಲಿಕೆಯ ಅಧಿಕಾರಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಂಗಳವಾರ ತೆರವು ಕಾರ್ಯಾಚರಣೆಯು ಸಂಪೂರ್ಣವಾಗಿ ರಾಜಕೀಯ ಹೈಡ್ರಾಮಾಕ್ಕೆ ವೇದಿಕೆಯಾಯಿತು. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾದ ರಾಜಕೀಯ ಮೇಲಾಟವು ಮಧ್ಯಾಹ್ನ 2:30 ರವರೆಗೆ ಮುಂದುವರಿದಿತ್ತು. ತದನಂತರ ಏಕಾಏಕಿ ಪಾಲಿಕೆ ಆಡಳಿತವು ತೆರವು ಕಾರ್ಯಾಚರಣೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಹಿಂದಿರುಗಿತು. ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯು ಬಿಜೆಪಿ ಪಕ್ಷದ ಕಾರ್ಯಕರ್ತನೆಂಬ ಕಾರಣಕ್ಕೆ, ಕಾಂಗ್ರೆಸ್ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರವರ ಒತ್ತಡಕ್ಕೆ ಮಣಿದು ಈ ಕಾರ್ಯಾಚರಣೆ ನಡೆಸುತ್ತಿದ್ದೀರಿ. ನಗರದ ಇತರ ಪ್ರದೇಶಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಪೆಟ್ಟಿಗೆ ಅಂಗಡಿಗಳಿವೆ. ಮೊದಲು ಅವುಗಳನ್ನು ತೆರವುಗೊಳಿಸಿ. ತದನಂತರ ಈ ಅಂಗಡಿ ತೆರವುಗೊಳಿಸಿ ಎಂದು ಬಿಜೆಪಿ ಕಾರ್ಯಕರ್ತರು ಆಯುಕ್ತರಿಗೆ ಒತ್ತಾಯಿಸಿದರು. ಕಂಗಾಲು: ಕೆ.ಎಸ್.ಈಶ್ವರಪ್ಪನವರೇ ನೇರವಾಗಿ ಪ್ರತಿಭಟನೆಗಿಳಿದಿದ್ದು ಆಯುಕ್ತೆ ತುಷಾರಾಮಣಿ ನೇತೃತ್ವದ ಪಾಲಿಕೆ ತಂಡವನ್ನು ತಬ್ಬಿಬ್ಬುಗೊಳ್ಳುವಂತೆ ಮಾಡಿತು. ಇದರಿಂದ ಅವರೂ ಕೂಡ ಕೆಲ ಸಮಯ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯ ಅವಲೋಕನ ನಡೆಸಿದರು. ಈ ವೇಳೆ ಅವರು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ಕೂಡ ಹಿಂದಿರುಗಿದರು. ಈ ನಡುವೆ ಆಯುಕ್ತೆ ಇದ್ದ ಸ್ಥಳಕ್ಕೆ ಆಗಮಿಸಿದ ಕೆ.ಎಸ್.ಈಶ್ವರಪ್ಪನವರು, ಯಾವುದೇ ಕಾರಣಕ್ಕೂ ಅಂಗಡಿ ತೆರವುಗೊಳಿಸಲು ಬಿಡುವುದಿಲ್ಲ ಎಂದರು. ತಮ್ಮ ಸುತ್ತಲಿದ್ದ ಪೊಲೀಸರನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಘರ್ಷವೂ ಇಲ್ಲ. ನೀವು ನಮ್ಮ ಶಾಂತಿಯುತ ಹೋರಾಟಕ್ಕೆ ಅಡ್ಡಿಪಡಿಸಬೇಡಿ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಕಂಗ್ಗಟ್ಟು: ಮತ್ತೊಂದೆಡೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್‌ರವರು ಭೇಟಿ ನೀಡಿ ಕೆ.ಎಸ್.ಈಶ್ವರಪ್ಪ ಹಾಗೂ ಆಯುಕ್ತರ ನಡುವೆ ಸಮಾಲೋಚನೆ ನಡೆಸಿ ಹಿಂದಿರುಗಿದರು. ಈಶ್ವರಪ್ಪ ಮತ್ತವರ ತಂಡವು ಅಂಗಡಿಯೊಳಗೆ ಕುಳಿತುಕೊಂಡಿತ್ತು. ಈ ನಡುವೆ ಡಿ.ಸಿ.ಯವರು ಆಯುಕ್ತೆ ತುಷಾರಾಮಣಿಯವರೊಂದಿಗೆ ಡಿ.ಸಿ. ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು. ತದನಂತರ ಅರ್ಧಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಬಡವರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ರಸ್ತೆ ಬದಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಬಡವರನ್ನು, ರಾಜಕೀಯ ಒತ್ತಡಕ್ಕೆ ಮಣಿದು ಬೀದಿಗೆ ತಳ್ಳುವ ಕೆಲಸವನ್ನು ಪಾಲಿಕೆ ಆಡಳಿತ ಮಾಡುತ್ತಿದೆ. ಇದಕ್ಕೆ ತಾವು ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಪೆಟ್ಟಿಗೆ ಅಂಗಡಿ ತೆರವುಗೊಳಿಸಲು ಬಿಡುವುದಿಲ್ಲ. ಈ ಹಿಂದಿನ ನಗರಸಭೆೆ ತೀರ್ಮಾನದಂತೆ ಫುಟ್‌ಪಾತ್ ವ್ಯಾಪಾರಿಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿದ ನಂತರವಷ್ಟೆ ಮುಂದಿನ ನಿರ್ಧಾರ ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News