×
Ad

ಭೂಮಿಗಾಗಿ ಬೃಹತ್ ಪ್ರತಿಭಟನಾ ರ್ಯಾಲಿ

Update: 2016-08-20 20:38 IST

ಬೆಂಗಳೂರು, ಆ.20: ರಾಜ್ಯದಲ್ಲಿರುವ ಭೂ ವಂಚಿತರಿಗೆ ಕನಿಷ್ಠ ಐದು ಎಕರೆ ಜಮೀನು ನೀಡುವ ಬೇಡಿಕೆ ನ್ಯಾಯಯುತವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಭೂ ವಂಚಿತರಿಗೆ ಕನಿಷ್ಠ 5ಎಕರೆ ಭೂಮಿ ಹಾಗೂ ನಿವೇಶನಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಗೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಭೂ ಹೀನರಿಗೆ ಭೂಮಿ ಕೊಡುವ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಹೋರಾಟವಿಲ್ಲದೆ ಯಾವುದು ದಕ್ಕುವುದಿಲ್ಲ. ಹೀಗಾಗಿ ಹೋರಾಟಗಾರರ ಜೊತೆಗೆ ನಾನು ಕೈ ಜೋಡಿಸಿ ಭೂಮಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನಿಂದಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಶೀಘ್ರವಾಗಿಯೆ ರಾಜ್ಯದಲ್ಲಿರುವ ಎಲ್ಲ ಭೂ ವಂಚಿತರಿಗೆ ಭೂಮಿ ಕೊಡಿಸುವ ನಿಟ್ಟಿನಲ್ಲಿ ನಿರಂತರವಾದ ಸಭೆಗಳನ್ನು ನಡೆಸುತ್ತೇನೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಬೃಹತ್ ರ್ಯಾಲಿ: ಭೂ ವಂಚಿತರಿಗೆ ಕನಿಷ್ಠ 5ಎಕರೆ ಭೂಮಿಗಾಗಿ ಆಗ್ರಹಿಸಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭೂ ವಂಚಿತರು ರ್ಯಾಲಿಯಲ್ಲಿ ‘ಭೂಮಿ ನಮ್ಮ ಹಕ್ಕು’, ಅದನ್ನು ಪಡದೇ ತಿರುತ್ತೇವೆ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಈ ವೇಳೆ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಮುಖಂಡ ನೂರ್ ಶ್ರೀಧರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ 7 ದಶಕ ಕಳೆಯುತ್ತಿದೆ. ಆದರೂ ರಾಜ್ಯದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕ ಕುಟುಂಬಗಳು ತುಂಡು ಭೂಮಿಯನ್ನು ಹೊಂದಲು ಸಾಧ್ಯವಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯೆಂದು ಆಕ್ರೋಶ ವ್ಯಕ್ತಪಡಿಸಿದರು.

ಭೂ ವಂಚಿತರಿಗೆ ಭೂಮಿ ಕೊಡಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಂತೆಯ ಉಳಿದ ಸಚಿವರು ಬದ್ಧತೆ ತೋರಿಸುವರೆ ಎಂಬುದು ಕಾದುನೋಡಬೇಕಾಗಿದೆ ಎಂದರು. ರ್ಯಾಲಿಯಲ್ಲಿ ಹಿರಿಯ ಸ್ವಾತಂತ್ರಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲಂಚ ಮುಕ್ತ ಕರ್ನಾಟಕದ ಮುಖಂಡ ರವಿಕೃಷ್ಣಾ ರೆಡ್ಡಿ, ಹೋರಾಟ ಎಸ್.ಆರ್.ಹಿರೇಮಠ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಕರ್ನಾಟಕ ಜನಶಕ್ತಿಯ ವಾಸು ಮತ್ತಿತರರಿದ್ದರು.

ಅ.2ವರೆಗೆ ಗಡುವು
 ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸದ್ಯ ಬಾಯಿಮಾತಿನ ಭರವಸೆ ನೀಡಿದ್ದಾರೆ. ಅದು ಲಿಖಿತ ತೀರ್ಮಾನ ಆಗಬೇಕು. ಈ ಸರಕಾರ ದೇವರಾಜ ಅರಸು ಅವರಿಗೆ ಗೌರವ ನೀಡಲಿಲ್ಲ. ಕನಿಷ್ಠ ಗಾಂಧಿಗಾದರೂ ಗೌರವ ನೀಡಿ ಅಕ್ಟೋಬರ್ 2ರ ಮೊದಲ ಕ್ಯಾಬಿನೆಟ್‌ನಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅ.2ರಂದು ರಾಜ್ಯಾದ್ಯಂತ ಎರಡನೇ ಹಂತದ ಪ್ರತಿಭಟನೆ ಆರಂಭಿಸುತ್ತೇವೆ.

-ನೂರ್ ಶ್ರೀಧರ್, ಹೋರಾಟ ಸಮಿತಿಯ ಮುಖಂಡ

ಹಕ್ಕೊತ್ತಾಯಗಳು

►ರಾಜ್ಯದ ಜನತೆ ಗೌರವ ಹಾಗೂ ಸ್ವಾಭಿಮಾನದಿಂದ ಬದುಕುವಷ್ಟು ಭೂಮಿ, ವಸತಿ ಕಲ್ಪಿಸುವುದು ಸರಕಾರದ ಧ್ಯೇಯ ಘೋಷಣೆಯಾಗಬೇಕು.

►ಕರ್ನಾಟಕದ ಎಲ್ಲಾ ರೀತಿಯ ಭೂಮಿಯ ಕುರಿತು ಸಮಗ್ರ ಲ್ಯಾಂಡ್ ಆಡಿಟಿಂಗ್ ನಡೆಸಬೇಕು. ಒಟ್ಟು ಲಭ್ಯವಿರುವ ಭೂಮಿ, ಬಲಾಢ್ಯರ ಒಡೆತನ ಮತ್ತು ಕಬಳಿಕೆ, ಬಲಹೀನ ಒಡೆತನಗಳು ಮತ್ತು ಆಸ್ತಿಹೀನರ ಖಚಿತ ಚಿತ್ರಣವನ್ನು ಜನತೆಯ ಮುಂದಿಡಬೇಕು.

►ಅಲ್ಲದೆ ಜನಸಾಮಾನ್ಯರ ಹಿತವನ್ನು ಆದ್ಯತೆ ಮಾಡಿಕೊಂಡಿರುವಂಥ ಭೂ ಬಳಕೆ ನೀತಿಯನ್ನು ಜಾರಿಗೆ ತರಬೇಕು. ಬಡವರಿಗೆ ಮನೆ, ಉಳುಮೆ ಮಾಡಿ ಬದುಕುವವರಿಗೆ ಭೂಮಿ, ಗ್ರಾಮೀಣ ಸಣ್ಣ ಕೈಗಾರಿಕೆ, ಸಾಮುದಾಯಿಕ ಅಗತ್ಯ, ಪರಿಸರ ಸಮತೋಲನ ಭೂ ಬಳಕೆ ನೀತಿಯ ಆದ್ಯತೆಗಳಾಗಿರಬೇಕು.

►ಯಾವುದೇ ಕಾರಣಕ್ಕೂ ಸಣ್ಣ ರೈತರನ್ನು ಹಾಗೂ ಬಡವರನ್ನು ಅವರ ನೆಲ ಮತ್ತು ನೆಲೆಯಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸರಕಾರ ಘೋಷಿಸಬೇಕು. ►5ಎಕರೆ ಒಳಗಿನ ಬಗರ್ ಹುಕುಂ ರೈತರಿಗೆ ಕಡ್ಡಾಯವಾಗಿ ತಕ್ಷಣವೇ ಭೂಮಿಯನ್ನು ಮಂಜೂರು ಮಾಡಬೇಕು. ದಾಖಲೆ ಪತ್ರಗಳ ಸಬೂಬು ನೀಡಿ ಅವರನ್ನು ಹಕ್ಕುವಂಚಿತರನ್ನಾಗಿ ಮಾಡಬಾರದು.

►30ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳಬೇಕು. ಅದನ್ನು ಬಡವರಿಗೆ ಹಂಚಲಿಕ್ಕೆ ಮತ್ತು ಅರಣ್ಯ ಅಭಿವೃದ್ಧಿಗೆ ಬಳಸಬೇಕು.

►ಯಾವ ರೀತಿಯ ಭೂಮಿಯೂ ಇಲ್ಲದ, ಆದರೆ ಸ್ವಯಂ ಕೃಷಿ ಮಾಡಿ ಬದುಕಲು ಬಯಸುವ ಭೂಹೀನ ಕೃಷಿ ಕೂಲಿ ಕುಟುಂಬಗಳಿಗೆ ಘನತೆಯಿಂದ ಬದುಕುವಷ್ಟು ಭೂಮಿಯನ್ನು ನೀಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು.

►ನಗರ ಮತ್ತು ಗ್ರಾಮಗಳ ಪ್ರತಿ ಕುಟುಂಬವೂ ಸ್ವಂತದ ನಿವೇಶನ ಸಹಿತ ಮನೆ ಹೊಂದುವ ಹಕ್ಕನ್ನು ಸರಕಾರ ಮಾನ್ಯಗೊಳಿಸಬೇಕು.

ಅಭಿವೃದ್ಧಿಯ ಮುಸುಕಿನಲ್ಲಿ ಕಾರ್ಪೊರೇಟ್, ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಕಬಳಿಸಿರುವ ಭೂಮಿಯನ್ನು ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು.

ಭೂ ಮಿತಿ ಕಾಯ್ದೆಯನ್ನು ಇಂದಿನ ಅಗತ್ಯಕ್ಕನುಸಾರ ಮರುಪರಿಷ್ಕರಿಸಬೇಕು. ಭೂಮಿತಿಯನ್ನು ಇಳಿಸಬೇಕು. ಇದರಿಂದ ದೊರಕುವ ಹೆಚ್ಚುವರಿ ಭೂಮಿಯನ್ನು ಕ್ರೋಡೀಕರಿಸಿ ಬಡವರಿಗೆ ಹಂಚುವ ದಿಟ್ಟ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News