ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ, ಆ.22: ‘ಪಾಕಿಸ್ತಾನದ ಜನರು ಉತ್ತಮರು’ ಎಂದು ಶ್ಲಾಘನೀಯ ಮಾತುಗಳನ್ನಾಡಿರುವ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ವಿರುದ್ಧ ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಹಾಗೂ ವಕೀಲ ಕಾಟ್ನಮನೆ ವಿಠಲ ಗೌಡ ಅವರು ದೇಶ ದ್ರೋಹ ಮತ್ತು ದೊಂಬಿಗೆ ಪ್ರಚೋದನೆ ನೀಡಿದ ಆರೋಪದಡಿ ಸೋಮವಾರಪೇಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ವಿರುದ್ಧ ನೀಡಿರುವ ದೂರಿನ ವಿಚಾರಣೆ ಆ.27 ರಂದು ನಡೆಯಲಿದೆ ಎಂದು ತಿಳಿಸಿದರು. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಪಾಕಿಸ್ತಾನವನ್ನು ನರಕವೆಂದು ಅಭಿಪ್ರಾಯಪಟ್ಟಿರುವಾಗ ಇದಕ್ಕೆ ವಿರುದ್ಧವಾಗಿ ಸಾಂಪ್ರದಾಯಿಕ ಶತ್ರು ರಾಷ್ಟ್ರವನ್ನು ರಮ್ಯಾ ಶ್ಲಾಘಿಸಿರುವುದು 124 ಎ ನಿಯಮದಡಿ ದೇಶ ದ್ರೋಹ ಮತ್ತು ರಮ್ಯಾ ಅವರ ಕ್ರಮವನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸೆಕ್ಷನ್ 334ರಡಿ ದೊಂಬಿಗೆ ಪ್ರಚೋದನೆ ನೀಡಿದಂತಾಗಿದ್ದು, ಈ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ನ್ಯಾಯಾಲಯಕ್ಕೆ ದೃಶ್ಯ ವಾಹಿನಿಗಳಲ್ಲಿ ಪ್ರಸಾರವಾದ ತುಣುಕುಗಳು ಹಾಗೂ ಪತ್ರಿಕೆಗಳನ್ನು ನೀಡಲಾಗಿದೆ. ಕನ್ನಡ ಮಾತನಾಡಲು ನಾಚಿಕೆ ಪಡುವ ರಮ್ಯಾ, ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಹೊಗಳಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದೆ. ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿರುವ ಮತ್ತು ಬೆನ್ನಿಗೆ ಚೂರಿ ಇರಿಯುತ್ತಿರುವ ಪಾಕಿಸ್ತಾನವನ್ನು ಹಾಡಿ ಹೊಗಳಿರುವುದು ರಾಷ್ಟ್ರ ವಿರೋಧಿ ಧೋರಣೆಯಾಗಿದೆ. ದೇಶದ ಜನತೆ ರಮ್ಯಾ ಅವರ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು ಮತ್ತು ಕಾಂಗ್ರೆಸ್ ಪಕ್ಷ ರಮ್ಯಾ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ವಜಾ ಗೊಳಿಸಬೇಕೆಂದು ವಿಠಲ್ ಗೌಡ ಒತ್ತಾಯಿಸಿದರು.
ಯುವ ಸಮೂಹ ರಮ್ಯಾರಂತಹ ದೇಶ ದ್ರೋಹಿಗಳನ್ನು ರೋಲ್ ಮಾಡೆಲ್ ಮಾಡಿಕೊಳ್ಳದೆ ಆದರ್ಶ ವ್ಯಕ್ತಿತ್ವದ ಸುಧಾಮೂರ್ತಿಯವರನ್ನು ರೋಲ್ ಮಾಡೆಲ್ ಮಾಡಿಕೊಳ್ಳಲೆಂದು ಕರೆ ನೀಡಿದರು. ಉನ್ನತ ವ್ಯಾಸಂಗ ಮಾಡಿದವರಿಗೆ ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಅವಕಾಶಗಳು ದೊರೆಯುತ್ತಿಲ್ಲ. ಅವಿದ್ಯಾವಂತರು ಹಾಗೂ ಸಾಮಾನ್ಯ ಜ್ಞಾನ ಇಲ್ಲದವರು ರಾಜಕೀಯ ನಾಯಕರುಗಳಾಗುತ್ತಿದ್ದು, ಯುವ ಸಮೂಹ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿಠಲ್ ಗೌಡ ಟೀಕಿಸಿದ್ದಾರೆ.