×
Ad

ನೂರಕ್ಕೂ ಅಧಿಕ ಅಂಗನವಾಡಿಗಳ ದಿಢೀರ್ ತಪಾಸಣೆ

Update: 2016-08-25 22:05 IST

ಕಾರವಾರ, ಆ.25: ಜಿಲ್ಲೆಯಲ್ಲಿರುವ ಅಂಗನವಾಡಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಅವರ ನಿರ್ದೇಶನದ ಪ್ರಕಾರ ರಚಿಸಲಾದ ಅಧಿಕಾರಿಗಳ ತಂಡಗಳು ಗುರುವಾರ ನೂರಕ್ಕೂ ಅಧಿಕ ಅಂಗನವಾಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದವು.

ಗುರುವಾರ ಬೆಳಗ್ಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಎಲ್ಲ ತಾಲೂಕು ಅಧಿಕಾರಿಗಳಿಗೆ ಈ ಕುರಿತು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ತಾಲೂಕು ಮಟ್ಟದಲ್ಲಿ ಈಗಾಗಲೇ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು, ತಹಶೀಲ್ದಾರ್, ಸಿಡಿಪಿಒಗಳಿಗೆ ಬೆಳಗ್ಗೆ 9ಗಂಟೆಗೆ ವೀಡಿಯೊ ಕಾನ್ಫರೆನ್ಸ್‌ಗೆ ಆಯಾ ತಾಲೂಕು ಕೇಂದ್ರದಲ್ಲಿ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ವೀಡಿಯೊ ಕಾನ್ಫರೆನ್ಸ್ ವಿಷಯವನ್ನು ಮಾತ್ರ ಗೌಪ್ಯವಾಗಿಡಲಾಗಿತ್ತು. ಪ್ರತೀ ತಂಡಗಳು ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಕನಿಷ್ಠ 10 ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು. ಇದಕ್ಕಾಗಿ ಸಿದ್ಧಪಡಿಸಲಾಗಿದ್ದ ತಪಾಸಣಾ ಪಟ್ಟಿಯನ್ನು ಈಮೇಲ್ ಮೂಲಕ ಕಳುಹಿಸಲಾಯಿತು. ಅಂಗನವಾಡಿ ಹೆಸರು, ಶಿಕ್ಷಕಿ ಹೆಸರು, ಸಹಾಯಕಿ ಹೆಸರು, ಮಕ್ಕಳ ಹಾಜರಾತಿ, ಅಂಗನವಾಡಿ ಶುಚಿತ್ವ, ಆಹಾರ ತಯಾರಿ, ವಿತರಣೆ, ಸ್ವಚ್ಛತೆ, ಮಕ್ಕಳ ಶುಚಿತ್ವ, ಸ್ಟಾಕ್ ರಿಜಿಸ್ಟರ್ ಕಾಲೋಚಿತಗೊಳಿಸಲಾಗಿದೆಯೇ, ಬಾಣಂತಿ/ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗಿದೆಯೇ, ಮೆನು ಪ್ರಕಾರ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆಯೇ ಮುಂತಾದ ವಿವರಗಳನ್ನು ತಪಾಸಣಾ ಪಟ್ಟಿಯಲ್ಲಿ ನಮೂದಿಸಲು ಸೂಚಿಸಲಾಗಿತ್ತು. ಮತ್ತು ಪ್ರತಿಯೊಂದಕ್ಕೂ ಎ,ಬಿ,ಸಿ ಮತ್ತು ಡಿ ಗ್ರೇಡ್ ನೀಡಲು ತಿಳಿಸಲಾಗಿತ್ತು.

ಬಳಿಕ ಜಿಲ್ಲಾಧಿಕಾರಿ ಅವರು ಸ್ವತಃ ಕಿನ್ನರ ಹಾಗೂ ಶಿರವಾಡಾ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಕಾರವಾರ ನಗರದ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹಾಗೂ ಪ್ರೋಬೆಷನರಿ ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಅವರು ಕಾರವಾರ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಕ್ರಮಕ್ಕೆ ಸೂಚನೆ: ಸಂಜೆ 5ಗಂಟೆಗೆ ಎಲ್ಲ್ಲ ನೋಡಲ್ ಅಧಿಕಾರಿ ಗಳೊಂದಿಗೆ ಮತ್ತೆ ವೀಡಿಯೊ ಕಾನ್ಫರೆನ್ಸ್ ನಡೆಸಿದ ಜಿಲ್ಲಾಧಿಕಾರಿ, ತಪಾಸಣೆ ವಿವರಗಳನ್ನು ಪಡೆದು ಕೊಂಡರು. ಕೆಲವು ಅಂಗನವಾಡಿಗಳಲ್ಲಿ ದಾಸ್ತಾನು ಸರಿಯಾಗಿ ನಮೂದಿಸದಿರುವುದು, ಮಕ್ಕಳ ಇರುವಿಕೆ ಹಾಗೂ ಹಾಜರು ಪುಸ್ತಕದ ನಮೂದಿಯಲ್ಲಿ ವ್ಯತ್ಯಾಸಗಳು, ಪೆನ್ಸಿಲ್‌ನಲ್ಲಿ ಹಾಜರಾತಿ ಗುರುತು ಹಾಕಿರುವುದು, 10ಗಂಟೆಯಾದರೂ ಅಂಗನವಾಡಿ ತೆರೆಯದಿರುವುದು ಇತ್ಯಾದಿ ಅಂಶಗಳನ್ನು ನೋಡಲ್ ಅಧಿಕಾರಿಗಳು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಶಿಸ್ತುಕ್ರಮ: ಕಾರವಾರ ನಗರದ ರಾಮಕೃಷ್ಣ ಆಶ್ರಮದ ಹತ್ತಿರದ ಅಂಗನವಾಡಿಯಲ್ಲಿ ಹಾಳಾಗಿದ್ದ ಬೆಲ್ಲವನ್ನು ಈಗಲೂ ನೀಡುತ್ತಿರುವುದು ತಪಾಸಣೆ ವೇಳೆ ಕಂಡು ಬಂದಿದ್ದು, ಸದರಿ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದರು.

ಬೋರಿಭಾಗ್ ಅಂಗನವಾಡಿಯಲ್ಲಿ ಅನಧಿಕೃತ ವ್ಯಕ್ತಿ ಅಂಗನವಾಡಿ ನಡೆಸುತ್ತಿದ್ದು, ಈ ಕುರಿತು ಸೂಪರ್‌ವೈಸರ್‌ಗೆ ಶೋಕಾಸು ನೋಟಿಸ್ ನೀಡಲು ತಿಳಿಸಿದರು. ನ್ಯೂನತೆಗಳನ್ನು ಗುರುತಿಸಿರುವ ಕಡೆಗಳಲ್ಲಿ ಶೋಕಾಸ್ ನೋಟಿಸ್ ಜಾರಿಗೊಳಿಸಿ ನಾಳೆ ಸಂಜೆಯೊಳಗೆ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News