ಟಿಂಬರ್ ಲಾರಿ ಓಡಾಟ ನಿಷೇಧದಿಂದ ಸಂಕಷ್ಟ
ಚಿಕ್ಕಮಗಳೂರು, ಆ.29: ಮಳೆಗಾಲದಲ್ಲಿ ಲಾರಿ ಸಂಚಾರದಿಂದ ರಸ್ತೆ ಹಾಳಾಗುತ್ತದೆ ಎಂಬ ನೆಪದಿಂದ ಜಿಲ್ಲೆಯಲ್ಲಿ ಟಿಂಬರ್ ಲಾರಿ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಮಾಲಕರು-ಚಾಲಕರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಹೇಳಿದ್ದಾರೆ.
ಅವರು ಇಂದು ನಗರದ ಸಹರಾ ಶಾದಿಮಹಲ್ನಲ್ಲಿ ಕರೆದಿದ್ದ ಜಿಲ್ಲಾ ಲಾರಿ ಮಾಲಕರ ಮತ್ತು ಚಾಲಕರ ಸಂಘದ ಹಾಗೂ ಟಿಂಬರ್ ಮಾಲಕರ ಸಭೆಯಲ್ಲಿ ಮಾತನಾಡಿದರು.
ಇದೊಂದು ವೈಜ್ಞಾನಿಕವಾಗಿ ಚರ್ಚೆ ಮಾಡಬೇಕಾದಂತ ವಿಚಾರ ಟಿಂಬರ್ ಲಾರಿ ನಿಷೇಧದಿಂದ ಲಾರಿ ಮಾಲಕರು-ಚಾಲಕರು, ಕ್ಲೀನರ್ಗಳ ಕುಟುಂಬ ತೊಂದರೆ ಅನುಭವಿಸುವ ಜೊತೆ ಕಾಫಿ ಬೆಳೆಗಾರರು, ರೈತರು, ಸಾಮಿಲ್ಗಳ ಕೆಲಸವು ಸಹ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ವಾಸ್ತವಾಂಶ ತಿಳಿಸಿ ಈ ಬಗ್ಗೆ ಮನವರಿಕೆ ಮಾಡಿದರೆ ಸ್ಪಂದಿಸುತ್ತಾರೆಂಬ ನಂಬಿಕೆ ಇದೆ. ಹಾಗಾಗಿ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸೋಣ ಎಂದು ಸಲಹೆ ನೀಡಿದರು.
ರಸ್ತೆಗಳ ಕೆಲವು ಕಡೆಗಳಲ್ಲಿ ಟಿಂಬರ್ ಲಾರಿ ಓಡಾಟದಿಂದ ಗುಂಡಿ ಬೀಳುತ್ತಿಲ್ಲ. ಅದು ಕಳಪೆ ಕಾಮಗಾರಿಯಿಂದ ಆಗುತ್ತಿರುವ ಅನ್ಯಾಯ. ಇದನ್ನು ಪರಿಗಣಿಸಿ ಅಂತಹ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಲಾರಿಗಳ ಸಂಚಾರ ನಿಷೇಧ ದಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು. ಈ ಸಂಬಂಧ ಎಲ್ಲರು ಒಗ್ಗಟ್ಟಾಗಿ ಜಿಲ್ಲಾಧಿಕಾರಿಗಳ ಬಳಿ ತೆರಳಿ ವಾಸ್ತವಾಂಶ ತಿಳಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ನಿಮ್ಮ ಹೋರಾಟದ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹಮಾನ್ ಮಾತನಾಡಿ, ಒಂದು ಲಾರಿಯಿಂದಾಗಿ 50ಜನರ ಜೀವನ ನಡೆಯುತ್ತ್ತದೆ. ನೂರಾರು ಲಾರಿಯಿಂದ ಸಹಸ್ರಾರು ಮಂದಿ ಕಾರ್ಮಿಕರು ನಿತ್ಯ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಲ್ಲಿ ಮೂರು ತಿಂಗಳು ಟಿಂಬರ್ ಲಾರಿ ಸಂಚಾರಕ್ಕೆ ಮಾತ್ರ ನಿಷೇಧ ಹೇರುವ ಕ್ರಮ ಸರಿಯಲ್ಲ. ಟಿಂಬರ್ ಲಾರಿಗಳಿಗೆ ಮಾತ್ರ ಈ ಮಾನದಂಡ ಅನ್ವಯಿಸುತ್ತದೆ ಎಂದರೆ ಯಾವನ್ಯಾಯ ಎಂದು ಪ್ರಶ್ನಿಸಿದ ಅವರು ಸಂಚಾರ ನಿಷೇಧ ಮಾಡುವುದಾದರೆ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಲಿ, ಇಲ್ಲವಾದರೆ 3ತಿಂಗಳ ಟ್ಯಾಕ್ಸ್ ಮನ್ನಾ ಮಾಡುವಂತೆ ಆಗ್ರಹಿಸಿದರು.
ಸಂಘದ ಮುಖಂಡರಾದ ರಫೀಕ್, ಮುನೀರ್, ಮಂಜುನಾಥ್, ಕುಮಾರ್, ಲದೀಮ್,ಅಸ್ಗರ್, ಅತೀಕ್ ಬೇಗ್, ಬಾಬಾ ಮತ್ತಿತರರು ಉಪಸ್ಥಿತರಿದ್ದರು.