×
Ad

ಅಳುವವರೇ ಎಲ್ಲ, ಸಂತೈಸುವವರ್ಯಾರೂ ಇಲ್ಲ

Update: 2016-09-08 19:18 IST

ಶಿವಮೊಗ್ಗ, ಸೆ. 8: ಇಡೀ ಊರಿಗೆ ಊರಿನಲ್ಲಿಯೇ ಆವರಿಸಿದ ಸೂತಕದ ಕರಿಛಾಯೆ... ಎಲ್ಲೆಲ್ಲೂ ಶೋಕ ಸಾಗರ.. ಮುಗಿಲು ಮುಟ್ಟಿದ ಆಕ್ರಂದನ... ಎಲ್ಲರ ಕಣ್ಣಾಲಿಗಳಲ್ಲಿ ಜಿನುಗುತ್ತಿದ್ದ ಕಣ್ಣೀರು... ಸಂತೈಸುವವರಿಗಿಂತ ಅಳುವವರ ಸಂಖ್ಯೆಯೇ ದುಪ್ಪಟ್ಟು... ಯಾರಿಗೂ ಸಮಾಧಾನ ಹೇಳಲಾಗದಂತಹ ಘೋರ ಸ್ಥಿತಿ...

ಇದು ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಗುರುವಾರ ಕಂಡುಬಂದ ಮನಕಲಕುವ ದೃಶ್ಯಾವಳಿಗಳು. ಬುಧವಾರ ಗ್ರಾಮದ ಮೂಲಕ ಹಾದು ಹೋಗಿರುವ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ದೋಣಿ ಮುಗುಚಿ 12 ಜನ ಜಲ ಸಮಾಧಿಯಾದ ದುರ್ಘಟನೆಯು ಇಡೀ ಗ್ರಾಮಕ್ಕೆ ಅಕ್ಷರಶಃ ಬರ ಸಿಡಿಲು ಬಡಿದಂತಹ ಅನುಭವ ಉಂಟು ಮಾಡಿದೆ.

ಕೆಲ ಕ್ಷಣಗಳಲ್ಲಿ ನಡೆದ ಹೋದ ದುರಂತದಿಂದ ಮೃತರ ಬಂಧು-ಬಳಗದವರು ಮಾತ್ರವಲ್ಲ, ಗ್ರಾಮದ ಇತರೆ ನಾಗರಿಕರನ್ನೂ ಕೂಡ ತಲ್ಲಣಗೊಳ್ಳುವಂತೆ ಮಾಡಿದೆ. ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಗ್ರಾಮದಲ್ಲಿಯೇ ಹಿಂದೆಂದೂ ಕಂಡುಕೇಳರಿಯದ ಕಹಿ ಘಟನೆಯ ಶಾಕ್‌ನಿಂದ ಹೊರಬರಲು ಗ್ರಾಮಸ್ಥರಿಗೆ ಸಾಧ್ಯವಾಗುತ್ತಿಲ್ಲವಾಗಿದೆ.

ಎಲ್ಲೆಲ್ಲೂ ಶೋಕ

ಗ್ರಾಮದಾದ್ಯಂತ ಸಾವಿರಾರು ಜನ ಜಮಾಯಿಸಿದ್ದರೂ ಎಲ್ಲೆಲ್ಲೂ ಸ್ಮಶಾನ ವೌನ ಆವರಿಸಿದೆ. ಮೃತರ ಮನೆಗಳ ಮುಂಭಾಗ ಸಾವಿನ ಸಂಕೇತ ಸೂಚಿಸುವ ಬೆಂಕಿ ಕಿಚ್ಚು ಹಾಕಿರುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ. ಗ್ರಾಮದ ಯಾವುದೇ ಬೀದಿಗೆ ಕಾಲಿಟ್ಟರೂ ಆಕ್ರಂದನ, ಚೀತ್ಕಾರಗಳು ಕೇಳಿಬರುತ್ತವೆ. ಕಣ್ಣೀರಿಡುವವರೇ ಕಂಡುಬರುತ್ತಾರೆ. ಕೆಲ ಮಹಿಳೆಯರ ಆಕ್ರಂದನವಂತೂ ಮುಗಿಲು ಮುಟ್ಟಿದೆ. ನಿಜಕ್ಕೂ ಇದೊಂದು ಘನಘೋರ ದುರಂತ. ನಮ್ಮ ಊರಿನವರು ತಮ್ಮ ಜೀವಮಾನದಲ್ಲೆಂದು ಮರೆಯಲಾಗದ ವಿಧಿಯಾಟವೊಂದು ನಡೆದು ಹೋಗಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ಕಣ್ಣೀರಿಡುತ್ತಿದೆ. ಸಂತೈಸುವವರ್ಯಾರು ಇಲ್ಲವಾಗಿದ್ದಾರೆ. ಸಮಾಧಾನ ಹೇಳಲು ಬಂದವರು ಕಣ್ಣೀರಾಗುತ್ತಿದ್ದಾರೆ. ಏನು ಮಾಡಬೇಕೆಂದು ದಿಕ್ಕು ತೋಚದ ಸ್ಥಿತಿ ನಮ್ಮಗಳದ್ದಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕಣ್ಣೀರಿಡುತ್ತಾರೆ.

ಜನಸಾಗರ

ಹಾಡೋನಹಳ್ಳಿ ಗ್ರಾಮದಲ್ಲಿ ನಡೆದ ದುರಂತದ ವಿಷಯ ತಿಳಿಯುತ್ತಿದ್ದಂತೆ ಬುಧವಾರವೇ ಸಾವಿರಾರು ಜನರು ಗ್ರಾಮಕ್ಕೆ ದೌಡಾಯಿಸಿದ್ದರು. ಗುರುವಾರ ಈ ಸಂಖ್ಯೆ ದುಪ್ಪಟ್ಟಾಗಿತ್ತು. ಸಾಗರೋಪಾದಿಯಲ್ಲಿ ಗ್ರಾಮಕ್ಕೆ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದರು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕಾಲಿಡಲು ಆಗದಷ್ಟು ಜನಸಂದಣಿಯಿತ್ತು. ಎಲ್ಲಿ ನೋಡಿದರಲ್ಲಿ ಜನರೇ ಕಂಡುಬರುತ್ತಿದ್ದರು. ಕಾರ್ಯಾಚರಣೆ ನಡೆಯುತ್ತಿದ್ದ ತುಂಗಭದ್ರಾ ನದಿಯ ಇಕ್ಕೆಲಗಳಲ್ಲಿ ಜನ ಸಾಗರವೇ ಜಮಾಯಿಸಿತ್ತು. ನೆರೆಹೊರೆಯ ಗ್ರಾಮಸ್ಥರು ಮಾತ್ರವಲ್ಲದೆ ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆಯಿಂದಲೂ ಹಾಡೋನಹಳ್ಳಿಗೆ ಜನರು ಆಗಮಿಸಿದ್ದರು. ಪಾರ್ಥಿವ ಶರೀರಗಳ ಅಂತಿಮ ದರ್ಶನಕ್ಕಿಟ್ಟಿದ್ದ ಮಾರಿ ದೇವಾಲಯ ಮೈದಾನ ಆವರಣ ಹಾಗೂ ಅಂತ್ಯ ಸಂಸ್ಕಾರ ನಡೆದ ಸ್ಮಶಾನದ ಸ್ಥಳದಲ್ಲಂತೂ ಸಾವಿರಾರು ಜನ ಜಮಾಯಿಸಿದ್ದರು. ನೂಕು ನುಗ್ಗಲಿನ ಪರಿಸ್ಥಿತಿ ಕಂಡುಬಂದಿತು.

ಅವಕಾಶ

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ಅವರವರ ಮನೆಗಳತ್ತ ಕೊಂಡೊಯ್ದು ಅಂತಿಮ ಧಾರ್ಮಿಕ ವಿಧಿ-ವಿಧಾನ ನೆರವೇರಿಸಲು ಕುಟುಂಬ ಸದಸ್ಯರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಕುಟುಂಬ ಸದಸ್ಯರು, ಬಂಧು-ಬಳಗದವರ ಆಕ್ರಂದನ ಹೇಳ ತೀರದಾಗಿತ್ತು. ತದನಂತರ ಶವಗಳನ್ನು ಮಾರಿ ದೇವಾಲಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೀಡಲಾಗಿತ್ತು.

ಸಾಮೂಹಿಕ ಅಂತ್ಯ ಸಂಸ್ಕಾರ

ಜಲ ಸಮಾಧಿಯಾದ 12 ಜನರಲ್ಲಿ 11 ಜನರ ಶವ ಪತ್ತೆಯಾಗಿದ್ದವು. ಸತತ ಕಾರ್ಯಾಚರಣೆಯ ನಡುವೆಯೂ ಸಾಗರ (26) ಎಂಬ ಯುವಕನ ಶವ ಗುರುವಾರ ಮಧ್ಯಾಹ್ನದವರೆಗೂ ಪತ್ತೆಯಾಗಿರಲಿಲ್ಲ. ಪ್ರಸ್ತುತ ಪತ್ತೆಯಾಗಿರುವ 11 ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ದರ್ಶನದ ನಂತರ ಎಲ್ಲ ಶವಗಳನ್ನು ಸಾಮೂಹಿಕವಾಗಿ ಹೂಳಲು ಗ್ರಾಮಸ್ಥರು ನಿರ್ಧಾರ ಕೈಗೊಂಡರು. ಆ್ಯಂಬುಲೆನ್ಸ್ ಮೂಲಕ ಶವಗಳನ್ನು ಸ್ಮಶಾನಕ್ಕೆ ತಂದು ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News