ವರ್ಗಾವಣೆಯಿಂದ ಶಿಕ್ಷಕರಿಗೆ ಮಾನಸಿಕ ತೊಂದರೆ: ಬಿಎಸ್ವೈ
ಶಿವಮೊಗ್ಗ, ಸೆ.8: ರಾಜ್ಯ ಸರಕಾರದ ಅವೈಜ್ಞಾನಿಕ ವರ್ಗಾವಣೆ ನೀತಿ, ಹುದ್ದೆಗಳ ಸ್ಥಳಾಂತರದಂತಹ ಪ್ರಕ್ರಿಯೆಗಳಿಂದಾಗಿ ಶಿಕ್ಷಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ಅನೇಕ ಮಾನಸಿಕ ತೊಳಲಾಟದಲ್ಲಿದ್ದಾರೆ. ತಮ್ಮ ಶಿಕ್ಷಕ ವೃತ್ತಿ ಹೊರತುಪಡಿಸಿ, ಗಣತಿ ಸರ್ವೇ, ಬಿಸಿಯೂಟದಂತಹ ಸರಕಾರದ ಅನ್ಯ ಕೆಲಸ-ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬೇಕಾಗಿದೆ. ಇದರಿಂದಾಗಿ ಶಿಕ್ಷಕರ ಅಮೂಲ್ಯ ಸಮಯ ಹಾಳಾಗುತ್ತಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾವೇ ಅಡಚಣೆ ಉಂಟು ಮಾಡುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಶಿಕ್ಷಕ ತನ್ನ ನಿರಂತರವಾದ ಕಾರ್ಯಗಳಿಂದ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸರ್ವಾಂಗೀಣ ವಿಕಾಸಕ್ಕೆ ರೂವಾರಿಯಾಗಬೇಕು. ಶಿಕ್ಷಕರು ಕಾರ್ಯನಿರ್ವಹಿಸುವ ಯಾವುದೇ ಗ್ರಾಮದ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಪ್ರತೀ ಗ್ರಾಮವು ಮಾದರಿ ಗ್ರಾಮವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಶಿಕ್ಷಕ ಮಕ್ಕಳ ಕಲಿಕೆಯನ್ನು ವೃದ್ಧಿಸುವ ಮಾಂತ್ರಿಕನಾಗಬೇಕು. ತಮ್ಮ ವ್ಯಕ್ತಿತ್ವ ಮತ್ತು ವಿದ್ವತ್ತಿನಿಂದಲೇ ಶಿಕ್ಷಕರಾಗಿ, ಶ್ರೇಷ್ಠ ತತ್ವಜ್ಞಾನಿಯಾಗಿ, ಉತ್ತಮ ಆಡಳಿತಗಾರರಾಗಿ, ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ಮಾರ್ಗದರ್ಶನ ನೀಡಿದವರು ಸರ್ವಪಲ್ಲಿ ರಾಧಾಕೃಷ್ಣನ್ ಅವರು. ಅವರ ನೆನಪಿನಲ್ಲಿ ಆಚರಿಸುತ್ತಿರುವ ಶಿಕ್ಷಕರ ದಿನಾಚರಣೆ ವಿಶೇಷವೆನಿಸಿದೆ ಎಂದರು.
ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕ್ಷಕರಿಗೆ ಇರುವ ಅನ್ಯ ಕೆಲಸದ ಒತ್ತಡದಿಂದ ಮುಕ್ತಗೊಳಿಸಬೇಕಾದ ಅಗತ್ಯವಿದೆ. ಶಿಕ್ಷಕರ ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಸಮಾಜದ ವ್ಯವಸ್ಥೆ ಸರಿಪಡಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾವಿಜಯಕುಮಾರ್, ಸೂಡಾಧ್ಯಕ್ಷ ಎನ್.ರಮೇಶ್, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ, ಡಿ.ಕೆ.ದಿವಾಕರ್, ಬಿ.ಸಿ.ಸಿದ್ದಬಸಪ್ಪ, ಮಹಾಬಲೇಶ್ವರ ಹೆಗಡೆ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.