ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ

Update: 2016-09-11 17:51 GMT

ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ

-ಬಿ.ಕೆ ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಕೇಸರಿ ಬಾತ್ ತರ ಅದೂ ಒಂದು ತಿಂಡಿ ಎಂದು ಜನರು ಭಾವಿಸಿ ತಿನ್ನಬೇಕಾಗಿದೆ.

---------------------

ಜನಸೇವಕನೇ ನಿಜವಾದ ಜನನಾಯಕ

-ಪ್ರಮೋದ್ ಮಧ್ವರಾಜ್, ಸಚಿವ

ಸಚಿವ, ಶಾಸಕರೆಲ್ಲ ಹಾಗಾದರೆ ಏನು?

---------------------

ನಮ್ಮ ಪ್ರಜಾಪ್ರಭುತ್ವ ಅತ್ಯಂತ ಪ್ರಬುದ್ಧವಾಗಿದೆ

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಆದರೆ ಅದು ಅಪ್ರಬುದ್ಧರ ಕೈಯಲ್ಲಿ ಸಿಲುಕಿ ನರಳುತ್ತಿದೆ.

---------------------

ನಮ್ಮ ಜೀವನವನ್ನು ಭಾವನೆಗಳು ಆಳುತ್ತವೆ

-ಬಾಬಾ ರಾಮ್‌ದೇವ್, ಯೋಗಗುರು

ಭಾವನೆಗಳ ತಳಹದಿಯ ಮೇಲೆ ತಾನೆ ನಿಮ್ಮ ಪತಂಜಲಿ ನಿಂತಿರುವುದು.

---------------------

ಇಂದಿನ ರಾಜಕಾರಣಿಗಳು ಯಾರೂ ಪ್ರಾಮಾಣಿಕರಲ್ಲ

-ಬಸವರಾಜ ರಾಯರೆಡ್ಡಿ, ಸಚಿವ

ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಹಾಗಿದೆ.

---------------------

ವರ್ಷಕ್ಕೆ ಒಂದು ಬಾರಿ ಖಾದಿ ಹಾಕುವವರು ದೇಶಭಕ್ತರಲ್ಲ

-ಪ್ರಹ್ಲಾದ್ ಜೋಷಿ, ಸಂಸದ

ಖಾದಿಯ ಜೊತೆಗೆ ಕೇಸರಿಯನ್ನೂ ಧರಿಸಬೇಕೇ?

---------------------

ಹಿಂದ ವರ್ಗದ ಅಭಿವೃದ್ಧಿ ಆಗುವವರೆಗೂ ವಿಶ್ರಮಿಸುವುದಿಲ್ಲ

-ಕೆ.ಎಸ್ ಈಶ್ವರಪ್ಪ, ವಿ.ಪ.ವಿ.ಪ ನಾಯಕ

ಯಡಿಯೂರಪ್ಪರನ್ನು ಹಿಂದೆ ಹಾಕುವವರೆಗೆ ಎಂದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು.

---------------------

ಅಜ್ಞಾತವಾಸದಲ್ಲಿದ್ದ ಪಾಂಡವರನ್ನು ಹುಡುಕಲು ಕೌರವರು ಗೋ ಅಪಹರಣ ಮಾಡಿದ್ದರು

-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಸೈರಂಧ್ರಿಯ ಸೀರೆಗೆ ಕೈ ಹಾಕಿದ ಕೀಚಕನ ಉದಾಹರಣೆ ಯಾಕೆ ನೀಡಬಾರದು?

---------------------

ಕೇಜ್ರಿವಾಲ್ ಸಂಪುಟ ಸದಸ್ಯರು ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗುತ್ತಿರುವುದು ಬೇಸರದ ಸಂಗತಿ

-ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಒಳಗೊಳಗೆ ಸಂಭ್ರಮಪಡುತ್ತಿರುವ ವಿಷಯವೂ ಬಹಿರಂಗವಾಗಿದೆ.

---------------------

ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ನಾಯಿ ಬಾಲ ಇದ್ದಂತೆ

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಮತ್ತೇಕೆ ಆ ಬಾಲಕ್ಕೆ ಜೋತು ಬಿದ್ದಿದ್ದೀರಿ?

---------------------

ಗಾಜಿನ ಮನೆಯಲ್ಲಿ ಕುಳಿತವರು ಇತರರ ಕಡೆಗೆ ಕಲ್ಲು ತೂರಬಾರದು

-ಗೌತಮ್ ಬಾಂದಾವಲೆ, ಪಾಕ್‌ನಲ್ಲಿರುವ ಭಾರತದ ಹೈಕಮಿಷನರ್

ಗುಂಡಿನ ದಾಳಿ ನಡೆಸಬಹುದೇ?

---------------------

ಖಾಸಗಿ ಶಾಲೆಗಳ ಜತೆ ಸ್ಪರ್ಧೆ ಮಾಡುವ ಧೈರ್ಯವನ್ನು ಸರಕಾರಿ ಶಾಲೆಯ ಶಿಕ್ಷಕರು ಬೆಳೆಸಿಕೊಳ್ಳಬೇಕು

-ಶೋಭಾ ಕರಂದ್ಲಾಜೆ, ಸಂಸದೆ

ಆ ಧೈರ್ಯವನ್ನು ಮೊದಲು ಸರಕಾರ ಪ್ರದರ್ಶಿಸಬೇಕಾಗಿದೆ.

---------------------

ಹುಟ್ಟಿದವರೆಲ್ಲ ಬಸವ ಆಗಲು ಸಾಧ್ಯವಿಲ್ಲ

-ಡಿ.ಕೆ ಶಿವಕುಮಾರ್, ಸಚಿವ

ಆದರೆ ತಮ್ಮ ಹಾಗೆ ಬೋಳೆ ಬಸವ ಆಗುವುದಕ್ಕೆ ಸಾಧ್ಯ.

---------------------

ನಾನು ಪಂಜಾಬಿ ಆಗಿದ್ದರೂ ಮದುವೆಯಾಗಿದ್ದು ಬ್ರಾಹ್ಮಣನನ್ನು. ಆದ್ದರಿಂದ ನಾನು ಬ್ರಾಹ್ಮಣ ಮಹಿಳೆ

-ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ

ಬಹಳ ದುಃಖದ ವಿಷಯ.

---------------------

ಮನುಷ್ಯನಿಗೆ ಆರ್ಥಿಕ ಬಡತನ ಇದ್ದರೂ ಹೃದಯ ಬಡತನ ಇರಬಾರದು

-ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಹೃದಯ ಶ್ರೀಮಂತಿಕೆಯನ್ನು ಬಡ್ಡಿಗೆ ಸಾಲ ನೀಡುವ ಯೋಜನೆಯೇನಾದರೂ ಇದೆಯೇ?

---------------------

ಪಾಕಿಸ್ತಾನ ಭಯೋತ್ಪಾದಕರನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶ

-ನರೇಂದ್ರ ಮೋದಿ, ಪ್ರಧಾನಿ

ನೀವು ಆಮದು ಮಾಡಿಕೊಳ್ಳಲು ಅತ್ಯುತ್ಸಾಹದಲ್ಲಿರುವಾಗ, ಅವರು ರಫ್ತು ಮಾಡದೇ ಇರುತ್ತಾರೆಯೇ?

---------------------

ಬಿಜೆಪಿಯಲ್ಲಿ ನಾನು ಆಲಂಕಾರಿಕ ವಸ್ತುವಿನಂತಿದ್ದೆ

-ನವಜೋತ್ ಸಿಂಗ್ ಸಿಧು, ಮಾಜಿ ಸಂಸದ

ಬರೇ ಅಲಂಕಾರಕ್ಕಷ್ಟೇ ಸೀಮಿತ ಎಂದಾಯಿತು.

---------------------

ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ

-ಅಖಿಲೇಶ್ ಯಾದವ್, ಉ.ಪ.ಮುಖ್ಯಮಂತ್ರಿ

ಅದಷ್ಟೇ ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ.

---------------------

ಪಾಠ ಮಾಡುವುದನ್ನು ಬಿಟ್ಟು ಜನಪ್ರತಿನಿಧಿಗಳ ಹಿಂದೆ ಸುತ್ತುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

-ತನ್ವೀರ್ ಸೇಠ್, ಸಚಿವ

ಮುಖ್ಯಮಂತ್ರಿಯ ಹಿಂದೆ ಸುತ್ತುವ ಸಚಿವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು.

---------------------

ಧರ್ಮ ರಕ್ಷಣೆ ನಮ್ಮ ಕರ್ತವ್ಯವಾಗಬೇಕು

-ವಜುಭಾಯಿ ವಾಲ, ರಾಜ್ಯಪಾಲ

ರಾಜಧರ್ಮದ ಗತಿ?

---------------------

ನಾನಿನ್ನೂ ತಾಜ್‌ಮಹಲ್ ನೋಡಿಲ್ಲ

-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

ಸಂಘಪರಿವಾರದ ಕಣ್ಣು ಅದರ ಮೇಲೆ ಬೀಳುವ ಮೊದಲು ಒಮ್ಮೆ ನೋಡಿಬಿಡಿ.

---------------------

ಜಯಲಲಿತಾ ತವರು ಮನೆಗೆ ಅನ್ಯಾಯ ಮಾಡಬಾರದು

-ಭಾರತಿ ವಿಷ್ಣುವರ್ಧನ್, ನಟಿ

ಹಾಗೆಂದು ಗಂಡನ ಮನೆಗೆ ದ್ರೋಹ ಬಗೆಯುವುದಕ್ಕಾಗುತ್ತದೆಯೇ?

---------------------

ಭಾರತಕ್ಕೆ ಬರುವ ಆಸೆ ಇದೆ. ಆದರೆ ಪಾಸ್‌ಪೋರ್ಟ್ ಇಲ್ಲ

-ವಿಜಯ ಮಲ್ಯ, ಉದ್ಯಮಿ ನೀವೇ ಬರಬೇಕಾಗಿಲ್ಲ, ನಮ್ಮ ಪೊಲೀಸರನ್ನು ಅಲ್ಲಿಗೇ ಕಳುಹಿಸಿಕೊಡುತ್ತೇವೆ.

---------------------

ಕನ್ನಡ ಕಲಿತ ಮಕ್ಕಳು ಬಾವಿಯೊಳಗಿನ ಕಪ್ಪೆಗಳಂತಾಗುತ್ತಾರೆ

-ನಾ.ಆನಂದ ಬೈರಾರೆಡ್ಡಿ, ಹೈಕೋರ್ಟ್ ನ್ಯಾಯಮೂರ್ತಿ

ಬಾವಿಯೊಳಗೆ ಕುಳಿತು ನೀಡಿದ ಹೇಳಿಕೆ.

---------------------

ಮೋದಿ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕೆ ಗೊತ್ತು ಗುರಿ ಇಲ್ಲದವರೆಲ್ಲ ಸಂಸದರಾದರು

-ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಮೋದಿಯವರನ್ನು ಇಳಿಸುವುದಕ್ಕಾಗಿ ಅವರನ್ನೆಲ್ಲ ಜನರೇ ಇಳಿಸುತ್ತಾರೆ ಬಿಡಿ.

---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...