ಅಪಘಾತ: ಒಬ್ಬ ಮೃತ್ಯು, ಇಬ್ಬರಿಗೆ ಗಾಯ
Update: 2016-09-15 22:20 IST
ವೀರಾಜಪೇಟೆ,ಸೆ.15: ಸಮೀಪದ ಪೆರುಂಬಾಡಿಯಲ್ಲಿ ಬುಧವಾರ ಸಂಜೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬೈಕ್ ಹಾಗೂ ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹುಣಸೂರಿನ ಬಿಳಿಕೆರೆಯ ನಿವಾಸಿ ಬಸವರಾಜು(26) ಎಂಬವರು ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಬೈಕ್ನ ಹಿಂಬದಿಯ ಸವಾರ ಧರ್ಮಪುರದ ಗವಿಸ್ವಾಮಿ ಹಾಗೂ ಆಟೊ ಚಾಲಕ ಕೇಶವ ಎಂಬವರು ಗಾಯಗೊಂಡಿದ್ದಾರೆ. ಕಾಲಿನ ಮೂಳೆ ಮುರಿತಕ್ಕೊಳಗಾಗಿರುವ ಗವಿಸ್ವಾಮಿಯನ್ನು ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.