×
Ad

ವಿಶ್ವ ಮಾನವ ಸಂದೇಶವನ್ನು ಮಾದರಿಯಾಗಿಸಿಕೊಳ್ಳಲು ಕರೆ: ಡಾ.ನಂಜುಂಡೇಗೌಡ

Update: 2016-09-16 22:20 IST

 ಮಡಿಕೇರಿ, ಸೆ.16 : ಮನುಕುಲ ಕುಟುಂಬಕ್ಕೆ ವಿಶ್ವ ಮಾನವ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಇಡೀ ಮಾನವ ಜನಾಂಗದ ಗುರು ಎಂದು ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಬಣ್ಣಿಸಿದರು. 

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣಗುರು ಜಯಂತ್ಯುತ್ಸವವನ್ನು ಆಚರಿಸುವುದರಿಂದ ವ್ಯಕ್ತಿ ಹಾಗೂ ವ್ಯಕ್ತಿಯ ವಿಕಸನಕ್ಕೆ ಮಹತ್ವ ದೊರೆಯುತ್ತದೆ. ನಾರಾಯಣ ಗುರುಗಳು ತಿಳಿಸಿದ ಮಹತ್ವದ ಅಂಶಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ನಾರಾಯಣ ಗುರುಗಳು ಸಮಾಜದ ಕೆಳ ವರ್ಗದವರು ಶೋಷಣೆಗೆ ಒಳಗಾದಾಗ ಇದರ ವಿರುದ್ಧ ಹೋರಾಡಿದರು. ದೀನ ದಲಿತರಿಗೆ ಅಸ್ಪಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ತಿಳಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ಸರಕಾರ ಅನೇಕ ದಾರ್ಶನಿಕರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಅವುಗಳಲ್ಲಿ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಚರಿಸುತ್ತಿರುವುದು ಶ್ಲಾಘನೀಯವೆಂದರು.

  

  

  

 ಗುರುಗಳು ಹುಟ್ಟಿದ್ದು ಕೇರಳದಲ್ಲಿ ಆದರೂ, ಅವರ ಸಂದೇಶಗಳು ವಿಶ್ವ ಮಟ್ಟದಲ್ಲಿ ಅಪಾರ ಖ್ಯಾತಿಗಳಿಸಿದೆ. ತತ್ವ, ಪರಂಪರೆ ಮೂಲಕ ಸಮಾಜಮುಖಿಯಾಗಿ ದೇಶ ವಿದೇಶಗಳಿಗೆ ಮಾಹಿತಿ ನೀಡಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಸ್ವ ಸಾಮರ್ಥ್ಯದಿಂದ ಅಪಾರ ಜ್ಞಾನಗಳಿಸಿ, ಲೋಕಾನುಭವ ಪಡೆದು ಸಮಾಜದಲ್ಲಿ ಸಮಾನತೆ ತರಲು ಹೋರಾಡಿದರು. ತಮ್ಮ ಜೀವಿತದ ಅವಧಿಯಲ್ಲಿ ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದವರು ಎಂದು ನುಡಿದರು. ಜಿಪಂ ಮಾಜಿ ಅಧ್ಯಕ್ಷ ವಿಜಯಾ ಮಾತನಾಡಿ, ಮತ ಯಾವುದಾದರೂ ಪರವಾಗಿಲ್ಲ, ಮನುಷ್ಯನಾಗಿ ಬಾಳು ಎಂದು ಸಮಾಜಕ್ಕೆ ತಿಳಿಸಿದವರು ನಾರಾಯಣ ಗುರುಗಳು. ಅವರ ತತ್ವಗಳನ್ನು ಪಾಲನೆ ಮಾಡುವಂತಾಗಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ ಆನಂದ ರಘು, ನಾರಾಯಣ ಧರ್ಮ ಪರಿಪಾಲನಾ ಯೋಗಂನ ಅಧ್ಯಕ್ಷ ಕೆ.ಎನ್.ವಾಸು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್ ಕುಳ್ಳಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಪ್ಷಾರ್ಚನೆ ಮಾಡಿದರು. ರಾಘವೇಂದ್ರ ಪ್ರಸಾದ್ ನೇತೃತ್ವದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News