×
Ad

ಸಿದ್ದಾಪುರ-ವೀರಾಜಪೇಟೆ ರಸ್ತೆಯಲ್ಲಿ ಕಾಡಾನೆಗಳ ಸಂಚಾರ

Update: 2016-09-19 21:52 IST

ಮಡಿಕೇರಿ, ಸೆ.19: ಕಳೆದ ಕೆಲವು ವರ್ಷಗಳಿಂದ ಕಾಡನ್ನು ಬಿಟ್ಟು ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ವಾಸ್ತವ್ಯ ಹೂಡಿರುವ ಬೆಳವಣಿಗೆಗಳು ಇತ್ತೀಚೆಗೆ ಸಾಮಾನ್ಯವಾಗಿರುವ ಬೆನ್ನಲ್ಲೇ ಇದೀಗ ಕಾಡಾನೆಗಳು ಜನನಿಬಿಡ ಪ್ರದೇಶದ ರಸ್ತೆಗಳಲ್ಲೆ ಸಂಚರಿಸಲು ಆರಂಭಿಸಿವೆ.

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕಾಫಿ ತೋಟಗಳೇ ಇವುಗಳ ಆವಾಸ ಸ್ಥಾನವಾಗಿ ಬಿಟ್ಟಿವೆ. ಮರಿಯಾನೆಯೊಂದಿಗಿರುವ ಸುಮಾರು 11ಕಾಡಾನೆಗಳ ಹಿಂಡು ಸೆ.19ರಂದು ಸಿದ್ದಾಪುರ-ವೀರಾಜಪೇಟೆ ಮಾರ್ಗದಲ್ಲಿರುವ ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಸಂಚರಿಸಿವೆ.

ಯಾವುದೇ ಆತಂಕವಿಲ್ಲದೆ ರಸ್ತೆಯಲ್ಲಿ ಸಂಚರಿಸಿದ ಕಾಡಾನೆಗಳಿಂದಾಗಿ ಸುಮಾರು ಅರ್ಧಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆ 8:30ರ ಸುಮಾರಿಗೆ ಈ ಕಾಡಾನೆಗಳ ಹಿಂಡು ಪ್ರತ್ಯಕ್ಷವಾದ ಕಾರಣ ವಿದ್ಯಾರ್ಥಿಗಳು ಶಾಲೆಗೆ ತೆರಳಲಿಲ್ಲ ಮತ್ತು ಕಾರ್ಮಿಕರು ತೋಟಗಳಲ್ಲಿ ಕಾರ್ಯ ನಿರ್ವಹಿಸಲಿಲ್ಲ. ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಏಕಾಏಕಿ ಸೋಲಾರ್ ಬೇಲಿಯನ್ನು ಮುರಿದು ರಸ್ತೆಗೆ ಲಗ್ಗೆ ಇಟ್ಟವು. ಈ ಅನಿರೀಕ್ಷಿತ ಬೆಳವಣಿಗೆಯಿಂದ ತೀವ್ರ ಆತಂಕಕ್ಕೆ ಒಳಗಾದ ಗ್ರಾಮಸ್ಥರು ಮನೆಗಳಿಂದ ಹೊರ ಬರಲು ಹಿಂಜರಿದರು.

ಕೆಲವು ದಿನಗಳ ಹಿಂದೆಯಷ್ಟೆ ಪಿರಿಯಾಪಟ್ಟಣದ ನಿವಾಸಿ ಹೂ ಮಾರಾಟಗಾರ ಬಸವರಾಜು ಎಂಬವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಆನೆಯೊಂದು ಈ ಗುಂಪಿನಲ್ಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗುಹ್ಯ ಮೂಲಕ ಆಗಮಿಸಿ ರಸ್ತೆಯಲ್ಲಿ ಓಡಾಡಿದ ಕಾಡಾನೆಗಳು ನಂತರ ಬೀಟೆಕಾಡು ವ್ಯಾಪ್ತಿಗೆ ತೆರಳಿದವು.

ಸಿದ್ದಾಪುರ-ವೀರಾಜಪೇಟೆ ಮಾರ್ಗದಲ್ಲಿ 11 ಕಾಡಾನೆಗಳಿರುವ ಒಂದು ಗುಂಪು ಹಾಗೂ 20ಕ್ಕೂ ಹೆಚ್ಚು ಆನೆಗಳಿರುವ ಮತ್ತೊಂದು ಗುಂಪು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ದೂರು ನೀಡಿದಾಗ ಮಾತ್ರ ಸ್ಥಳಕ್ಕೆ ಆಗಮಿಸುವ ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ ಮರಳುತ್ತಾರೆ. ಆದರೆ, ಕಾಡಾನೆಗಳು ಈ ಗ್ರಾಮದ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಜೀವಕ್ಕೆ ಭದ್ರತೆ ಇಲ್ಲದಾಗಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರದ ನಿರ್ಲಕ್ಷ:  ಜಿಲ್ಲೆಯ ಜನಪ್ರತಿನಿಧಿಗಳು ಅರಣ್ಯ ಸಚಿವ ರಮಾನಾಥ ರೈ ಅವರ ಗಮನ ಸೆಳೆದು ಕಾಡಾನೆ ಹಾವಳಿಯ ಗಾಂಭೀರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಕಾಡಾನೆ ದಾಳಿಯಿಂದ ಜೀವ ಕಳೆದುಕೊಂಡ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ದೊರೆಯುತ್ತಿದೆಯೇ ಹೊರತು ಮತ್ತೆ ಮತ್ತೆ ಮಾನವ ಜೀವ ಹಾನಿ ಹಾಗೂ ಬೆಳೆ ಹಾನಿಯಾಗುವುದನ್ನು ತಡೆಯುವುದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾರೂ ಕೂಡ ಕಾಳಜಿ ತೋರುತ್ತಿಲ್ಲ. ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಕೇಂದ್ರದ ಅನುಮತಿ ಬೇಕಾಗಿರುವುದರಿಂದ ಸಂಸದ ಪ್ರತಾಪ ಸಿಂಹ ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದಾಗಿತ್ತೆನ್ನುವ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂದಿದೆ.

ಅರಣ್ಯಾಧಿಕಾರಿಗಳು ಪ್ರತಿ ಸಭೆಯಲ್ಲಿ ಕಾಡಾನೆ ಹಾವಳಿ ತಡೆಗೆ ಯೋಜನೆಗಳನ್ನು ರೂಪಿಸಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆಯೆ ಹೊರತು ಇಲ್ಲಿಯವರೆಗೆ ಈ ಯೋಜನೆಗಳಿಂದ ಕಾಡಾನೆಗಳ ಹಾವಳಿಯನ್ನು ತಡೆಯಲು ಸಾಧ್ಯವಾಗಿಲ್ಲ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಇದೀಗ ರಾಜಾರೋಷವಾಗಿ ರಸ್ತೆಯಲ್ಲೇ ಓಡಾಡಲು ಆರಂಭಿಸಿವೆ ಎಂದರೆ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರಕಾರ ಅರಿತುಕೊಂಡು ತಕ್ಷಣ ಎಚ್ಚೆೆತ್ತುಕೊಳ್ಳುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News