ನೀರಿನ ಸಮಸ್ಯೆ ಪರಿಹಾರಕ್ಕೆ ಸಮಗ್ರ ದೃಷ್ಟಿಕೋನ ಬೇಕು

Update: 2016-09-20 11:33 GMT
Editor : ರಮ್ಯಾ

ನಮ್ಮ ರಾಜ್ಯವನ್ನು, ದೇಶವನ್ನು ಅಷ್ಟೇ ಏಕೆ ಇಡೀ ಪ್ರಪಂಚವನ್ನೇ ಬಾಧಿಸುತ್ತಿರುವ ನೀರಿನ ಸಮಸ್ಯೆಯ ಕುರಿತು ನನ್ನ ಹಾಗೂ ನನ್ನ ತಂದೆಯವರ ನಡುವೆ ಬಹುವರ್ಷಗಳಿಂದಲೂ ಆಗಾಗ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲೆಲ್ಲಾ ಅವರು ಹೇಳುತ್ತಿದ್ದ ಒಂದು ಮಾತೆಂದರೆ ನಾವು ನೀರನ್ನು ಉಳಿಸಿ - ಬಳಸುವ ವಿಷಯದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳದೇ ಇದ್ದಲ್ಲಿ ಖಂಡಿತವಾಗಿಯೂ ಮುಂದೆ ನೀರಿಗಾಗಿ ಯುದ್ಧ, ಮಹಾಯುದ್ಧಗಳೇ ಸಂಭವಿಸುತ್ತವೆ. ಇದು ನನಗೂ ನಿಜ ಎನಿಸುತ್ತದೆ. ಈ ನೀರಿನ ಸಮಸ್ಯೆ ಎಷ್ಟು ಅಗಾಧವಾದದು ಮತ್ತು ಮನುಷ್ಯ ಕುಲಕ್ಕೆ ಎಂತಹ ಆಪತ್ತು ತರಬಲ್ಲದು ಎಂಬ ಕುರಿತು ನಾನು 2008ನೇ ಇಸವಿಯಿಂದಲೂ ನನ್ನ ಅಭಿಪ್ರಾಯಗಳನ್ನು ಲೇಖನ, ಬರಹಗಳ ಮೂಲಕ ಹಂಚಿಕೊಳ್ಳುತ್ತಾ ಬಂದಿದ್ದೇನೆ.

ಈಗ ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ನಮಗೂ, ತಮಿಳುನಾಡಿಗೂ ನಡುವೆ ಸುದೀರ್ಘ ಕಾಲದಿಂದ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹ ಈ ವಿಷಯ ಬಹಳ ಮುಖ್ಯವಾಗಿದೆ. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಟ್ರಿಬ್ಯುನಲ್ ನೀಡಿದ್ದ ಐತೀರ್ಪು (Award) ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸದ ಕಾರಣ ನಾವು ಸುಪ್ರೀಂ ಕೋರ್ಟಿಗೆ ವಿಶೇಷ ಅರ್ಜಿ (Special Leave Petition) ಸಲ್ಲಿಸಿದ್ದೇವೆ. 1892 ಹಾಗೂ 1924 ರ ಒಪ್ಪ೦ದಗಳ ಪ್ರಕಾರ ಈ ಹಿಂದೆ 380 TMC ನೀರನ್ನು ತಮಿಳು ನಾಡಿಗೆ ಬಿಡಬೇಕು ಎಂದಿದ್ದನ್ನು 192 TMCಗೆ ಇಳಿಸಲಾಗಿದೆಯಾದರೂ ಮಳೆ ಇಲ್ಲದ ದಿನಗಳಲ್ಲಿ ತಮಿಳುನಾಡಿಗೆ ಅವರು ಕೇಳಿದಷ್ಟು ನೀರು ಬಿಡಲು ಅಸಾಧ್ಯವಾದ ಪರಿಸ್ಥಿತಿ ಏರ್ಪಡುತ್ತದೆ. ಈ ನಿಟ್ಟಿನಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ನಮ್ಮ ರಾಜ್ಯವು ಸಲ್ಲಿಸಿರುವ ಅರ್ಜಿಯು ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ. ನಮ್ಮ ವಾದವನ್ನು ಆಲಿಸಿ ಸುಪ್ರೀಂ ಕೋರ್ಟು ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಯ ನನಗಿದೆ. ಅಕ್ಟೋಬರ್ ನಲ್ಲಿ ಬರುವ ತೀಪು೯ 192 TMC ಗಿ೦ತ ಕಡಿಮೆ ಆದ ಪಕ್ಷದಲ್ಲೂ ಸಹ ನೀರಿನ ಸ೦ರಕ್ಷಣೆಯ ಬಗ್ಗೆ ಗಮನ ಹರಿಸದಲ್ಲಿ ಮು೦ದಿನ ದಿನಗಳಲ್ಲಿ ಮತ್ತೆ ಇದೇ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ಇತ್ತೀಚೆಗೆ ಸುಪ್ರೀಂ ಕೋರ್ಟು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ವಪಕ್ಷ ಪ್ರತಿನಿಧಿಗಳ ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಗಳಲ್ಲಿ, ನಮ್ಮ ಜಿಲ್ಲೆಯ ರೈತರಿಗೆ ಆದ್ಯತೆಯ ಮೇಲೆ ನೀರು ಬಿಡುವುದನ್ನು ಖಾತ್ರಿಪಡಿಸಬೇಕು ಎಂಬ ಕೋರಿಕೆ ಮುಂದಿಟ್ಟಿದ್ದೆ. ನಂತರ ಈ ಭರವಸೆಯನ್ನೂ ಮುಖ್ಯಮಂತ್ರಿಗಳಿಂದ ಪಡೆದಿದ್ದೆ. ಮಂಡ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಕರ್ನಾಟಕ ಸರ್ಕಾರವು ನಮ್ಮ ಜಿಲ್ಲೆಗೆ ನೀರು ಒದಗಿಸಿದೆ. ಈ ನಡುವೆ ಕೋರ್ಟ್ ಆದೇಶದಿಂದ ಆತಂಕಗೊಂಡಿದ್ದ ಜನರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದರು.

ನಮ್ಮ ರೈತರು ಮತ್ತು ಕನ್ನಡಿಗರು ತಮಗಾಗುವ ಅನ್ಯಾಯದ ವಿರುದ್ಧ ಯಾವತ್ತೂ ನ್ಯಾಯಯುತವಾಗಿಯೇ ಪ್ರತಿಭಟನೆ ಮಾಡಿಕೊಂಡು ಬಂದವರು. ದುರದೃಷ್ಟವಶಾತ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿರುವ ಹಿಂಸೆಗಳು ರೈತರಿಗೆ ಮತ್ತು ಕನ್ನಡಿಗರಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿವೆ.

ಮುಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಬೆಳೆದಂತೆ, ನಗರಗಳು ಬೆಳೆದಂತೆ ನೀರಿನ ಮೇಲಿನ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ. ಈ ಕಾರಣದಿಂದ ಮುಂದೆ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ನಾವು ಹತ್ತು ಹಲವು ರೀತಿಯ ಪರ್ಯಾಯ ಮಾರ್ಗೋಪಾಯಗಳನ್ನು ಶೋಧಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಮಂಡ್ಯಗಳನ್ನು ದೃಷ್ಟಿಯಿರಿಸಿಕೊಂಡು ನಾನು ಯೋಚಿಸಿದ ಪರ್ಯಾಯಗಳು ಹೀಗಿವೆ.

• ಮುಖ್ಯವಾಗಿ ಕಾವೇರಿ ನದಿ ತೀರದಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳು ದಂದೆಯನ್ನು ಹೇಗಾದರೂ ಮಾಡಿ ಕೊನೆಗೊಳಿಸಬೇಕು. ಕಾವೇರಿ ಮತ್ತು ಅದರ ಉಪನದಿಗಳಾದ ಶಿಂಶಾ, ಹೇಮಾವತಿ, ಲೋಕಪಾವನಿ ಮತ್ತು ವೀರವೈಷ್ಣವಿಗಳಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳು ದಂದೆಯಿಂದಾಗಿ ರೈತರಿಗೆ ಆಗಿರುವ ಹಾನಿ ಅಪಾರ. ನದಿನೀರಿನ ಹರಿವನ್ನು ಸುಗಮಗೊಳಿಸುವುದು ನದಿಯ ಎರಡೂ ದಂಡೆಗಳಲ್ಲಿರುವ ಮರಳಾಗಿರುತ್ತದೆ. ಆದರೆ ಈಗ ಬೇಕಾಬಿಟ್ಟಿಯಾಗಿ ನಡೆಯುತ್ತಿರುವ ಮರಳುದಂದೆಯಿಂದಾಗಿ ನದಿಹರಿವಿನ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಹಾಗೆಯೇ ಪ್ರತಿನಿತ್ಯ ಸಾವಿರಾರು ಲಾರಿಗಳು ಸಾಗಿಸುವ ಮರಳಿನಲ್ಲಿ ಪೋಲಾಗುತ್ತಿರುವ ನೀರನ ಪ್ರಮಾಣ ಕಡಿಮೆಯದೇನಲ್ಲ.

• ಅಣೆಕಟ್ಟೆಗಳ ಆಧುನೀಕರಣ- ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮತ್ತು ಚಿಕ್ಕ 12 ಅಣೆಕಟ್ಟೆಗಳಿವೆ. ಒಂದು ಅಂದಾಜಿನ ಪ್ರಕಾರ ಇಂದು ಈ ಅಣೆಕಟ್ಟೆಗಳ ಒಂದು TMC ನೀರಿನಿಂದ 2000 ಎಕರೆ ಜಮೀನಿಗೆ ನೀರು ಹರಿಸಬಹುದಾಗಿದ್ದರೆ ಅದೇ ಈ ಅಣೆಕಟ್ಟೆಗಳನ್ನು ಆಧುನೀಕರಿಸಿದರೆ 1 TMC ನೀರಿನಿಂದ ಸುಮಾರು 4000 ಸಾವಿರ ಎಕರೆ ಜಮೀನಿಗೆ ನೀರು ಹರಿಸಬಹುದಾಗಿದೆ.

• ಈ ಹಿಂದೆ ಕಾವೇರಿ ಹರಿಯುವೆಡೆಯಲ್ಲಿ ತಮಿಳುನಾಡು 16,000 ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದರೆ ಇಂದು ಅದು 28,000 ಎಕರೆಗೆ ಹೆಚ್ಚಿದೆ. ಇದರಲ್ಲಿ ನ್ಯಾಯಾಲಯ ಗುರುತಿಸಿರುವುದು 24,000 ಎಕರೆ ಜಮೀನು ಮಾತ್ರ. ಹಾಗೆಯೇ ಕರ್ನಾಟಕದಲ್ಲಿ ಕಬ್ಬು ಬೆಳೆಯುವ 80,000 ಎಕರೆಯಲ್ಲಿ ನ್ಯಾಯಾಲಯ ಗುರುತಿಸಿರುವುದು ಕೇವಲ 40,000 ಎಕರೆ ಜಮೀನು ಮಾತ್ರ. ಇದರ ಅರ್ಥ ನ್ಯಾಯಾಲಯ ಗುರುತಿಸಿರುವುದನ್ನು ಹೊರತುಪಡಿಸಿದ ಜಮೀನಿಗೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲೇಬೇಕು.

• ಈ ನಿಟ್ಟಿನಲ್ಲಿ ನಮ್ಮ ರೈತರು ಸಾಧ್ಯವಾದಷ್ಟು ಕಡಿಮೆ ನೀರು ಬಳಕೆಯಾಗುವಂತಹ ಅದೇ ಸಮಯದಲ್ಲಿ ಹೆಚ್ಚು ಲಾಭ ತರುವಂತಹ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು.ರೈತರಿಗೆ ಬೆಳೆದ ಉತ್ಪನ್ನದ ಬೆಲೆಗಿ೦ತ ಬೆಳೆಯಲು
ಆಗುವ ವೆಚ್ಚವೇ ಹೆಚ್ಚುತ್ತಿದೆ.ಕಡಿಮೆ ನೀರು ಸಾಕಾಗುವ ಹೈಬ್ರೀಡ್ ಕಬ್ಬು ಕೂಡ ಒ೦ದು ಪಯಾ೯ಯ ಬೆಳೆ. ಹಾಗೆಯೇ ನಮ್ಮ ರೈತರಿಗೆ ಹೆಚ್ಚಿಗೆ ನೀರು ಬಳಸುವ ಬೆಳೆಗಳ ಬದಲಿಗೆ ಚಯಾ, ಮೊರಿಂಗಾ, ಫ್ಲಾಕ್ಸ್ ಸೀಡ್ ನಂತಹ ಬೆಳೆಗಳು ಹಾಗೂ ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯುವ ನಿಟ್ಟಿನಲ್ಲಿ ಪ್ರೇರೇಪಿಸುವ ಪ್ರಯತ್ನಗಳಾಗಬೇಕು. ಇಂತಹ ಬೆಳೆಗಳ ಬೀಜಗಳು ನಮ್ಮ ರೈತರಿಗೆ ಲಭ್ಯವಾಗುವಂತೆ ಮಾಡಬೇಕು.

• ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಜಲಸಂರಕ್ಷಣೆಯ ಪರಿಣಾಮಕಾರಿ ವಿಧಾನಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವ ಮೂಲಕ ಮಾತ್ರ ನೀರಿನ ಅಭಾವದಿಂದ ಪಾರಾಗಬಹುದು. ನಾನು ಸ೦ಸದೆಯಾಗಿದ್ದಾಗ ಸಹ ಬಹಳಷ್ಟು ರೈತರಿಗೆ ಅನುಕೂಲವಾಗುವ೦ತೆ ಹನಿ ನೀರಾವರಿ ಕಿಟ್ ಗಳನ್ನು ನೀಡಿದ್ದೆ.

• ನಮ್ಮ ರಾಜ್ಯದಲ್ಲಿ ಮಳೆ ಮಾರುತಗಳನ್ನು ತಡೆಹಿಡಿದು ಮಳೆನೀರನ್ನು ಹಿಡಿದಿಟ್ಟುಕೊಂಡು ಇಡೀ ನಾಡಿಗೆ ವರ್ಷಪೂರ್ತಿ ನೀರು ಪೂರೈಸುತ್ತಿರುವ ಪಶ್ಚಿಮ ಘಟ್ಟದ ಕಾಡುಗಳ ಸಂರಕ್ಷಣೆ ನಮ್ಮ ಆದ್ಯಕರ್ತವ್ಯವಾಗಬೇಕಿದೆ.

• ನೀರಿನ ಉಳಿಕೆ ಹಾಗೂ ಬಳಕೆಯಲ್ಲಿ ನಾವು ನೀರು ನಿರ್ವಹಣೆಯ ಉತ್ತಮ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯ.
ಇಂದು ತಡೆಯಿಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿರುವ ನಗರೀಕರಣ ಹಾಗೂ ಅರಣ್ಯನಾಶಗಳೆರಡೂ ಸೇರಿಕೊಂಡು ಮುಂದೆ ನಮಗೆ ನೀರಿನ ತೀವ್ರ ಅಭಾವ ತಲೆದೋರುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಪರಿಸ್ಥಿತಿ ಹೀಗಿರುವಾಗ ಮುಂದೆ ಯಾವ ನ್ಯಾಯಾಲಯಗಳೂ ನಮ್ಮ ನೆರವಿಗೆ ಬರಲು ವಿಫಲವಾಗಬಹುದು. ನ್ಯಾಯಾಲಯಗಳಲ್ಲಿ ನಾವು ವಸ್ತುಸ್ಥಿತಿಯನ್ನಾಧರಿಸಿ ವಾದ ಮಾಡುವುದಿಲ್ಲ. ಬದಲಾಗಿ ಅಫಿಡವಿಟ್ ಸಲ್ಲಿಸಿ ವಾದಿಸುತ್ತಿರುತ್ತೇವೆ. ಇಂತ ಪರಿಸ್ಥಿತಿಗಳನ್ನು ಸಮಗ್ರವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಈಗಿರುವ ದೋಷಪೂರಿತ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಗತ್ಯವನ್ನು ನಮ್ಮ ಜನಪ್ರತಿನಿಧಿಗಳು , ಕಾನೂನು ತಜ್ಞರು ಮನಗಾಣಬೇಕಿದೆ. ನಮ್ಮ ರಾಜ್ಯದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ನಡೆಸುತ್ತಿರುವ ಕಾನೂನು ತಜ್ಞರಾದ ಫಾಲಿ ಎಸ್ ನಾರಿಮನ್ ಅವರನ್ನು ನಾನು ಭೇಟಿಯಾಗಿದ್ದೇನೆ. ಅವರು ನಿಜಕ್ಕೂ ತಮ್ಮ ಅಪಾರ ಜ್ಞಾನ ಮತ್ತು ಜಲಸಂಬಂಧೀ ಕಾನೂನುಗಳ ತಿಳುವಳಿಕೆ ಹಾಗೂ ಅನುಭವಗಳ ಮೂಲಕ ಇದುವರೆಗೆ ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಮೂಲದಲ್ಲಿ ನಮ್ಮ ಕಾನೂನುಗಳು ಮತ್ತು ಒಪ್ದಂದಗಳಲ್ಲಿಯೇ ದೋಷವಿದ್ದಾಗ ಕೇವಲ ಕಾನೂನುಗಳನ್ನೇ ಆಧರಿಸಿ ವಾದ ಮಾಡಬೇಕಾದ ನ್ಯಾಯವಾದಿಗಳಿಗೂ ಮಿತಿಯಿರುತ್ತವೆ. ಇದನ್ನು ಪರಿಗಣಿಸದೇ ನಾವು ನ್ಯಾಯವಾದಿಗಳನ್ನೇ ದೂರುತ್ತಾ ಕೂರುವುದರಿಂದ ಪ್ರಯೋಜನವಿಲ್ಲ.

ಇದೆಲ್ಲ ಬದಿಗಿಟ್ಟು ನೋಡಿದರೆ ನೀರು ನಮ್ಮ ಬದುಕಿನ ವಿಷಯವೇ ಹೊರತು ರಾಜಕಾರಣ ಮಾಡುವ ವಿಷಯ ಅಲ್ಲ. ಹೀಗಾಗಿ ನೀರಿನ ಸಮಸ್ಯೆಯನ್ನು ನಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳದೇ ಇದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸೋಣ.

(ಇದು ರಮ್ಯಾ ಅವರ ಫೇಸ್ ಬುಕ್ ಪೋಸ್ಟ್ )

Writer - ರಮ್ಯಾ

contributor

Editor - ರಮ್ಯಾ

contributor

Similar News