ವ್ಯಾಪಾರೋದ್ಯಮ ಪರವಾನಿಗೆ ಆಂದೋಲನಕ್ಕೆ ಚಾಲನೆ
ಮಡಿಕೇರಿ, ಸೆ.22: ನಗರಸಭೆ ವ್ಯಾಪ್ತಿಯಲ್ಲಿನ ವ್ಯಾಪಾರ ಉದ್ದಿಮೆ ನಡೆಸುತ್ತಿರುವವರು ಕಡ್ಡಾಯವಾಗಿ ವ್ಯಾಪಾರೋದ್ಯಮ ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ. ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ವ್ಯಾಪಾರೋದ್ಯಮ ಪರವಾನಿಗೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಪುರಸಭೆ ಕಾಯ್ದೆ 1964ರ ಅಧಿನಿಯಮ ಸೆಕ್ಷನ್ 256ರಂತೆ ವ್ಯಾಪಾರ ಉದ್ದಿಮೆ ನಡೆಸುತ್ತಿರುವ ಎಲ್ಲಾ ವ್ಯಾಪಾರೋದ್ಯಮಿಗಳು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಆ ನಿಟ್ಟಿನಲ್ಲಿ ಸೆ.29ರೊಳಗೆ ವ್ಯಾಪಾರ ಉದ್ದಿಮೆಯ ಪರವಾನಿಗೆ ಪಡೆದುಕೊಳ್ಳಬೇಕು. ಉದ್ದಿಮೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದರ ಜೊತೆಗೆ ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ನಗರಾಭಿವೃದ್ಧಿಗೆ ಕೈಜೋಡಿಸುವಂತೆ ಕಾವೇರಮ್ಮ ಸೋಮಣ್ಣ ಕರೆ ನೀಡಿದರು.
ಮಡಿಕೇರಿ ನಗರವನ್ನು ಮತ್ತಷ್ಟು ಸ್ವಚ್ಛ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ನಗರದ ಜನತೆ ಕೈಜೋಡಿಸಬೇಕು. ಪ್ಲಾಸ್ಟಿಕ್ ತ್ಯಜಿಸಿ ಪರಿಸರವನ್ನು ಉಳಿಸಬೇಕು. ಹಸಿರು ಬೆಳೆಸಿ ನೀರನ್ನು ಮಿತವಾಗಿ ಬಳಸುವಂತಾಗಬೇಕು ಎಂದು ಹೇಳಿದರು.
ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮಾತನಾಡಿ, ವ್ಯಾಪಾರಸ್ಥರು ತಮ್ಮ ಉದ್ದಿಮೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಆನ್ಲೈನ್ ತಂತ್ರಾಂಶದ ಮೂಲಕ ಸೂಚಿತ ಡಿಜಿಟಲ್ ಸಹಿ ಉಳ್ಳ ಉದ್ದಿಮೆ ಪರವಾನಿಗೆಯನ್ನು ನಗರಸಭೆಯಿಂದ ಪಡೆದುಕೊಳ್ಳುವಂತೆ ತಿಳಿಸಿದರು. ನಗರಸಭೆೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಮತ್ತಿತರರಿದ್ದರು.