ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹಿನ್ನೆಲೆ
ಅಂಕೋಲಾ, ಸೆ.26: ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗವೆಂದೇ ಗುರುತಿಸಿಕೊಂಡಿರುವ ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿದ ಶಿಫಾರಸಿನಲ್ಲಿ ಇನ್ನೂ 5 ವಿಷಯಗಳ ಕುರಿತು ಕೂಲಂಕಷವಾಗಿ ಮಾಹಿತಿಯನ್ನು ಕಲೆಹಾಕಿ ಕಳುಹಿಸುವಂತೆ ಕೇಂದ್ರ ಕಡತವನ್ನು ವಾಪಸ್ ಮಾಡಿತ್ತು. ಅದರಂತೆ ಈಗ ಅಧ್ಯಯನ ತಂಡ ಜಿಲ್ಲೆಯಲ್ಲಿ ಹಾಲಕ್ಕಿ ಒಕ್ಕಲಿಗರ ಕುರಿತು ಮಾಹಿತಿ ಕಲೆ ಹಾಕಿದೆ.
ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ಬುಡಕಟ್ಟು ಅಧ್ಯಯನ ಸಂಸ್ಥೆಯ ನಿರ್ದೇಶಕ ಟಿ.ಪಿ. ಬಸವನಗೌಡ ಈ ಅಧ್ಯಯನ ತಂಡದ ಮುಖ್ಯಸ್ಥರಾಗಿದ್ದು, ಬೆಳಂಬಾರ, ಬಡಗೇರಿ, ಗೋಕರ್ಣ ಸೇರಿದಂತೆ ಹಾಲಕ್ಕಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕೇಂದ್ರಕ್ಕೆ ಸಲ್ಲಿಸಬೇಕಾದ 5 ಅಂಶಗಳ ಕುರಿತು ಅಧ್ಯಯನ ನಡೆಸಿದರು.
ಅಧ್ಯಯನ ತಂಡಕ್ಕೆ ಹಾಲಕ್ಕಿಗಳ ಕುರಿತು ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಕಾರ್ಯದರ್ಶಿ ಎಂ.ಎಚ್. ಗೌಡ, ಕೋಶಾಧ್ಯಕ್ಷ ರಮೇಶ ಗೌಡ ಬಿಣಗಾ, ಪ್ರಮುಖರಾದ ಈಶ್ವರ ಗೌಡ ಭಾವಿಕೊಡ್ಲ, ವಸಂತ ಗೌಡ, ಕಾಶಿನಾಥ ಗೌಡ, ಲಕ್ಷ್ಮೀ ಬುದ್ದು ಗೌಡ ಇತರರು ಮಾಹಿತಿ ಒದಗಿಸಿದರು.